ಹೊಸದಿಲ್ಲಿ: ರಾಜಸ್ಥಾನದ ಚುರು ಜಿಲ್ಲೆಯ ರತನ್ಗಢ ತಾಲೂಕಿನ ಭಾನುಡಾ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ ಜಾಗ್ವಾರ್ ಜೆಟ್ ಒಂದು ದುರಂತಕ್ಕೀಡಾಗಿದೆ. ವಿಮಾನವು ಆಕಾಶದಿಂದ ಧರೆಗುರುಳಿ ಪತನಗೊಂಡಿದ್ದು, ಪೈಲಟ್ ಸಹಿತ ಇಬ್ಬರು ಸಾವನ್ನಪ್ಪಿದ್ದಾರೆ.
ಘಟನೆಯ ನಂತರ ಪೊಲೀಸ್ ಇಲಾಖೆ, ಸೇನಾಪಡೆ, ಮತ್ತು ಜಿಲ್ಲಾ ಆಡಳಿತದ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಘಟನಾಸ್ಥಳದಲ್ಲಿ ಜಾಗ್ವಾರ್ ಜೆಟ್ನ ಅವಶೇಷಗಳು ಚದುರಿಹೋಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು. ಅವಶೇಷಗಳ ಬಳಿ ಪೈಲಟ್ ಸಹಿತ ಇಬ್ಬರ ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಈಗಲೂ ಮೃತರ ಗುರುತು ಪತ್ತೆಹಚ್ಚುವ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಗುರುತು ದೃಢಪಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಘಟನೆಯು ಬೆಳಿಗ್ಗೆ ಆಕಾಶದಲ್ಲಿ ಭೀಕರ ಶಬ್ದ ಕೇಳಿಸಿತ್ತು. ಕೆಲವೇ ಕ್ಷಣಗಳಲ್ಲಿ ಹೊಲಗಳಲ್ಲಿ ದೊಡ್ಡ ಪ್ರಮಾಣದ ಬೆಂಕಿಯ ಜ್ವಾಲೆಗಳು ಮತ್ತು ಗಾಢವಾದ ಹೊಗೆ ಕಾಣಿಸಿಕೊಂಡಿತ್ತು. ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡರು. ಘಟನೆಯ ತೀವ್ರತೆಯಿಂದ ಕೆಲವು ಗಂಟೆಗಳ ಕಾಲ ಭಾನುಡಾ ಗ್ರಾಮದಲ್ಲಿ ಭಯದ ವಾತಾವರಣ ಮನೆಮಾಡಿತ್ತು.
ಜಿಲ್ಲಾಧಿಕಾರಿ ಅಭಿಷೇಕ್ ಸುರಾನಾ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಹೊತ್ತಿಕೊಂಡಿದ್ದ ಹೊಲಗಳನ್ನು ನಂದಿಸಲು ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ನೀರು ಸುರಿದು ಶ್ರಮಿಸಿದರು. ಅವರ ಈ ಪ್ರಯತ್ನವು ಬೆಂಕಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು ಎಂದು ಜಿಲ್ಲಾ ಆಡಳಿತ ತಿಳಿಸಿದೆ.





