ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಶುಕ್ರವಾರ ಮತ್ತೊಂದು ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದು, ಅದು ಪಶ್ಚಿಮ ಬಂಗಾಳ ಮೂಲದ ಸರ್ವೇಯರ್ ರಾಕೇಶ್ ಗುಚೈತ್ ಅವರದ್ದು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಮೃತದೇಹವನ್ನು ಮೀನಾಕ್ಷಿ ಸೇತುವೆ ಸಮೀಪ ಪತ್ತೆಹಚ್ಚಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ವೈತಿರಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಹಿಮಾಚಲ ಪ್ರದೇಶದ ನಿರ್ಮಾಣ ವ್ಯವಸ್ಥಾಪಕ ವಿಕ್ರಮ್ ರಾಣಾ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ದುರಂತ ಸಂಭವಿಸಿದ ಬಳಿಕ ನಾಲ್ಕನೇ ದಿನವೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಶಿಬಿರ ಹಾಕಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣು ತೆರವುಗೊಳಿಸಿ, ಅವಶೇಷಗಳಡಿ ಸಿಲುಕಿರುವವರ ಪತ್ತೆಗೆ ಶೋಧ ತೀವ್ರಗೊಳಿಸಲಾಗಿದೆ. ಗುರುವಾರದವರೆಗೆ ಸ್ಥಳದಿಂದ ಆರು ಮೃತದೇಹಗಳನ್ನು ಹೊರತೆಗೆಯಲಾಗಿತ್ತು.
ಜುಲೈ 7ರಂದು ವಯನಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ಕೈಗೆತ್ತಿಕೊಳ್ಳಲಾಗಿರುವ ಅನಕ್ಕೊಂಪೊಯಿಲ್–ಮೇಪ್ಪಾಡಿ ಸುರಂಗ ಮಾರ್ಗ ಯೋಜನೆ ಸಮೀಪ ಈ ದುರಂತ ಸಂಭವಿಸಿತ್ತು. ಸುರಂಗ ನಿರ್ಮಾಣ ಕಾಮಗಾರಿಯಿಂದ ರಾಶಿ ಹಾಕಲಾಗಿದ್ದ ಮಣ್ಣು ಭಾರೀ ಮಳೆಯಿಂದ ಏಕಾಏಕಿ ಕುಸಿದು ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದಾಗಿ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ಮತ್ತು ಸಿಬ್ಬಂದಿ ಮಣ್ಣಿನಡಿ ಸಿಲುಕಿದ್ದರು.
ಘಟನೆಯಲ್ಲಿ ಗಾಯಗೊಂಡಿದ್ದ 10 ಮಂದಿಯಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಚಿವ ಪಿ.ಎ. ಮೊಹಮ್ಮದ್ ಸಿದ್ದಿಕಿ ಮಾಹಿತಿ ನೀಡಿದ್ದಾರೆ.
ದುರಂತದ ಸ್ಥಳಕ್ಕೆ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ಪಿಣರಾಯಿ ವಿಜಯನ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಪಕ್ಷದ ನಾಯಕರು ಎಂ.ವಿ. ಗೋವಿಂದನ್ ಮತ್ತು ಎಂ.ವಿ. ಜಯರಾಜನ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ವಿಜಯನ್ ಪರಿಹಾರ ಕೇಂದ್ರ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದಕ್ಕೂ ಮುನ್ನ ಬುಧವಾರ ಮುಖ್ಯಮಂತ್ರಿ ವಿ.ಡಿ. ಸತೀಶನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಭೂಕುಸಿತವನ್ನು ಕೇರಳ ಸರ್ಕಾರ “ಮಾನವ ನಿರ್ಮಿತ ದುರಂತ” ಎಂದು ಪರಿಗಣಿಸಿದ್ದು, ಸುರಂಗ ಕಾಮಗಾರಿ ಹಾಗೂ ಮಣ್ಣು ರಾಶಿ ನಿರ್ವಹಣೆಯಲ್ಲಿ ನಡೆದ ಲೋಪಗಳ ಬಗ್ಗೆ ತನಿಖೆ ನಡೆಯಲಿದೆ. ಭಾರೀ ಮಳೆಯ ನಡುವೆಯೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಕಾಣೆಯಾಗಿರುವ ಕೊನೆಯ ವ್ಯಕ್ತಿಯ ಪತ್ತೆಗೆ ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
