ತಾಯಿ-ಪತ್ನಿಯನ್ನು ಕೊಂದು ಅವರ ಮಾಂಸ ತಿಂದ ಪಾಪಿ

Untitled design 2026 01 13T225407.674

ಉತ್ತರ ಪ್ರದೇಶ: ಮನುಷ್ಯನ ಕ್ರೌರ್ಯಕ್ಕೆ ಮಿತಿಯೇ ಇಲ್ಲವೇ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಹೆತ್ತ ತಾಯಿ ಮತ್ತು ಹೆಂಡತಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಲ್ಲದೆ, ಜನರ ಎದುರೇ ಅವರ ದೇಹದಿಂದ ಮಾಂಸ ಬಗೆದು ತಿಂದಿರುವ ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ಈ ವಿಕೃತಿಯನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆಯ ಹಿನ್ನೆಲೆ 

ಅಹಿರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಸಾ ಗ್ರಾಮದ ನಿವಾಸಿ ಸಿಕಂದರ್ ಗುಪ್ತಾ (30) ಈ ಕೃತ್ಯದ ಆರೋಪಿಯಾಗಿದ್ದಾನೆ. ಈತ ಮುಂಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಒಂದು ತಿಂಗಳ ಹಿಂದೆಯಷ್ಟೇ ಗ್ರಾಮಕ್ಕೆ ಮರಳಿದ್ದ. ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ ಸಿಕಂದರ್, ಸೋಮವಾರದಂದು ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿ ಪ್ರಿಯಾಂಕಾ (28) ಮತ್ತು ತಾಯಿ ರುನಾ ದೇವಿ (60) ಅವರೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಸಿಮೆಂಟ್ ಇಟ್ಟಿಗೆಯಿಂದ ಅವರಿಬ್ಬರ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.

ನೆರೆಹೊರೆಯವರ ಎದುರೇ ವಿಕೃತಿ ಪ್ರದರ್ಶನ

ಮನೆಯಿಂದ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬಂದಾಗ ಅಲ್ಲಿನ ದೃಶ್ಯ ಕಂಡು ಅವಕ್ಕಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮತ್ತು ಹೆಂಡತಿಯ ತಲೆಬುರುಡೆಯನ್ನು ಇಟ್ಟಿಗೆಯಿಂದ ಜಜ್ಜಿದ ಸಿಕಂದರ್, ನಂತರ ಆ ದೇಹಗಳಿಂದ ಮಾಂಸವನ್ನು ಹೊರತೆಗೆದು ತಿನ್ನಲು ಪ್ರಾರಂಭಿಸಿದ್ದಾನೆ. ಇದನ್ನು ತಡೆಯಲು ಹೋದ ಜನರಿಗೆ ಈತ ಬೆದರಿಕೆ ಹಾಕಿದ್ದು, ಆತನ ವಿಕೃತಿಯನ್ನು ಕಂಡ ಜನರು ಜೀವಭಯದಿಂದ ತಮ್ಮ ಮನೆಗಳ ಒಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.

ಆರೋಪಿಯ ಹಿನ್ನೆಲೆ 

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಹಿರೌಲಿ ಪೊಲೀಸರು ಆರೋಪಿ ಸಿಕಂದರ್ ಗುಪ್ತಾನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯ ವೇಳೆ ಈತ ತೀವ್ರ ಮಾದಕ ವ್ಯಸನಿ ಎಂದು ತಿಳಿದುಬಂದಿದೆ. ಈ ಹಿಂದೆಯೂ ಹಲವು ಬಾರಿ ಪತ್ನಿ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಿದ್ದ ಈತ, ಈ ಬಾರಿ ರಾಕ್ಷಸನಂತೆ ವರ್ತಿಸಿದ್ದಾನೆ. ಈತನ ಮಾನಸಿಕ ಸ್ಥಿತಿ ಹದಗೆಟ್ಟಿದೆಯೇ ಅಥವಾ ಕೇವಲ ಮಾದಕ ದ್ರವ್ಯದ ಅಮಲಿನಲ್ಲಿ ಈ ರೀತಿ ಮಾಡಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿ ವಿರೋಧಿಸಿ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

Exit mobile version