ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜನವರಿ 18ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಯಾರು ವಿನ್ನರ್ ಆಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಈ ಮಧ್ಯೆ, ಸೀಸನ್ನ ಅತ್ಯಂತ ಮಹತ್ವದ ಮತ್ತು ಕೊನೆಯ ಕ್ಯಾಪ್ಟನ್ ಆಯ್ಕೆಯ ಪ್ರಕ್ರಿಯೆ ಭಾರಿ ಸಂಚಲನ ಮೂಡಿಸಿದೆ.
ಈ ವಾರದ ಕ್ಯಾಪ್ಟನ್ಸಿ ರೇಸ್ಗಾಗಿ ಬಿಗ್ ಬಾಸ್ ಮನೆಯಲ್ಲಿ ವಿಶೇಷ ಟಾಸ್ಕ್ ನೀಡಲಾಗಿತ್ತು. ಆರಂಭದಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಾಶಿಕಾ ಶೆಟ್ಟಿ ಮತ್ತು ಧನುಷ್ ಈ ನಾಲ್ವರು ಸ್ಪರ್ಧಿಗಳು ಕ್ಯಾಪ್ಟನ್ ಆಗಲು ಪೈಪೋಟಿ ನಡೆಸಿದ್ದರು. ಆದರೆ ಹಂತ ಹಂತವಾಗಿ ನಡೆದ ಆಟದಲ್ಲಿ ಗಿಲ್ಲಿ ನಟ ಮತ್ತು ರಾಶಿಕಾ ಆಟದಿಂದ ಹೊರಗುಳಿದರು. ಅಂತಿಮವಾಗಿ ಉಳಿದುಕೊಂಡಿದ್ದು ಅಶ್ವಿನಿ ಗೌಡ ಮತ್ತು ಧನುಷ್ ಮಾತ್ರ.
ಅಶ್ವಿನಿ ಮತ್ತು ಧನುಷ್ ನಡುವೆ ನಡೆದ ಅಂತಿಮ ಟಾಸ್ಕ್ನಲ್ಲಿ ಭಾರಿ ಪೈಪೋಟಿ ಕಂಡುಬಂತು. ಈ ಆಟದಲ್ಲಿ ಧನುಷ್ ಅವರು ಅದ್ಭುತವಾಗಿ ಆಡಿ ಗೇಮ್ ಗೆದ್ದಿದ್ದಾರೆ. ಸೀಸನ್ನ ಕೊನೆಯ ಕ್ಯಾಪ್ಟನ್ ಪಟ್ಟ ತನಗೇ ದಕ್ಕಿತು ಎಂದು ಧನುಷ್ ಸಂಭ್ರಮಿಸುತ್ತಿದ್ದರು, ಉಳಿದ ಮನೆಯ ಸದಸ್ಯರು ಅವರಿಗೆ ಅಭಿನಂದನೆ ಸಲ್ಲಿಸಿದರು. ಆದರೆ, ಬಿಗ್ ಬಾಸ್ ನೀಡಿದ ಒಂದು ಸಣ್ಣ ಟ್ವಿಸ್ಟ್ ಧನುಷ್ ಮುಖದಲ್ಲಿನ ಆತಂಕ ಮೂಡಿಸಿದೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಧನುಷ್ ಆಟದ ಬಗ್ಗೆ ಬಿಗ್ ಬಾಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧನುಷ್ ಅವರು ಟಾಸ್ಕ್ ಆಡುವಾಗ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಜೊತೆಗೆ ಶಿಸ್ತಿನಿಂದ ಆಟವಾಡಿಲ್ಲ ಎಂಬ ಅಂಶವನ್ನು ಬಿಗ್ ಬಾಸ್ ಹೇಳಿದ್ದಾರೆ. ಧನುಷ್ ಅವರು ಆಟವನ್ನು ಗೆದ್ದಿದ್ದರೂ, ಅವರು ಪಾಲಿಸಿದ ವಿಧಾನ ಸರಿಯಾಗಿದೆಯೇ ? ಎಂದು ಬಿಗ್ ಬಾಸ್ ಮನೆಯ ಇತರ ಸದಸ್ಯರನ್ನೇ ಪ್ರಶ್ನೆ ಮಾಡಿದ್ದಾರೆ. ಇದರಿಂದ ಧನುಷ್ ಗೆಲುವಿನ ಮೇಲೆ ಅನುಮಾನದ ಮೂಡಿದೆ.
ಇನ್ನೊಂದೆಡೆ, ಅಶ್ವಿನಿ ಗೌಡ ಅವರಿಗೆ ಈ ಬಾರಿ ಕ್ಯಾಪ್ಟನ್ ಆಗಿ ತೋರಿಸು ಎಂದು ಗಿಲ್ಲಿ ನಟ ಸವಾಲು ಹಾಕಿದ್ದರು. ಧನುಷ್ ಅವರ ಗೆಲುವು ಅನರ್ಹಗೊಂಡರೆ, ಆ ಅವಕಾಶ ಅಶ್ವಿನಿ ಪಾಲಾಗುವ ಸಾಧ್ಯತೆ ಇದೆ. ಒಂದು ವೇಳೆ ಬಿಗ್ ಬಾಸ್ ಧನುಷ್ ಅವರ ಗೆಲುವನ್ನು ರದ್ದುಗೊಳಿಸಿದರೆ, ಈ ಸೀಸನ್ನ ಕೊನೆಯ ಕ್ಯಾಪ್ಟನ್ ಪಟ್ಟ ಅಶ್ವಿನಿ ಪಾಲಾಗಲಿದೆಯೇ ಅಥವಾ ಹೊಸದಾಗಿ ಟಾಸ್ಕ್ ನೀಡಲಾಗುತ್ತದೆಯೇ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳಬೇಕಿದೆ.
