ಮತದಾರರೇ ಗಮನಿಸಿ: 43 ಲಕ್ಷಕ್ಕೂ ಅಧಿಕ ಮಂದಿಗೆ ನೋಟಿಸ್ ನೀಡಲು ಸಿದ್ಧತೆ!

Untitled design 2026 08 20T225449.706

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ, ಮಾಹಿತಿ ಲೋಪ, ಹೆಸರು ವ್ಯತ್ಯಾಸ ಹಾಗೂ ಮ್ಯಾಪಿಂಗ್ ಆಗದ ಪ್ರಕರಣಗಳಲ್ಲಿ 43.80 ಲಕ್ಷಕ್ಕೂ ಅಧಿಕ ಮತದಾರರಿಗೆ ರಾಜ್ಯ ಮುಖ್ಯ ಚುನಾವಣಾ ಆಯೋಗ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಆಗಸ್ಟ್ 24ರಿಂದ ಬಿಎಲ್‌ಒಗಳ ಮೂಲಕ ಮನೆ ಮನೆಗೆ ನೋಟಿಸ್ ವಿತರಣೆ ಆರಂಭವಾಗಲಿದೆ.

ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರು ನೋಂದಾಯಿತರಾಗಿದ್ದಾರೆ. ಇದರಲ್ಲಿ ಎಎಸ್‌ಡಿಡಿಒ (ನಾಪತ್ತೆ, ಸ್ಥಳಾಂತರ, ಮೃತ, ನಕಲಿ ಹಾಗೂ ಇತರೆ) ವಿಭಾಗಕ್ಕೆ ಸೇರಿದ 1.07 ಕೋಟಿ ಮತದಾರರು ಕರಡು ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಉಳಿದ 4.46 ಕೋಟಿ ಅರ್ಹ ಮತದಾರರ ಪೈಕಿ 20,35,312 ಮಂದಿಯ ಅರ್ಜಿಯಲ್ಲಿ ಮಾಹಿತಿ ವ್ಯತ್ಯಾಸ ಕಂಡುಬಂದಿದ್ದು, 23,45,428 ಮಂದಿಯ ಮ್ಯಾಪಿಂಗ್ ಪೂರ್ಣಗೊಂಡಿಲ್ಲ. ಹೀಗಾಗಿ ಒಟ್ಟು 43,80,740 (ಶೇ. 9.81) ಮತದಾರರಿಗೆ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಲಾಗುತ್ತಿದೆ.

ಮತದಾರರ ದತ್ತಾಂಶ ಪರಿಶೀಲನೆ ವೇಳೆ ಹೆಸರು ಅದಲು-ಬದಲು, ವಿಳಾಸ ಹೊಂದಾಣಿಕೆ ಕೊರತೆ, ಜನನ ವಿವರಗಳ ವ್ಯತ್ಯಾಸ ಸೇರಿದಂತೆ ಒಂಬತ್ತು ವಿಧದ ದೋಷಗಳನ್ನು ಸಾಫ್ಟ್‌ವೇರ್ ಗುರುತಿಸಿದೆ. ಈ ನ್ಯೂನತೆಗಳನ್ನು ಸರಿಪಡಿಸಿ ಅರ್ಹ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಉಳಿಯುವಂತೆ ಮಾಡುವುದು ಆಯೋಗದ ಉದ್ದೇಶವಾಗಿದೆ.

ನೋಟಿಸ್‌ನಲ್ಲಿ ಮತದಾರರ ಹೆಸರು, ಹಾಜರಾಗಬೇಕಾದ ದಿನಾಂಕ ಹಾಗೂ ಸಮಯ ಉಲ್ಲೇಖಿಸಲಾಗುತ್ತದೆ. ಬಿಎಲ್‌ಒಗಳು ಮತದಾರರ ಮನೆಗೆ ತೆರಳಿ ನೋಟಿಸ್ ನೀಡಲಿದ್ದು, ವಿತರಣೆ ವೇಳೆ ಫೋಟೋ ದಾಖಲಿಸುವುದು ಕಡ್ಡಾಯವಾಗಿದೆ. ಮತಗಟ್ಟೆಗೆ ಹಾಜರಾಗುವ ಮತದಾರರ ಸಹಿ ಹಾಗೂ ಫೋಟೋ ಕೂಡ ದಾಖಲಿಸಲಾಗುತ್ತದೆ. ನೋಟಿಸ್‌ನಲ್ಲಿ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಗತ್ಯ ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ.

ಸೆಪ್ಟೆಂಬರ್ 23ರೊಳಗೆ ದಾಖಲೆ ಸಲ್ಲಿಕೆ ಕಡ್ಡಾಯ

ನೋಟಿಸ್ ಪಡೆದ ಮತದಾರರು ಸೆಪ್ಟೆಂಬರ್ 23ರೊಳಗೆ ನಿಗದಿತ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಅವರ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ. ಭಾರತೀಯ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಆಧಾರ್ ಸೇರಿದಂತೆ ಯಾವುದೇ ಮಾನ್ಯ ದಾಖಲೆಯನ್ನು ಸಲ್ಲಿಸಬಹುದು. ದಾಖಲೆಗಳು ಸಮರ್ಪಕವಾಗದಿದ್ದರೆ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಚುನಾವಣಾ ಅಧಿಕಾರಿಗಳಿಗೆ ಇರುತ್ತದೆ.

ಅನಾರೋಗ್ಯ ಇದ್ದರೆ ಮನೆ ಬಾಗಿಲಿಗೇ ಅಧಿಕಾರಿಗಳು

ನೋಟಿಸ್ ಪಡೆದ ಬಳಿಕ ಖುದ್ದು ಹಾಜರಾಗಲು ಒಂದು ವಾರದ ಅವಕಾಶ ನೀಡಲಾಗುತ್ತದೆ. ಗೈರುಹಾಜರಿಗೆ ಒಂದು ಬಾರಿ ಮಾತ್ರ ವಿನಾಯಿತಿ ದೊರೆಯಲಿದೆ. ಅನಾರೋಗ್ಯ ಅಥವಾ ಅನಿವಾರ್ಯ ಕಾರಣಗಳಿಂದ ಮತಗಟ್ಟೆಗೆ ಬರಲು ಸಾಧ್ಯವಾಗದಿದ್ದರೆ, ಅಧಿಕಾರಿಗಳೇ ಮನೆಗೆ ಭೇಟಿ ನೀಡಿ ದಾಖಲೆ ಸ್ವೀಕರಿಸಲಿದ್ದಾರೆ.

ಹೆಚ್ಚುವರಿ ಅಧಿಕಾರಿಗಳ ನಿಯೋಜನೆ

43 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳನ್ನು ಗಡುವಿನೊಳಗೆ ವಿತರಿಸಲು ಹೆಚ್ಚುವರಿ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು (ಎಆರ್‌ಒ) ನಿಯೋಜಿಸಲಾಗುತ್ತಿದೆ. ದಿನಕ್ಕೆ ಸರಾಸರಿ 150 ನೋಟಿಸ್ ವಿತರಿಸುವ ಗುರಿಯನ್ನು ಆಯೋಗ ಹೊಂದಿದ್ದು, ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಮತದಾರರಿಗೆ ಅವಕಾಶ ಇರಲಿ

ಇದರ ನಡುವೆ, 11 ಮಂದಿ ವಿದೇಶಿಯರು ಎಪಿಕ್ ಹಾಗೂ ಆಧಾರ್ ಕಾರ್ಡ್ ಹೊಂದಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ವಿದೇಶಿಯರಿಗೆ ಮತದಾರರ ಗುರುತಿನ ಚೀಟಿ ಹೇಗೆ ನೀಡಲಾಯಿತು ಎಂಬುದರ ಕುರಿತು ಆಯೋಗ ಪ್ರತ್ಯೇಕ ತನಿಖೆ ಆರಂಭಿಸಿದೆ.

Exit mobile version