ಕಠ್ಮಂಡು ಆ.29: ಭೀಕರ ಪ್ರವಾಹ ಮತ್ತು ಭಾರೀ ಭೂಕುಸಿತದಿಂದ ತತ್ತರಿಸಿ ಹೋಗಿರುವ ನೇಪಾಳಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಪರ್ವತ ನದಿಗಳ ಹರಿವಿಗೆ ಭೂಕುಸಿತದ ಅವಶೇಷಗಳು ಅಡ್ಡಿಯಾಗಿರುವ ಪರಿಣಾಮ ನೇಪಾಳ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಎರಡು ತಡೆ ಸರೋವರಗಳು (Barrier Lakes) ನಿರ್ಮಾಣವಾಗಿದ್ದು, ಅವುಗಳ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ. ಈ ಸರೋವರಗಳ ತಡೆ ಒಡೆದರೆ ಕೆಳಭಾಗದಲ್ಲಿ ಮತ್ತೊಮ್ಮೆ ಭೀಕರ ಹಠಾತ್ ಪ್ರವಾಹ ಸಂಭವಿಸುವ ಅಪಾಯವಿದೆ.
ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಭೋಟೆಕೋಶಿ ನದಿಗೆ ಭೂಕುಸಿತದ ಅವಶೇಷಗಳು ಅಡ್ಡಿಯಾಗಿರುವುದರಿಂದ ಹೊಸದಾಗಿ ಸರೋವರವೊಂದು ನಿರ್ಮಾಣವಾಗಿದೆ. ಇದರಲ್ಲಿ ನೀರಿನ ಮಟ್ಟ ನಿರಂತರವಾಗಿ ಏರುತ್ತಿದ್ದು, ತಡೆ ದುರ್ಬಲಗೊಂಡರೆ ಭಾರೀ ಪ್ರಮಾಣದ ನೀರು ಏಕಾಏಕಿ ಕೆಳಭಾಗಕ್ಕೆ ಹರಿಯುವ ಆತಂಕವಿದೆ. ಹೀಗಾಗಿ ನದಿ ದಂಡೆಗಳು ಮತ್ತು ಅಪಾಯಕಾರಿ ಪ್ರದೇಶಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಚೀನಾದಲ್ಲೂ ಮತ್ತೊಂದು ಅಪಾಯಕಾರಿ ಸರೋವರ
ಇದೇ ವೇಳೆ, ಗಡಿಯಾಚೆ ಚೀನಾದ ಪ್ರದೇಶದಲ್ಲೂ ಮತ್ತೊಂದು ಅಸ್ಥಿರ ತಡೆ ಸರೋವರ ನಿರ್ಮಾಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಸುಮಾರು 15 ಲಕ್ಷದಿಂದ 20 ಲಕ್ಷ ಘನ ಮೀಟರ್ ನೀರು ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 150 ಮೀಟರ್ ಉದ್ದ ಮತ್ತು 40ರಿಂದ 50 ಮೀಟರ್ ಆಳ ಹೊಂದಿರುವ ಈ ಸರೋವರದ ಸ್ಥಿರತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಎಂಟು ಸದಸ್ಯರ ಎಂಜಿನಿಯರ್ಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ನೀರಿನ ಒತ್ತಡ ಕಡಿಮೆ ಮಾಡಲು ಕಾಲುವೆ ನಿರ್ಮಿಸಿ ಹೆಚ್ಚುವರಿ ನೀರನ್ನು ಸುರಕ್ಷಿತವಾಗಿ ಹೊರಹಾಕುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.
ಸೆಪ್ಟೆಂಬರ್ 1ರ ವೇಳೆಗೆ ಹೆಚ್ಚಲಿದೆ ನೀರಿನ ಒಳಹರಿವು?
ಚೀನಾದ ಜಲಸಂಪನ್ಮೂಲ ಸಚಿವಾಲಯದ ಅಂದಾಜಿನಂತೆ, ಮುಂದಿನ ಮೂರು ದಿನಗಳಲ್ಲಿ ಈಗಾಗಲೇ ತಡೆಗಟ್ಟಲ್ಪಟ್ಟಿರುವ ಸರೋವರಕ್ಕೆ ಸುಮಾರು 30 ಲಕ್ಷ ಘನ ಮೀಟರ್ ಹೆಚ್ಚುವರಿ ನೀರು ಹರಿದುಬರುವ ಸಾಧ್ಯತೆಯಿದೆ. ಸೆಪ್ಟೆಂಬರ್ 1ರ ವೇಳೆಗೆ ನೀರಿನ ಒಳಹರಿವು ಗರಿಷ್ಠ ಮಟ್ಟ ತಲುಪಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ನೀರಿನ ಪ್ರಮಾಣ ಹೆಚ್ಚಾದಂತೆ ತಡೆಗೋಡೆ ಒಡೆದುಹೋಗುವ ಅಪಾಯವೂ ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ನೇಪಾಳದ ಅಧಿಕಾರಿಗಳು ನದಿ ದಂಡೆಗಳು ಹಾಗೂ ಇತರ ಅಪಾಯಕಾರಿ ಪ್ರದೇಶಗಳಿಂದ ದೂರವಿರುವಂತೆ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿಗೆ ಸೂಚಿಸಿದ್ದಾರೆ. ಸರೋವರಗಳ ನೀರಿನ ಮಟ್ಟ ಹಾಗೂ ಅವಶೇಷಗಳಿಂದ ನಿರ್ಮಾಣವಾಗಿರುವ ನೈಸರ್ಗಿಕ ತಡೆಗಳ ಸ್ಥಿರತೆಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.
ಹವಾಮಾನ ಬದಲಾವಣೆ ಕುರಿತು ವಿಜ್ಞಾನಿಗಳ ಎಚ್ಚರಿಕೆ
ಈ ನಿರ್ದಿಷ್ಟ ಭೂಕುಸಿತಕ್ಕೆ ಹವಾಮಾನ ಬದಲಾವಣೆಯೇ ನೇರ ಕಾರಣ ಎಂಬುದು ಇನ್ನೂ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಆದರೆ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಭೂಭಾಗದ ಅಸ್ಥಿರತೆ ಹೆಚ್ಚುತ್ತಿರುವ ಬಗ್ಗೆ ಸಂಶೋಧಕರು ಎಚ್ಚರಿಸಿದ್ದಾರೆ.
ಹಿಮನದಿಗಳ ಹಿಂಜರಿತ, ಪರ್ಮಾಫ್ರಾಸ್ಟ್ ಕರಗುವಿಕೆ ಹಾಗೂ ಹಿಮಕ್ಕೆ ಬಂಧಿತವಾಗಿರುವ ಬಂಡೆಗಳ ಬಲ ಕುಗ್ಗುವಿಕೆ ಮುಂತಾದ ಬೆಳವಣಿಗೆಗಳು ಭವಿಷ್ಯದಲ್ಲಿ ಹಠಾತ್ ಭೂಕುಸಿತ, ಪರ್ವತ ಕುಸಿತ ಮತ್ತು ಪ್ರವಾಹದ ಅಪಾಯವನ್ನು ಹೆಚ್ಚಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
