ಭಾರತಕ್ಕೆ ಗೋಲ್ಡನ್‌ ಟೈಂ..! ಜಗನ್ನಾಥನ ಸನ್ನಿಧಿಯಲ್ಲಿದೆ ಬಂಗಾರ ಭಂಡಾರ..!

Untitled design 2025 03 24t165333.779

ನಮ್ಮ ಹೆಮ್ಮೆಯ ದೇಶ ಭಾರತಕ್ಕೆ ಶೀಘ್ರದಲ್ಲೇ ಗೋಲ್ಡನ್‌ ಟೈಂ ಶುರುವಾಗುವ ಎಲ್ಲಾ ಲಕ್ಷಣಗಳಿವೆ. ಯಾಕಂದ್ರೆ ಭಗವಾನ್ ಜಗನ್ನಾಥನ ಸನ್ನಿಧಿಯಿರುವ ಒಡಿಶಾದಲ್ಲಿ ಬೃಹತ್ ಚಿನ್ನದ ನಿಕ್ಷೇಪಗಳು ಪತ್ತೆಯಾಗಿವೆ.ಒಡಿಶಾ ರಾಜ್ಯದ ಬರೋಬ್ಬರಿ 7 ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬಂಗಾರದ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಒಡಿಶಾದ ಗಣಿಗಾರಿಕೆ ಸಚಿವ ಬಿಭೂತಿ ಭೂಷಣ್‌ ಜೇನಾ ಹೇಳಿದ್ದಾರೆ.

ಸುಂದರ್‌ಗಢ್, ನಬರಂಗಪುರ, ಅಂಗುಲ್ ಮತ್ತು ಕೊರಾಪುಟ್ ಜಿಲ್ಲೆಗಳನ್ನು ಒಳಗೊಂಡಂತೆ ಒಡಿಶಾದಾದ್ಯಂತ ಅನೇಕ ಚಿನ್ನದ ಗಣಿಗಳನ್ನು ಪತ್ತೆಹಚ್ಚಲಾಗಿದೆ.. ದಿಯೋಗರ್‌ನಲ್ಲಿ ರಾಜ್ಯವು ತನ್ನ ಮೊದಲ ಚಿನ್ನದ ಗಣಿಯನ್ನು ಹರಾಜು ಹಾಕಲು ಸಿದ್ಧವಾಗಿದೆ. ಕಿಯೋಂಜಾರ್ ಮತ್ತು ಮಯೂರ್‌ಭಂಜ್‌ನಲ್ಲಿ ನಡೆಯುತ್ತಿರುವ ಪರಿಶೋಧನೆಯು ಒಡಿಶಾದ ಗಣಿಗಾರಿಕೆ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.

ಜಿಎಸ್‌‍ಐ ಮತ್ತು ಒಡಿಶಾದ ಗಣಿಗಾರಿಕಾ ಸಂಸ್ಥೆ ಸೇರಿಕೊಂಡು ಇನ್ನೂ ಕೆಲವು ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಇರುವುದರ ಬಗ್ಗೆ ಹುಡುಕಾಟ ನಡೆಸುತ್ತಿದೆ. ಜಿಎಸ್‌‍ಐ ಹೇಳುವ ಪ್ರಕಾರ ದಿಯೋಗಢದ ಜಾಲಾದಿಲ್‌ ಪ್ರದೇಶದಲ್ಲಿ ಅಪಾರ ಪ್ರಮಾಣವಾದ ಚಿನ್ನ ಹಾಗೂ ತಾಮ್ರದ ನಿಕ್ಷೇಪಗಳು ಇರುವ ನಿರೀಕ್ಷೆ ಇದೆ ಎಂದು ಹೇಳಿದೆ.

ವಿಶ್ವಾದ್ಯಂತ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿರೋ ಟೈಂನಲ್ಲೇ ಭಾರತಕ್ಕೆ ಇಂತಹ ಜಾಕ್‌ಪಾಟ್‌ ಹೊಡೆದಿರೋದು ನಮ್ಮ ದೇಶಕ್ಕೆ ಸುವರ್ಣ ಸಮಯ ಹತ್ತಿರವಾಗುತ್ತಿರುವ ಮುನ್ಸೂಚನೆ ನೀಡಿದೆ. ಒಡಿಶಾದಲ್ಲಿ ಸಿಕ್ಕಿರೋ ಬಂಗಾರ ಭಂಡಾರದಿಂದ ಇನ್ಮುಂದೆ ಭಾರತಕ್ಕೆ ಗೋಲ್ಡನ್‌ ಟೈಂ ಶುರುವಾಗೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಭಾರತದ ಚಿನ್ನದ ಕಣಜ ಎಂದು ನಮ್ಮ ಕರ್ನಾಟಕ ಪ್ರಸಿದ್ಧವಾಗಿತ್ತು. ಈ ಹಿಂದೆ ಕೋಲಾರ ಗೋಲ್ಡ್‌ ಫೀಲ್ಡ್‌ನಿಂದ ಚಿನ್ನ ತೆಗೆಯಲಾಗುತ್ತಿತ್ತು ಸದ್ಯಕ್ಕೆ ನಿಲ್ಲಿಸಲಾಗಿದೆ. ಈಗ ಇಡೀ ದೇಶದಲ್ಲಿ ಹೆಚ್ಚು ಚಿನ್ನ ಉತ್ಪಾದನೆಯಾಗುತ್ತಿರೋದು ಹಟ್ಟಿ ಚಿನ್ನದ ಗಣಿಯಲ್ಲಿ ಮಾತ್ರ. ಈಗ ಒಡಿಶಾದ 7 ಸ್ಥಳಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರೋದ್ರಿಂದ ದೇಶದಲ್ಲಿ ಮತ್ತೆ ಸುವರ್ಣ ಯುಗ ಶುರುವಾಗಲಿದೆ ಎನ್ನಲಾಗಿದೆ.

ಭಗವಾನ್‌ ಜಗನ್ನಾಥನ ಸನ್ನಿಧಿಯಾಗಿರೋ ಒಡಿಶಾದಲ್ಲಿ ನಡೆದಿರುವ ಚಿನ್ನದ ಆವಿಷ್ಕಾರವು ರಾಜ್ಯದ ಆರ್ಥಿಕತೆಯನ್ನು ಉನ್ನತ ಮಟ್ಟಕ್ಕೇರಿಸುವ ಜೊತೆಗೆ ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಕಳಿಂಗ ನಾಡು ಒಡಿಶಾ ಶೀಘ್ರದಲ್ಲೇ ಭಾರತದ ಚಿನ್ನದ ಗಣಿಗಾರಿಕೆ ಹಬ್‌ ಆಗೋದ್ರಲ್ಲಿ ಡೌಟೇ ಇಲ್ಲ.

Exit mobile version