‘ಜನ ಗಣ ಮನ’ ಜೊತೆಗೆ ‘ವಂದೇ ಮಾತರಂ’ಗೂ ಸಮಾನ ಕಾನೂನು: ಕೇಂದ್ರದ ಹೊಸ ಪ್ರಸ್ತಾವನೆ

Untitled design (30)

ನವದೆಹಲಿ, ಜುಲೈ 18: ರಾಷ್ಟ್ರಗೀತೆ ‘ಜನ ಗಣ ಮನ’ ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಶಿಕ್ಷೆ ವಿಧಿಸುವಂತೆ, ಇನ್ನು ಮುಂದೆ ‘ವಂದೇ ಮಾತರಂ’ ಗಾಯನಕ್ಕೂ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಪ್ರಸ್ತಾವನೆ ಹೊಂದಿರುವ ಮಹತ್ವದ ವಿಧೇಯಕವನ್ನು ಕೇಂದ್ರ ಸರ್ಕಾರ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲು ಸಜ್ಜಾಗಿದೆ.

ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ವಿಧೇಯಕ–2026’ ಅನ್ನು ಮಂಡಿಸಲಿದೆ. ಗೃಹ ಸಚಿವ ಅಮಿತ್ ಶಾ ಅವರು ಈ ವಿಧೇಯಕವನ್ನು ರಾಜ್ಯಸಭೆಯ ಕಾರ್ಯಸೂಚಿಯಲ್ಲಿ ಪರಿಶೀಲನೆ ಹಾಗೂ ಅಂಗೀಕಾರಕ್ಕಾಗಿ ಪಟ್ಟಿ ಮಾಡಿದ್ದಾರೆ.

ವಿಧೇಯಕದ ಪ್ರಕಾರ, ಯಾರಾದರೂ ಉದ್ದೇಶಪೂರ್ವಕವಾಗಿ ‘ಜನ ಗಣ ಮನ’ ಅಥವಾ ‘ವಂದೇ ಮಾತರಂ’ ಗಾಯನಕ್ಕೆ ಅಡ್ಡಿಪಡಿಸಿದರೆ, ಅಥವಾ ಗಾಯನ ನಡೆಯುತ್ತಿರುವ ಸಭೆಯಲ್ಲಿ ಅಶಾಂತಿ ಅಥವಾ ಅಡಚಣೆ ಉಂಟು ಮಾಡಿದರೆ, ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

ಕೇಂದ್ರ ಸರ್ಕಾರದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿ ವಿಧೇಯಕಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ. ಇತ್ತೀಚೆಗೆ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಅನ್ನು ಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸಿದ ಬಳಿಕ, ಅದಕ್ಕೆ ಕಾನೂನುಬದ್ಧ ರಕ್ಷಣೆಯನ್ನೂ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗುತ್ತಿದೆ.

ಈ ಕ್ರಮದ ಹಿನ್ನೆಲೆಯಲ್ಲಿರುವ ಐತಿಹಾಸಿಕ ಉಲ್ಲೇಖವನ್ನೂ ಸರ್ಕಾರ ಪ್ರಸ್ತಾಪಿಸಿದೆ. 1950ರ ಜನವರಿ 24ರಂದು ನಡೆದ ಸಂವಿಧಾನ ಸಭೆಯಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಬಂಕಿಮಚಂದ್ರ ಚಟರ್ಜಿ ರಚಿಸಿದ ‘ವಂದೇ ಮಾತರಂ’ ಗೀತೆಗೆ ‘ಜನ ಗಣ ಮನ’ ಗೀತೆಯಷ್ಟೇ ಗೌರವ ಮತ್ತು ಸಮಾನ ಸ್ಥಾನಮಾನ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕೇಂದ್ರ ಸರ್ಕಾರದ ಪ್ರಕಾರ, ಪ್ರಸ್ತುತ ‘ವಂದೇ ಮಾತರಂ’ ಗಾಯನಕ್ಕೆ ಅವಮಾನ ಅಥವಾ ಅಡ್ಡಿಪಡಿಸುವುದನ್ನು ತಡೆಯಲು ಪ್ರತ್ಯೇಕ ಕಾನೂನುಬದ್ಧ ನಿಬಂಧನೆ ಇಲ್ಲ. ಈ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಹೊಸ ತಿದ್ದುಪಡಿ ವಿಧೇಯಕವನ್ನು ತರಲಾಗುತ್ತಿದೆ.

ಈ ವಿಧೇಯಕ ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆದ ನಂತರವೇ ಕಾನೂನಾಗಿ ಜಾರಿಗೆ ಬರಲಿದ್ದು, ರಾಷ್ಟ್ರೀಯ ಗೌರವಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.

Exit mobile version