ದೇಶಾದ್ಯಂತ ಗಣೇಶೋತ್ಸವ ಸಂಭ್ರಮ: ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ!

ಯ್ಯ (11)

ಗಣೇಶ ಚತುರ್ಥಿ ಸಂಭ್ರಮ ದೇಶಾದ್ಯಂತ ಮನೆ ಮಾಡಿದ್ದು, ಎಲ್ಲೆಡೆ ‘ಗಣಪತಿ ಬಪ್ಪಾ ಮೋರಯಾ’ ಘೋಷಣೆ ಮೊಳಗುತ್ತಿದೆ. ವಿಘ್ನ ವಿನಾಯಕನ ಆರಾಧನೆಯ ಈ ಹಬ್ಬವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ಪ್ರಮುಖ ನಗರಗಳ ಗಣೇಶ ಪೆಂಡಾಲ್‌ಗಳು ಹಾಗೂ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ.

ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದ್ದು, ಬೃಹತ್ ಪೆಂಡಾಲ್‌ಗಳು ಭಕ್ತರನ್ನು ಆಕರ್ಷಿಸುತ್ತಿವೆ. ಹಲವು ಕಡೆಗಳಲ್ಲಿ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ವಿಭಿನ್ನ ಥೀಮ್‌ಗಳ ಮೂಲಕ ಗಣೇಶೋತ್ಸವಕ್ಕೆ ಹೊಸ ಮೆರುಗು ನೀಡಲಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ಘಟನೆಗಳನ್ನು ಪ್ರತಿಬಿಂಬಿಸುವ ಪೆಂಡಾಲ್‌ಗಳು ಗಮನ ಸೆಳೆಯುತ್ತಿವೆ.

ಲಾಲ್‌ಬಾಗ್‌ಚಾ ರಾಜನ ದರ್ಶನಕ್ಕೆ ಭಕ್ತಸಾಗರ

10 ದಿನಗಳ ಗಣೇಶೋತ್ಸವದ ಪ್ರಮುಖ ಕೇಂದ್ರವಾಗಿರುವ ಮುಂಬೈನ ಪ್ರಸಿದ್ಧ ‘ಲಾಲ್‌ಬಾಗ್‌ಚಾ ರಾಜ’ ಗಣಪತಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ‘ಗಣಪತಿ ಬಪ್ಪಾ ಮೋರಯಾ’ ಘೋಷಣೆಗಳ ನಡುವೆ ಭಕ್ತರು ವಿಘ್ನ ವಿನಾಶಕನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಮಹಾರಾಷ್ಟ್ರದ ನಾಗಪುರದಲ್ಲಿರುವ ಪ್ರಸಿದ್ಧ ಶ್ರೀ ಗಣೇಶ ಮಂದಿರ ಟೆಕ್ಡಿಯಲ್ಲಿ ಗಣೇಶ ಚತುರ್ಥಿ ಅಂಗವಾಗಿ ಸೋಮವಾರ ಮುಂಜಾನೆ ವಿಶೇಷ ‘ಮಂಗಳ ಆರತಿ’ ನೆರವೇರಿಸಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಗಣೇಶನ ದರ್ಶನ ಪಡೆದರು.

ಜೈಪುರ, ತಮಿಳುನಾಡಿನಲ್ಲೂ ಭಕ್ತರ ದಂಡು

ರಾಜಸ್ಥಾನದ ಜೈಪುರದ ಪ್ರಸಿದ್ಧ ಮೋತಿ ಡುಂಗ್ರಿ ಗಣೇಶ ದೇವಾಲಯದಲ್ಲೂ ಮುಂಜಾನೆಯಿಂದಲೇ ಭಕ್ತರ ದಟ್ಟಣೆ ಕಂಡುಬಂದಿದೆ. ಬೆಳಗ್ಗೆ 5 ಗಂಟೆಗೆ ‘ಮಂಗಳ ಆರತಿ’ಯೊಂದಿಗೆ ಭಕ್ತರಿಗೆ ಗಣೇಶನ ದರ್ಶನ ಆರಂಭವಾಗಿದ್ದು, ರಾತ್ರಿ 11.40ಕ್ಕೆ ನಡೆಯುವ ‘ಶಯನ ಆರತಿ’ವರೆಗೆ ನಿರಂತರವಾಗಿ ಭಕ್ತರಿಗೆ ಪೂಜಾ ಅವಕಾಶ ಕಲ್ಪಿಸಲಾಗಿದೆ.

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪಿಳ್ಳಯಾರ್‌ಪಟ್ಟಿಯ ಐತಿಹಾಸಿಕ ಕರ್ಪಗ ವಿನಾಯಕರ್ ದೇವಾಲಯದಲ್ಲೂ ಸಾವಿರಾರು ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ವಿಶೇಷ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ಬೆಂಗಳೂರಿನಲ್ಲೂ ಗಣೇಶೋತ್ಸವದ ಸಂಭ್ರಮ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದೆ. ಬಸವನಗುಡಿಯ ಪ್ರಸಿದ್ಧ ಶ್ರೀ ದೊಡ್ಡ ಗಣಪತಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಗರದ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಗಣೇಶೋತ್ಸವಕ್ಕೆ ರಾಜಕೀಯ ಸ್ಪರ್ಶ

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಗುಯಾಟಿಯಲ್ಲಿ ಗಣೇಶೋತ್ಸವಕ್ಕೆ ಸಾಮಾಜಿಕ-ರಾಜಕೀಯ ರಂಗು ನೀಡಲಾಗಿದೆ. ಎಕ್ಸಿಕ್ಯೂಟಿವ್ ಪ್ಯಾಲೇಸ್ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್ ‘ಪರಿವರ್ತನೆ–ಡಬಲ್ ಎಂಜಿನ್ ಸರ್ಕಾರದೊಂದಿಗೆ ಅಭಿವೃದ್ಧಿಶೀಲ ಬಂಗಾಳದತ್ತ’ ಎಂಬ ಥೀಮ್‌ನಲ್ಲಿ ಪೆಂಡಾಲ್ ನಿರ್ಮಿಸಿದೆ.

ಪೆಂಡಾಲ್‌ನಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರತಿಕೃತಿ ನಿರ್ಮಿಸಲಾಗಿದ್ದು, ‘ನಮಗೆ ನ್ಯಾಯ ಬೇಕು’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟಿಸುತ್ತಿರುವ ವೈದ್ಯರ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸಾಧ್ಯವಾಗಬಹುದಾದ ಆಧುನಿಕ ಮೂಲಸೌಕರ್ಯ ಹಾಗೂ ಕೈಗಾರಿಕಾ ಅಭಿವೃದ್ಧಿಯ ಚಿತ್ರಣಗಳನ್ನೂ ಪೆಂಡಾಲ್‌ನಲ್ಲಿ ಅಳವಡಿಸಲಾಗಿದೆ.

Exit mobile version