ಗಣೇಶ ಚತುರ್ಥಿ 2026 ಯಾವಾಗ? ಪೂಜಾ ಮುಹೂರ್ತ, ವಿಸರ್ಜನೆ ದಿನಾಂಕ ಇಲ್ಲಿದೆ ಮಾಹಿತಿ!

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (62)

ಮತ್ತೊಮ್ಮೆ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಘ್ನ ವಿನಾಶಕ ಗಣಪತಿ ಬಪ್ಪನ ಆಗಮನಕ್ಕಾಗಿ ಮನೆಗಳು, ಬೀದಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಮಂಟಪಗಳು ಸಜ್ಜಾಗುತ್ತಿವೆ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ವಿಶೇಷ ಪೂಜೆ, ಭಜನೆ, ಆರತಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ.

ಗಣೇಶ ಚತುರ್ಥಿ 2026 ಯಾವಾಗ?

ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 14, 2026ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಇದೇ ದಿನ ಮನೆ ಹಾಗೂ ಸಾರ್ವಜನಿಕ ಮಂಟಪಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಸೆಪ್ಟೆಂಬರ್ 14ರ ಬೆಳಗ್ಗೆ 7:06ಕ್ಕೆ ಚತುರ್ಥಿ ತಿಥಿ ಆರಂಭವಾಗಲಿದ್ದು, ಸೆಪ್ಟೆಂಬರ್ 15ರ ಬೆಳಗ್ಗೆ 7:44ಕ್ಕೆ ಮುಕ್ತಾಯವಾಗಲಿದೆ. ಗಣೇಶ ಪೂಜೆಗೆ ಸೆಪ್ಟೆಂಬರ್ 14ರಂದು ಬೆಳಗ್ಗೆ 11:02ರಿಂದ ಮಧ್ಯಾಹ್ನ 1:31ರವರೆಗೆ ಶುಭ ಸಮಯವಿದೆ.

ಗಣೇಶ ಚತುರ್ಥಿಯಂದು ಬೆಳಗ್ಗೆ 9:06ರಿಂದ ರಾತ್ರಿ 8:04ರವರೆಗೆ ಚಂದ್ರ ದರ್ಶನವನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ರಾಹುಕಾಲ ಬೆಳಗ್ಗೆ 7:38ರಿಂದ 9:11ರವರೆಗೆ ಇರಲಿದೆ.

ಗಣೇಶ ಚತುರ್ಥಿಯ ಮಹತ್ವ

ಗಣೇಶನನ್ನು ವಿಘ್ನ ನಿವಾರಕ, ಬುದ್ಧಿ ಮತ್ತು ಜ್ಞಾನದ ದೇವರು ಎಂದು ನಂಬಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಆರಂಭಿಸುವ ಮುನ್ನ ಗಣೇಶನನ್ನು ಸ್ಮರಿಸುವುದು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ಗಣೇಶನಿಗೆ ಗಜಾನನ, ಏಕದಂತ, ವಕ್ರತುಂಡ, ಸಿದ್ಧಿವಿನಾಯಕ ಸೇರಿದಂತೆ ಹಲವು ಹೆಸರುಗಳಿವೆ.

ಗಣೇಶ ಚತುರ್ಥಿ ಕೇವಲ ಧಾರ್ಮಿಕ ಆಚರಣೆಯಾಗಿರದೆ ಕುಟುಂಬ ಹಾಗೂ ಸಮಾಜವನ್ನು ಒಗ್ಗೂಡಿಸುವ ಹಬ್ಬವೂ ಆಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವಕ್ಕೆ ಉತ್ತೇಜನ ನೀಡುವ ಮೂಲಕ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು.

ಗಣೇಶ ಪೂಜೆಯ ಪ್ರಮುಖ ವಿಧಿಗಳು

ಗಣೇಶ ಚತುರ್ಥಿಯಂದು ಆವಾಹನ, ಪ್ರಾಣ ಪ್ರತಿಷ್ಠೆ ಹಾಗೂ ಷೋಡಶೋಪಚಾರ ಪೂಜೆಯನ್ನು ನೆರವೇರಿಸಲಾಗುತ್ತದೆ. ಗಣೇಶನಿಗೆ ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಿ, ಹೂವು, ಅಕ್ಷತೆ, ಚಂದನ, ಸಿಂಧೂರ ಹಾಗೂ ವಸ್ತ್ರಗಳನ್ನು ಅರ್ಪಿಸಲಾಗುತ್ತದೆ. ಮೋದಕ, ತೆಂಗಿನಕಾಯಿ, ವೀಳ್ಯದೆಲೆ ಸೇರಿದಂತೆ ವಿವಿಧ ನೈವೇದ್ಯಗಳನ್ನು ಸಮರ್ಪಿಸಿ ಮಂತ್ರ, ಸ್ತೋತ್ರ ಹಾಗೂ ಆರತಿ ಸಲ್ಲಿಸಲಾಗುತ್ತದೆ.

ಗಣೇಶ ವಿಸರ್ಜನೆ ಯಾವಾಗ?

ಭಕ್ತರು ತಮ್ಮ ಸಂಪ್ರದಾಯದಂತೆ ಗಣೇಶ ಮೂರ್ತಿಯನ್ನು ಒಂದೂವರೆ ದಿನ, ಮೂರನೇ, ಐದನೇ ಅಥವಾ ಏಳನೇ ದಿನ ವಿಸರ್ಜಿಸಬಹುದು. ಈ ಬಾರಿ ಪ್ರಮುಖ ವಿಸರ್ಜನೆ ದಿನಾಂಕಗಳು ಸೆಪ್ಟೆಂಬರ್ 15, 16, 18 ಹಾಗೂ 20 ಆಗಿವೆ. ಅನಂತ ಚತುರ್ದಶಿ ಸೆಪ್ಟೆಂಬರ್ 25ರಂದು ನಡೆಯಲಿದ್ದು, ಅಂದು 10ನೇ ದಿನದ ಗಣೇಶ ವಿಸರ್ಜನೆ ನಡೆಯಲಿದೆ.

ವಿಸರ್ಜನೆಯ ವೇಳೆ ಭಕ್ತರು ಮೆರವಣಿಗೆ ನಡೆಸಿ, ಭಜನೆ ಹಾಗೂ ಆರತಿಯೊಂದಿಗೆ ಗಣಪತಿಗೆ ವಿದಾಯ ಹೇಳುತ್ತಾರೆ. ಮುಂದಿನ ವರ್ಷ ಮತ್ತೆ ಗಣಪತಿ ಮನೆಗೆ ಹಾಗೂ ಮಂಟಪಗಳಿಗೆ ಆಗಮಿಸಲಿ ಎಂಬ ಪ್ರಾರ್ಥನೆಯೊಂದಿಗೆ ವಿಸರ್ಜನೆ ನೆರವೇರಿಸಲಾಗುತ್ತದೆ.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಆದ್ಯತೆ

ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದು ಇಂದಿನ ಅಗತ್ಯವಾಗಿದೆ. ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವುದು, ಹೂವು, ಬಟ್ಟೆ ಹಾಗೂ ನೈಸರ್ಗಿಕ ವಸ್ತುಗಳಿಂದ ಅಲಂಕಾರ ಮಾಡುವುದು ಉತ್ತಮ. ಪ್ಲಾಸ್ಟಿಕ್ ಮತ್ತು ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಬಳಸದೆ, ಜೈವಿಕವಾಗಿ ಕರಗುವ ವಸ್ತುಗಳಿಗೆ ಆದ್ಯತೆ ನೀಡುವ ಮೂಲಕ ಭಕ್ತಿಯ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಸಾರಬಹುದು.

Exit mobile version