ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಸಾಗುತ್ತಿರುವ ಮಿಲಿಟರಿ ಪರೇಡ್ ದೇಶದ ರಕ್ಷಣಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತಿದೆ. ಆದರೆ, ಈ ಇಂದಿನ ಭವ್ಯತೆಯ ಹಿಂದೆ 1950ರ ಮೊದಲ ಗಣರಾಜ್ಯೋತ್ಸವದ ಸರಳ ಮತ್ತು ಸ್ಫೂರ್ತಿದಾಯಕ ಕಥೆಯಿದೆ.
1950ರಲ್ಲಿ ನಡೆದ ಭಾರತದ ಮೊದಲ ಗಣರಾಜ್ಯೋತ್ಸವದ ಒಟ್ಟು ವೆಚ್ಚ ಕೇವಲ ₹11,093 ಆಗಿತ್ತು. ಅಂದು ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದಿದ್ದರೂ ಜನರ ಮನದಲ್ಲಿ ಅಪ್ರತಿಮ ದೇಶಭಕ್ತಿಯಿತ್ತು. ಕಾಲ ಕಳೆದಂತೆ ಈ ಸಂಭ್ರಮದ ವ್ಯಾಪ್ತಿ ಹೆಚ್ಚುತ್ತಾ ಸಾಗಿತು. 1956ರಲ್ಲಿ ವೆಚ್ಚ ₹5.75 ಲಕ್ಷಕ್ಕೆ ಏರಿದರೆ, 2015ರ ವೇಳೆಗೆ ಅದು ₹320 ಕೋಟಿಗೂ ಅಧಿಕವಾಗಿತ್ತು. ಇಂದು ನಾವು ನೂರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಾಗತಿಕ ಮಟ್ಟದ ವೈಭವವನ್ನು ಕಣ್ಣುಂಬಿಕೊಳ್ಳುತ್ತಿದ್ದೇವೆ.
1950ರ ಮೊದಲ ಸಂಭ್ರಮ ಹೇಗಿತ್ತು?
ಅಂದು ಭಾರತ ಇನ್ನೂ ದೇಶ ವಿಭಜನೆಯ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ಸರ್ಕಾರವು ಅದ್ಧೂರಿತನಕ್ಕಿಂತ ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿತ್ತು. ಹೀಗಾಗಿ ಅಂದಿನ ಗಣರಾಜ್ಯೋತ್ಸವದಲ್ಲಿ ನಿರಾಶ್ರಿತರ ಶಿಬಿರದ ಮಕ್ಕಳಿಗೆ ಆಟಿಕೆಗಳು ಮತ್ತು ಮಹಿಳೆಯರಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಹಬ್ಬ ಆಚರಿಸಲಾಗಿತ್ತು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು ಮೊದಲ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂಭ್ರಮಕ್ಕೆ ನಮ್ಮೊಟ್ಟಿಗೆ ಮೊದಲ ಬಾರಿಗೆ ಇಂಡೋನೇಷ್ಯಾದ ಅಧ್ಯಕ್ಷ ಸುಕರ್ಣೋ ಅವರು ಅತಿಥಿಯಾಗಿ ಆಗಮಿಸಿದ್ದರು. ಕಾಲ ಕ್ರಮೇಣ ವಿವಿಧ ದೇಶದ ರಾಯಬಾರಿಗಳು, ಅಧ್ಯಕ್ವರುಗಳು ಈ ಸಂಭ್ರಮಕ್ಕೆ ಜೊತೆಯಾಗಿದ್ದಾರೆ.
2026ರ 77ನೇ ಗಣರಾಜ್ಯೋತ್ಸವದ ವಿಶೇಷತೆಗಳು
ಈ ಬಾರಿಯ ಪರೇಡ್ ಬದಲಾದ ಭಾರತದ ಬಲಿಷ್ಠ ರೂಪವನ್ನು ಪ್ರದರ್ಶಿಸುತ್ತಿದೆ.
-
ಸಮರ ವಿನ್ಯಾಸ (Battle Array): ಇದೇ ಮೊದಲ ಬಾರಿಗೆ ಯುದ್ಧ ಭೂಮಿಯ ಸನ್ನದ್ಧತೆಯನ್ನು ಬಿಂಬಿಸುವಂತೆ ಟ್ಯಾಂಕರ್ಗಳು ಮತ್ತು ಡ್ರೋನ್ಗಳ ಪಥಸಂಚಲನ ನಡೆಯುತ್ತಿದೆ.
-
ಬೃಹತ್ ಆಯುಧಗಳು: 300 ಕಿ.ಮೀ ದೂರದ ಶತ್ರು ತಾಣಗಳನ್ನು ಧ್ವಂಸ ಮಾಡುವ ಸೂರ್ಯಾಸ್ತ ರಾಕೆಟ್ ಲಾಂಚರ್ ಇಂದು ಜನರ ಗಮನ ಸೆಳೆಯಲಿದೆ.
-
ನಾರೀಶಕ್ತಿ: ಜಮ್ಮು ಕಾಶ್ಮೀರದ ಮಹಿಳಾ ಅಧಿಕಾರಿ ಸಿಮ್ರನ್ ಬಾಲಾ ಅವರು 140 ಪುರುಷರಿರುವ ಸಿಆರ್ಪಿಎಫ್ ತುಕಡಿಯನ್ನು ಮುನ್ನಡೆಸುವ ಮೂಲಕ ಇತಿಹಾಸ ಬರೆದಿದ್ದಾರೆ.
-
ಕರ್ನಾಟಕದ ಹೆಮ್ಮೆ: ಸೈನಿಕರೊಂದಿಗೆ ನಮ್ಮ ರಾಜ್ಯದ ಮುಧೋಳ ನಾಯಿಗಳು ಹಾಗೂ ಜನ್ಸ್ ಕಾರ್ ಕುದುರೆಗಳು ಪಥಸಂಚಲನದಲ್ಲಿ ಭಾಗವಹಿಸಿವೆ.
ಜನಸಾಮಾನ್ಯರೇ ಇಂದಿನ ವಿಐಪಿಗಳು!
ಈ ಬಾರಿ ಶಿಷ್ಟಾಚಾರದಲ್ಲಿ ದೊಡ್ಡ ಬದಲಾವಣೆ ಮಾಡಲಾದ್ದು, ಅತಿಥಿಗಳು ಕುಳಿತುಕೊಳ್ಳುವ ಗ್ಯಾಲರಿಗಳಿಗೆ ಗಂಗಾ, ಯಮುನಾ, ಕಾವೇರಿ ಅಂತಹ ಪುಣ್ಯ ನದಿಗಳ ಹೆಸರಿಡಲಾಗಿದೆ. ಅತಿ ಪ್ರಮುಖವಾಗಿ, 10,000 ವಿಶೇಷ ಅತಿಥಿಗಳ ಪಟ್ಟಿಯಲ್ಲಿ ಕೇವಲ ಗಣ್ಯರಿಲ್ಲ, ಬದಲಿಗೆ ಯಶಸ್ವಿ ರೈತರು, ವಿಜ್ಞಾನಿಗಳು, ಬೀದಿ ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳಿಗೆ ಮುಂಚೂಣಿಯ ಆಸನಗಳನ್ನು ನೀಡಲಾಗಿದೆ. ಇದು ಜನಸಾಮಾನ್ಯರ ಗಣರಾಜ್ಯೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
