ಮೊಬೈಲ್‌ಗಾಗಿ ಆರಂಭವಾದ ಜಗಳ; ಒಂದೇ ಕುಟುಂಬದ ಮೂವರ ದಾರುಣ ಅಂತ್ಯ

Untitled design 2026 08 21T180248.886

ಮುಂಬೈ ಆ. 21: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಮನಕಲಕುವ ದುರಂತ ಸಂಭವಿಸಿದೆ. ಹೊಸ ಮೊಬೈಲ್‌ಗಾಗಿ ಪೋಷಕರೊಂದಿಗೆ ಜಗಳ ಮಾಡಿಕೊಂಡು ಬೆಟ್ಟದ ಅಂಚಿಗೆ ತೆರಳಿದ್ದ 18 ವರ್ಷದ ಯುವಕನನ್ನು ರಕ್ಷಿಸಲು ಮುಂದಾದ ತಂದೆ-ತಾಯಿ ಕೂಡ ಕಣಿವೆಗೆ ಬಿದ್ದು ಮೃತಪಟ್ಟಿದ್ದಾರೆ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.

ಮೃತರನ್ನು ಮುರಳೀಧರ್ ಚಾಂದ್ಗುಡೆ (48), ಅವರ ಪತ್ನಿ ಸಂಗೀತಾ ಚಾಂದ್ಗುಡೆ ಹಾಗೂ ಪುತ್ರ ಕುನಾಲ್ (18) ಎಂದು ಗುರುತಿಸಲಾಗಿದೆ. ಕುಟುಂಬವು ಛತ್ರಪತಿ ಸಂಭಾಜಿನಗರದ ಜಲ್ತಾ ಫಾಟಾ ಪ್ರದೇಶದ ನಿವಾಸಿಗಳಾಗಿದ್ದರು.

ಮೊಬೈಲ್‌ಗಾಗಿ ಜಗಳ, ಬೆಟ್ಟದತ್ತ ತೆರಳಿದ ಯುವಕ

ಪೊಲೀಸರ ಮಾಹಿತಿ ಪ್ರಕಾರ, ಇಂದು ಶುಕ್ರವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಕುನಾಲ್ ಹೊಸ ಮೊಬೈಲ್ ಕೊಡಿಸುವಂತೆ ಪೋಷಕರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ಬೇಸರಗೊಂಡು ಖಾವ್ಡಾ ಬೆಟ್ಟದ ಅಂಚಿಗೆ ತೆರಳಿ ಅಪಾಯಕಾರಿ ಸ್ಥಳದಲ್ಲಿ ನಿಂತಿದ್ದಾನೆ. ವಿಷಯ ತಿಳಿದ ತಕ್ಷಣ ಪೋಷಕರು, ಸ್ಥಳೀಯ ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನು ಸುರಕ್ಷಿತ ಸ್ಥಳಕ್ಕೆ ಬರಲು ಮನವೊಲಿಸಲು ಪ್ರಯತ್ನಿಸಿದರು.

ಸುಮಾರು ಮೂರು ಗಂಟೆಗಳ ಕಾಲ ನಿರಂತರ ಮಾತುಕತೆ ನಡೆದರೂ, ಯುವಕ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ರಕ್ಷಣಾ ಸಿಬ್ಬಂದಿ ಬೆಟ್ಟದ ಕೆಳಭಾಗದಲ್ಲಿ ಸುರಕ್ಷತಾ ಬಲೆ ಅಳವಡಿಸಲು ಯತ್ನಿಸಿದರೂ, ಆತ ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ ಕಾರಣ ಕಾರ್ಯಾಚರಣೆ ಸವಾಲಿನದ್ದಾಯಿತು.

ಕೊನೆಯ ಕ್ಷಣದಲ್ಲಿ ನಡೆದ ದುರಂತ

ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಪರಿಸ್ಥಿತಿ ಗಂಭೀರವಾಯಿತು. ಇದುವರೆಗೆ ಕೆಳಗಿನಿಂದ ಮಾತನಾಡುತ್ತಿದ್ದ ತಂದೆ ಮುರಳೀಧರ್, ಕೊನೆಯ 15–20 ನಿಮಿಷಗಳಲ್ಲಿ ಬೆಟ್ಟದ ಮೇಲಕ್ಕೆ ತೆರಳಿ ಮಗನನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆತರಲು ಯತ್ನಿಸಿದರು. ಈ ವೇಳೆ ಇಬ್ಬರೂ ಸಮತೋಲನ ಕಳೆದುಕೊಂಡು ಕಣಿವೆಗೆ ಬಿದ್ದರು.

ಈ ದೃಶ್ಯ ಕಂಡ ತಾಯಿ ಸಂಗೀತಾ ತೀವ್ರ ಆಘಾತಕ್ಕೊಳಗಾದರು. ಕೆಲವೇ ಕ್ಷಣಗಳಲ್ಲಿ ಅವರೂ ಕಣಿವೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ತನಿಖೆ ಆರಂಭ

ದುರಂತದ ಬಳಿಕ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಮೂವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 

 

Exit mobile version