ಟೆಹರಾನ್: ಕಳೆದ ಕೆಲವು ದಿನಗಳಿಂದ ಜಗತ್ತನ್ನು ಆತಂಕಕ್ಕೆ ತಳ್ಳಿದ್ದ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಘರ್ಷಕ್ಕೆ ಕಡೆಗೂ ಕದನ ವಿರಾಮ ಘೋಷಣೆಯಾಗಿದೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಆರ್ಥಿಕ ಅಸ್ಥಿರತೆಯ ಭೀತಿಯಲ್ಲಿದ್ದ ರಾಷ್ಟ್ರಗಳು ಸದ್ಯಕ್ಕೆ ನಿರಾಳವಾಗಿವೆ.
ಚೀನಾ-ಪಾಕಿಸ್ತಾನ ಮಧ್ಯಸ್ಥಿಕೆ
ಯುದ್ಧ ಆರಂಭವಾದಾಗಿನಿಂದ ಭಾರತ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಶಾಂತಿಗಾಗಿ ಕರೆ ನೀಡಿದ್ದವು. ಆದರೆ, ಅಂತಿಮವಾಗಿ ಚೀನಾ ಮತ್ತು ಪಾಕಿಸ್ತಾನ ದೇಶಗಳು ನಡೆಸಿದ ಸಂಧಾನ ಪ್ರಯತ್ನಗಳು ಫಲ ನೀಡಿವೆ ಎಂದು ವರದಿಯಾಗಿದೆ. ಅಮೆರಿಕಾ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಡಿಸುವಲ್ಲಿ ಈ ಎರಡು ದೇಶಗಳು ಪ್ರಮುಖ ಪಾತ್ರ ವಹಿಸಿರುವುದು ಅಂತರಾಷ್ಟ್ರೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹಾರ್ಮುಜ್ ಜಲಸಂಧಿ ಮುಕ್ತ ಮುಕ್ತ; ತೈಲ ಮಾರುಕಟ್ಟೆ ಚೇತರಿಕೆ ನಿರೀಕ್ಷೆ
ಕದನ ವಿರಾಮದ ಬೆನ್ನಲ್ಲೇ ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಸಂಚಾರಕ್ಕೆ ಮುಕ್ತಗೊಳಿಸಿದೆ. ಇದರಿಂದಾಗಿ ತೈಲ ಸಾಗಣೆಯ ಹಡಗುಗಳು ಸುಗಮವಾಗಿ ಸಂಚರಿಸುತ್ತಿದ್ದು, ಏರಿಕೆಯಾಗಿದ್ದ ಕಚ್ಚಾ ತೈಲದ ಬೆಲೆ ಇಳಿಕೆಯಾಗುವ ಮತ್ತು ಕುಸಿದಿದ್ದ ಷೇರು ಮಾರುಕಟ್ಟೆ ಚೇತರಿಸಿಕೊಳ್ಳುವ ಆಶಾವಾದ ವ್ಯಕ್ತವಾಗಿದೆ.
ಇರಾನ್ನಿಂದ ಕ್ಷಿಪಣಿ ದಾಳಿ: ಮುಂದುವರೆದ ಆತಂಕ
ಕದನ ವಿರಾಮ ಘೋಷಣೆಯಾದ ನಂತರವೂ ಇರಾನ್ನಿಂದ ಸೌದಿ ಅರೇಬಿಯಾ ಸೇರಿದಂತೆ ಕೆಲವು ಅರಬ್ ದೇಶಗಳತ್ತ ಕ್ಷಿಪಣಿ ದಾಳಿ ನಡೆದಿರುವ ವರದಿಗಳು ಬಂದಿವೆ. ಇದು ಈ ಭಾಗದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಇರಾನ್ನ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕಾ, “ಮತ್ತೆ ದಾಳಿ ಮುಂದುವರಿಸಿದರೆ ಸರ್ವನಾಶ ಅನಿವಾರ್ಯ” ಎಂದು ಎಚ್ಚರಿಕೆ ನೀಡಿದೆ. ಇಸ್ರೇಲ್ ಕೂಡ ಅಮೆರಿಕಾದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದು, ಯಾವುದೇ ಪ್ರಚೋದನಾಕಾರಿ ಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.
ಉತ್ತರ ಕೊರಿಯಾದಿಂದ ಹೊಸ ಸಂಘರ್ಷ
ಇತ್ತ ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವ ಲಕ್ಷಣಗಳು ಕಾಣಿಸುತ್ತಿದ್ದರೆ, ಅತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ದಕ್ಷಿಣ ಕೊರಿಯಾದ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದ್ದಾನೆ. ಅಮೆರಿಕಾ-ಇರಾನ್ ಯುದ್ಧ ನಿಂತ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಜಗತ್ತನ್ನು ಮತ್ತೆ ಗೊಂದಲಕ್ಕೆ ತಳ್ಳಿದೆ.
