ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ತಮ್ಮ ಭೂಮಿಯನ್ನು ರಕ್ಷಿಸಲು ಕೈಗೊಂಡಿರುವ ಹೋರಾಟವು ಈಗ ತೀವ್ರ ಸ್ವರೂಪ ಪಡೆದಿದೆ. 1777 ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸರ್ಕಾರ ವಶಪಡಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳನ್ನು ಖಂಡಿಸಿ, ರೈತರು ಸರ್ಕಾರಕ್ಕೆ ” ಅಂತಿಮ ನೋಟೀಸ್” ನೀಡಿದ್ದಾರೆ.ತಮ್ಮ ಜಮೀನನ್ನು ಉಳಿಸಿಕೊಳ್ಳಲು “ಪ್ರಾಣ ಬಿಟ್ಟರೂ ಮಣ್ಣನ್ನು ಮಾರಿಕೊಳ್ಳುವುದಿಲ್ಲ” ಎಂಬ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ.
ಹೋರಾಟದ ಹಿನ್ನೆಲೆ:
2022ರ ಜನವರಿಯಲ್ಲಿ ಆಗಿನ ಬಿಜೆಪಿ ಸರ್ಕಾರ, ಚನ್ನರಾಯಪಟ್ಟಣದ 13 ಗ್ರಾಮಗಳ 1777 ಎಕರೆ ಭೂಮಿಯನ್ನು ಕಂಪನಿಗಳಿಗೆ ಮಾರಲು ಅಧಿಸೂಚನೆ ಹೊರಡಿಸಿತ್ತು. ಈ ಭೂಮಿಯಲ್ಲಿ 800 ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕರು ಕೃಷಿ, ಹೈನುಗಾರಿಕೆ, ಕೋಳಿಸಾಕಣೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ. ಈ ಭೂಮಿಯಲ್ಲಿ ಅವರ ಪೂರ್ವಿಕರ ಸಮಾಧಿಗಳಿದ್ದು, ತೋಟಗಳನ್ನು ಬೆಳೆಸಿ, ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಗಾಗಲೇ ಸುತ್ತಲಿನ 6000 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ಮತ್ತು ಕಂಪನಿಗಳಿಗೆ ಕೊಟ್ಟಿದ್ದು, ಭೂಮಿ ಕಳೆದುಕೊಂಡವರ ಸ್ಥಿತಿಯನ್ನು ಕಂಡ ರೈತರು, ತಮ್ಮ ಜಮೀನನ್ನು ರಕ್ಷಿಸಿಕೊಳ್ಳಲು ಹೋರಾಟಕ್ಕಿಳಿದಿದ್ದಾರೆ.
ಸರ್ಕಾರದ ಭರವಸೆ: ಈಗ ಎಲ್ಲಿ?
2022ರ ಸೆಪ್ಟೆಂಬರ್ನಲ್ಲಿ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಹೋರಾಟದ ಪೆಂಡಾಲಿಗೆ ಭೇಟಿ ನೀಡಿ, “ಅಧಿಕಾರಕ್ಕೆ ಬಂದರೆ ಈ ಯೋಜನೆ ರದ್ದುಗೊಳಿಸುತ್ತೇನೆ” ಎಂದು ಭರವಸೆ ನೀಡಿದ್ದರು. ಆ ಭರವಸೆಯಿಂದಾಗಿ 2023ರ ಚುನಾವಣೆಯಲ್ಲಿ ರೈತರು ಕಾಂಗ್ರೆಸ್ಗೆ ಬೆಂಬಲ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಸರ್ಕಾರ ಯಾವುದೇ ಗಟ್ಟಿ ತೀರ್ಮಾನ ಕೈಗೊಂಡಿಲ್ಲ. ಇದೀಗ ಕೆ.ಹೆಚ್.ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್ರಂತಹ ನಾಯಕರು ಭೂಸ್ವಾಧೀನಕ್ಕೆ ಸಮರ್ಥನೆ ನೀಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
‘ದೇವನಹಳ್ಳಿ ಚಲೋ’ ಕಾರಿಕೌದಲ್ಲಿ ಸಾವಿರಾರು ರೈತರು, ಮಹಿಳೆಯರು, ಯುವಕರು ಜಮಾಯಿಸಿದ್ದು, ತಮ್ಮ ಗ್ರಾಮದ ಮಣ್ಣನ್ನು ಗಿಡಕ್ಕೆ ಸುರಿಯುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು.
ರೈತರು ಸರ್ಕಾರಕ್ಕೆ 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ. ಸಷ್ಟ ಉತ್ತರ ಬರದಿದ್ದರೆ, ತಾಲೂಕು ಕಛೇರಿಯನ್ನು ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ. “ಗಾಂಧಿಯವರ ಹಾದಿಯಲ್ಲಿ ತೀವ್ರ ಹೋರಾಟಕ್ಕಿಳಿಯುತ್ತೇವೆ. ಸರ್ಕಾರ ನಮ್ಮನ್ನು ಜೈಲಿಗೆ ಹಾಕಿದರೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ” ಎಂದು ಘೋಷಿಸಿದ್ದಾರೆ.