ಭಾರತದತ್ತ ಮುಖ ಮಾಡಿದ ಬಾಂಗ್ಲಾ ವಲಸಿಗರು? ಗಡಿಯಲ್ಲಿ ಹದ್ದಿನ ಕಣ್ಣಿಟ್ಟ ಬಿಎಸ್ಎಫ್

Untitled design 2026 05 30T234052.913

ಭಾರತ ಹಾಗೂ ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಲಸಿಗರ ನುಸುಳುವಿಕೆ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಬಾಂಗ್ಲಾದೇಶದಲ್ಲಿನ ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳಿಂದಾಗಿ ಅಲ್ಲಿನ ನಾಗರಿಕರು ಜೀವನೋಪಾಯಕ್ಕಾಗಿ ಗಡಿ ದಾಟಿ ಭಾರತದತ್ತ ಮುಖ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಗಡಿ ನುಸುಳುವಿಕೆಯನ್ನು ನಿಯಂತ್ರಿಸಲು ಬಾಂಗ್ಲಾದೇಶದ ನೂತನ ಸರ್ಕಾರವು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಇದು ಅಲ್ಲಿನ ಗಡಿ ಭಾಗದ ಜನರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.

ಗಡಿಯಲ್ಲಿ ಹದ್ದಿನ ಕಣ್ಣು ಇಟ್ಟ ಬಿಎಸ್ಎಫ್ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ಭಾರತದೊಳಗೆ ಪ್ರವೇಶಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಗಡಿ ಭದ್ರತೆಯನ್ನು ತೀವ್ರಗೊಳಿಸಿದೆ. ಗಡಿ ಭದ್ರತಾ ಪಡೆಗೆ (BSF) ಕಟ್ಟುನಿಟ್ಟಿನ ‘ಹೈ ಅಲರ್ಟ್’ ಘೋಷಿಸಲಾಗಿದ್ದು, ಗಡಿ ಭಾಗಗಳಲ್ಲಿ ಸಂಚರಿಸುವ ವಾಹನಗಳು ಮತ್ತು ರೈಲುಗಳ ಮೇಲೆ ಬಿಎಸ್ಎಫ್ ಹಾಗೂ ಸ್ಥಳೀಯ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಒಂದು ವೇಳೆ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿರುವ ಬಾಂಗ್ಲಾ ಪ್ರಜೆಗಳು ಪತ್ತೆಯಾದಲ್ಲಿ, ಅವರನ್ನು ತಕ್ಷಣವೇ ಗಡೀಪಾರು ಮಾಡಲು ಪಶ್ಚಿಮ ಬಂಗಾಳ ಸರ್ಕಾರವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಹೆಚ್ಚಿದ ಸೇನಾ ಗಸ್ತು: 4 ಸಾವಿರ ಕಿ.ಮೀ ಗಡಿಗೆ ಕಾವಲು ಅಕ್ರಮ ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಭಾರತೀಯ ಸೇನೆ ಮತ್ತು ಬಿಎಸ್ಎಫ್ ಗಸ್ತು ತಿರುಗುವುದು ತೀವ್ರಗೊಳಿಸಿದೆ. ಒಂದು ವೇಳೆ ಗಡಿ ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ಒಳನುಗ್ಗಲು ಯತ್ನಿಸುವ ನುಸುಳುಕೋರರು ಕಂಡುಬಂದಲ್ಲಿ, ಅವರನ್ನು ಕೂಡಲೇ ವಶಕ್ಕೆ ಪಡೆದು ಮರಳಿ ಕಳುಹಿಸಲು ಕಠಿಣ ಆದೇಶಗಳನ್ನು ನೀಡಲಾಗಿದೆ.

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಸುಮಾರು 4,156 ಕಿಲೋಮೀಟರ್ ಉದ್ದದ ವಿಶಾಲವಾದ ಗಡಿಯಿರುವುದರಿಂದ, ಇಷ್ಟೊಂದು ದೊಡ್ಡ ಗಡಿ ಪ್ರದೇಶದಲ್ಲಿ ಅಕ್ರಮ ವಲಸೆಯನ್ನು ಸಂಪೂರ್ಣವಾಗಿ ತಡೆಯುವುದು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ನೂರಾರು ವಲಸಿಗರು ಭಾರತದೊಳಗೆ ನುಸುಳಲು ಹೊಂಚು ಹಾಕುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಇರುವುದರಿಂದ ಗಡಿಯುದ್ದಕ್ಕೂ ನಿರಂತರ ಕಣ್ಗಾವಲು ಇಡಲಾಗಿದೆ.

Exit mobile version