ಏಷ್ಯಾದಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ: ಶುರುವಾಗುತ್ತಾ ಆಪರೇಷನ್ ಸಿಂಧೂರ 2

Untitled design 2026 04 06T133112.563

ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಯುದ್ಧವು 38ನೇ ದಿನಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲೇ, ಏಷ್ಯಾ ಖಂಡದಲ್ಲೂ ಮತ್ತೊಂದು ಯುದ್ಧದ ಕಾರ್ಮೋಡ ಕವಿಯುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಇದರ ಬೆನ್ನಲ್ಲೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನಕ್ಕೆ ನೇರ ಮತ್ತು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲು ಭಾರತ ಸಜ್ಜು

ಭಾರತ ಮತ್ತು ಪಾಕಿಸ್ತಾನದ ನಡುವೆ ದಶಕಗಳಿಂದಲೂ ದ್ವೇಷದ ವಾತಾವರಣವಿದ್ದು, ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಲೇ ಇದೆ. ಕಳೆದ ವರ್ಷ ಪಾಕಿಸ್ತಾನದ ಪೆಹಲ್ಗಾಮ್ ದಾಳಿಯ ನಂತರ ಭಾರತ, ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿತ್ತು. ಆದರೂ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿಯನ್ನು ಬಿಡದೆ, ಆಗಾಗ್ಗೆ ಗಡಿಯಲ್ಲಿ ಚಿತಾವಣೆ ನಡೆಸುತ್ತಲೇ ಇರುತ್ತದೆ. ಇದಕ್ಕೆ ಜಗ್ಗದ ಭಾರತ, ‘ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ’ ಎಂದು ದಿಟ್ಟ ಪ್ರತ್ಯುತ್ತರ ನೀಡುತ್ತಾ ಬಂದಿದೆ.

‘ಆಪರೇಷನ್ ಸಿಂಧೂರ’ ಮುಗಿದಿಲ್ಲ 

ಇತ್ತೀಚೆಗೆ ರಾಜಸ್ಥಾನ ಮತ್ತು ಪಂಜಾಬ್ ಗಡಿ ಪ್ರಾಂತ್ಯಗಳಲ್ಲಿ ಭಾರತೀಯ ಸೇನೆಯು ಯುದ್ಧಕ್ಕೂ ಮುನ್ನ ನಡೆಸುವಂತಹ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಗಡಿ ಪ್ರದೇಶಗಳಲ್ಲಿ ಬಂಕರ್‌ಗಳ ನಿರ್ಮಾಣ, ತುರ್ತು ಸೈರನ್ (ಎಮರ್ಜೆನ್ಸಿ ಅಲರಾಂ) ವ್ಯವಸ್ಥೆಗಳ ಅಳವಡಿಕೆ ಸೇರಿದಂತೆ ಅನೇಕ ಸಮರ ಅಭ್ಯಾಸಗಳನ್ನು ಕೈಗೊಳ್ಳಲಾಗಿದೆ. ಭಾರತದ ಈ ಯುದ್ಧ ಸನ್ನದ್ಧತೆಯು ಪಾಕಿಸ್ತಾನದ ಎದೆಯಲ್ಲಿ ನಡುಕ ಹುಟ್ಟಿಸಿದೆ ಎನ್ನಲಾಗಿದೆ.

ಭಾರತದ ಬತ್ತಳಿಕೆಗೆ ಅತ್ಯಾಧುನಿಕ ಅಸ್ತ್ರಗಳ ಸೇರ್ಪಡೆ

ಗಡಿಯಲ್ಲಿ ಸೈನಿಕರ ಬಲವನ್ನು ಮತ್ತಷ್ಟು ಹೆಚ್ಚಿಸಲು ಭಾರತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಬಲ ಧನುಷ್ ಫಿರಂಗಿ, ಎಸ್-400 ಕ್ಷಿಪಣಿಗಳು ಹಾಗೂ ಆರ್ಮರ್ಡ್ (ಶಸ್ತ್ರಸಜ್ಜಿತ) ಸೇನಾ ವಾಹನಗಳನ್ನು ಖರೀದಿಸಲು 2.38 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ, ಒಂದು ವೇಳೆ ಚೀನಾ ಅಥವಾ ಪಾಕಿಸ್ತಾನ ಯುದ್ಧದ ದುಸ್ಸಾಹಸಕ್ಕೆ ಕೈಹಾಕಿದರೆ, ಅತ್ಯುಗ್ರವಾಗಿ ಪ್ರತ್ಯುತ್ತರ ನೀಡಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ.
ಒಟ್ಟಾರೆಯಾಗಿ, ಭಾರತದ ಗಡಿ ಪ್ರಾಂತ್ಯಗಳಲ್ಲಿ ನಡೆಯುತ್ತಿರುವ ಸೇನಾ ತರಬೇತಿ ಮತ್ತು ರಕ್ಷಣಾ ಸಚಿವರ ಖಡಕ್ ಹೇಳಿಕೆಗಳು ಪಾಕಿಸ್ತಾನಕ್ಕೆ ನೀಡಲಾದ ನೇರ ವಾರ್ನಿಂಗ್ ಆಗಿದೆ ಎನ್ನಬಹುದಾಗಿದೆ.

Exit mobile version