ಬಾಂಗ್ಲಾದೇಶದ ಪ್ರಧಾನಿಯಾಗಿ ತಾರೀಖ್ ರೆಹಮಾನ್ ಪ್ರಮಾಣವಚನ-ಭಾರತದ ಪ್ರತಿನಿಧಿಯಾಗಿ ಸ್ಪೀಕರ್‌ ಓಂ ಬಿರ್ಲಾ ಭಾಗಿ

Untitled design 2026 02 17T085413.982

ಬಾಂಗ್ಲಾದೇಶ: ಶೇಖ್ ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ ನಡೆದ ಮಹತ್ವದ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಬಾಂಗ್ಲಾದೇಶಿ ನ್ಯಾಷನಲಿಸ್ಟ್ ಪಾರ್ಟಿ (BNP) ಇಂದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಬಿಎನ್‌ಪಿ ಅಧ್ಯಕ್ಷ ತಾರೀಖ್ ರೆಹಮಾನ್ ಅವರು ಬಾಂಗ್ಲಾದ ನೂತನ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯಲ್ಲಿ ಒಟ್ಟು 300 ಸ್ಥಾನಗಳ ಪೈಕಿ ಬಿಎನ್‌ಪಿ ಬರೊಬ್ಬರಿ 209 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಅನುಪಸ್ಥಿತಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಬಿಎನ್‌ಪಿ ನಾಗಾಲೋಟ ಮುಂದುವರಿಸಿದೆ. ಇನ್ನುಳಿದಂತೆ ಜಮಾತ್-ಎ-ಇಸ್ಲಾಮಿ 68, ಜಾತೀಯ ಪಾರ್ಟಿ 26 ಹಾಗೂ ಇತರರು 14 ಸ್ಥಾನಗಳನ್ನು ಗೆದ್ದಿದ್ದಾರೆ. ಮೂರು ಸ್ಥಾನಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಐತಿಹಾಸಿಕ ಬದಲಾವಣೆ

ಬಾಂಗ್ಲಾದೇಶದ ಕಳೆದ 35 ವರ್ಷಗಳ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಅಲ್ಲಿ ಕೇವಲ ಖಲೀದಾ ಜಿಯಾ ಮತ್ತು ಶೇಖ್ ಹಸೀನಾ ಅವರೇ ಅಧಿಕಾರ ನಡೆಸಿದ್ದರು. ಇದೀಗ ಮೊದಲ ಬಾರಿಗೆ ಪುರುಷರೊಬ್ಬರು ಪ್ರಧಾನಿ ಪಟ್ಟಕ್ಕೇರುತ್ತಿರುವುದು ದೊಡ್ಡ ಬದಲಾವಣೆಯಾಗಿದೆ. ಅಲ್ಲದೆ, ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಬಿಎನ್‌ಪಿ ಪಕ್ಷವು ಮತ್ತೆ ಅಧಿಕಾರದ ಪಡೆದಿದೆ.

ಪ್ರಮಾಣ ವಚನ ಸ್ವೀಕಾರ

ಮಂಗಳವಾರ (ಫೆ. 17) ಬೆಳಗ್ಗೆ ಮುಖ್ಯ ಚುನಾವಣಾ ಆಯುಕ್ತ ನಾಸಿರುದ್ದೀನ್ ಅವರು ನೂತನ ಸಂಸದರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಸಂಜೆ ನಡೆಯುವ ಭವ್ಯ ಸಮಾರಂಭದಲ್ಲಿ ಬಾಂಗ್ಲಾದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಪ್ರಧಾನಿ ತಾರೀಖ್ ರೆಹಮಾನ್ ಹಾಗೂ ಅವರ ಸಚಿವ ಸಂಪುಟದ ಸದಸ್ಯರಿಗೆ ಗೋಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ.

ತಾರಿಕ್ ರೆಹಮಾನ್ ಹಿನ್ನೆಲೆ

60 ವರ್ಷದ ತಾರಿಕ್ ರೆಹಮಾನ್ ಮಾಜಿ ಪ್ರಧಾನಿ ಖಲೀದಾ ಜಿಯಾ ಮತ್ತು ದಿವಂಗತ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಪುತ್ರ. ರಾಜಕೀಯ ಮನೆತನದ ಹಿನ್ನೆಲೆಯಿದ್ದರೂ ಅವರು ಇದುವರೆಗೆ ಯಾವುದೇ ಸಾರ್ವಜನಿಕ ಉನ್ನತ ಹುದ್ದೆಯನ್ನು ಅಲಂಕರಿಸಿರಲಿಲ್ಲ. ಲಂಡನ್‌ನಲ್ಲಿ 17 ವರ್ಷಗಳ ಕಾಲ ಗಡಿಪಾರು ಜೀವನ ಅನುಭವಿಸಿ, ಕೇವಲ ಎರಡು ತಿಂಗಳ ಹಿಂದಷ್ಟೇ ಸ್ವದೇಶಕ್ಕೆ ಮರಳಿದ ಅವರು, ಈಗ ನೇರವಾಗಿ ದೇಶದ ಚುಕ್ಕಾಣಿ ಹಿಡಿಯುತ್ತಿದ್ದಾರೆ.

ಭಾರತದ ಪ್ರತಿನಿಧಿಗಳ ಭೇಟಿ

ಬಾಂಗ್ಲಾದೇಶದ ಈ ಹೊಸ ಸರ್ಕಾರದ ರಚನೆಯು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಭಾರತದ ಪರವಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರು ಪಾಲ್ಗೊಳ್ಳಲಿದ್ದಾರೆ.

ಮೊಹಮ್ಮದ್ ಯೂನಸ್ ಭವಿಷ್ಯ

ಹಸೀನಾ ಸರ್ಕಾರ ಪತನವಾದ ನಂತರ ದೇಶವನ್ನು ಮುನ್ನಡೆಸಿದ್ದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರ ಆಡಳಿತ ಇಂದಿಗೆ ಅಂತ್ಯವಾಗಲಿದೆ. ಈಗಾಗಲೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೋಬೆಲ್ ಪುರಸ್ಕೃತ ಯೂನಸ್ ಅವರ ಮುಂದಿನ ನಡೆಯ ಬಗ್ಗೆ ಸಾಕಷ್ಟು ಕುತೂಹಲಗಳಿದ್ದು, ಅವರು ನೂತನ ಬಿಎನ್‌ಪಿ ಸರ್ಕಾರದೊಂದಿಗೆ ಸಲಹೆಗಾರರಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Exit mobile version