ನಳಂದ ಶಸ್ತ್ರಾಸ್ತ್ರ ಕಾರ್ಖಾನೆಗೆ ಬಾಂಬ್‌ ಬೆದರಿಕೆ: ಕಾರ್ಖಾನೆ ಸುತ್ತಾ ಬಿಗಿ ಪೊಲೀಸ್‌ ಬಂದೋಬಸ್ತ್‌

Untitled design 2025 12 08T193740.328

ನಳಂದ : ಬಿಹಾರದ ನಳಂದ ಜಿಲ್ಲೆಯಲ್ಲಿರುವ ಅತ್ಯಂತ ಸೂಕ್ಷ್ಮ ಪ್ರದೇಶವಾದ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದ ನಂತರ, ಅಧಿಕಾರಿಗಳು ಕಾರ್ಖಾನೆ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ತೀವ್ರವಾಗಿ ಬಿಗಿಗೊಳಿಸಿದ್ದಾರೆ.

ಈ ಬೆದರಿಕೆ ಕರೆಯನ್ನು ನಿರ್ದಿಷ್ಟವಾಗಿ ಇಮೇಲ್ ಮೂಲಕ ಕಳುಹಿಸಲಾಗಿದೆ. ಈ ಇಮೇಲ್‌ನಲ್ಲಿ ಪಾಕಿಸ್ತಾನಿ ಏಜೆನ್ಸಿಗಳನ್ನು ಉಲ್ಲೇಖಿಸಲಾಗಿದ್ದು, ಅದು ತಮಿಳುನಾಡಿನಿಂದ ಬಂದಿರುವುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ನಿರ್ದಿಷ್ಟ ಇಮೇಲ್‌ನಿಂದಾಗಿ ಭದ್ರತಾ ಸಂಸ್ಥೆಗಳು ಕಾರ್ಖಾನೆ ಆವರಣದಲ್ಲಿ ತಕ್ಷಣವೇ ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆದಿಸಿದೆ.

ನಳಂದ ಜಿಲ್ಲೆಯ ರಾಜ್‌ಗೀರ್‌ನಲ್ಲಿ ಇರುವ ಈ ಶಸ್ತ್ರಾಸ್ತ್ರ ಕಾರ್ಖಾನೆಯೊಳಗೆ ಸ್ಫೋಟಕಗಳನ್ನು ಇಡಲಾಗಿದೆ ಎಂದು ಆ ಬೆದರಿಕೆ ಇಮೇಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಈ ಮಾಹಿತಿ ಸಿಕ್ಕ ತಕ್ಷಣವೇ ಜಿಲ್ಲಾಡಳಿತ ಮತ್ತು ಭದ್ರತಾ ಸಂಸ್ಥೆಗಳು ಎಚ್ಚೆತ್ತುಕೊಂಡವು.

ತಕ್ಷಣವೇ ಕಾರ್ಖಾನೆ ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ವಿಶೇಷ ತಂಡಗಳನ್ನು ನಿಯೋಜಿಸಲಾಯಿತು. ಕಾರ್ಖಾನೆ ಹಾಗೂ ಅದರ ಸುತ್ತಾ ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಮತ್ತು ಶ್ವಾನ ದಳದ ಸಿಬ್ಬಂಧಿಗಳು ಕಾರ್ಖಾನೆಯ ಪ್ರತಿಯೊಂದು ಮೂಲೆ, ಕಟ್ಟಡ ಮತ್ತು ಗೋಪ್ಯ ಸ್ಥಳಗಳಲ್ಲಿ ಕೂಲಂಕುಷವಾಗಿ ತಪಾಸಣೆ ನಡೆಸಿದವು.

ಶಸ್ತ್ರಾಸ್ತ್ರ ಕಾರ್ಖಾನೆ ಆವರಣದಲ್ಲಿ ಕೆಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆಯಿತು. ಇಡೀ ರಾಜ್‌ಗೀರ್ ಪಟ್ಟಣದಲ್ಲಿ ಸ್ವಲ್ಪ ಸಮಯದವರೆಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಡಿಎಸ್‌ಪಿ (ಉಪ ಅಧೀಕ್ಷಕರು) ಸುನಿಲ್ ಕುಮಾರ್ ಸಿಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ನಡೆಸಿದ ವ್ಯಾಪಕ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಕರೆ ಅಥವಾ ಬೆದರಿಕೆ ಆಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಕಾರ್ಖಾನೆಯ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬೆದರಿಕೆಯ ಹಿಂದಿನ ಉದ್ದೇಶ ಮತ್ತು ಇಮೇಲ್‌ನ ಮೂಲವನ್ನು ಪತ್ತೆಹಚ್ಚುವುದು ಈಗ ತನಿಖಾಧಿಕಾರಿಗಳ ಮುಂದಿರುವ ಪ್ರಮುಖ ಸವಾಲಾಗಿದೆ.

ಈ ಬಗ್ಗೆ ಡಿಎಸ್‌ಪಿ ಸುನಿಲ್ ಕುಮಾರ್ ಸಿಂಗ್ ಮಾತನಾಡಿ, ಇಮೇಲ್‌ನ ಮೂಲವನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಇದನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ತಿಳಿಯಲು ಪ್ರಕರಣವನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸಲಾಗಿದೆ. ಇಮೇಲ್ ತಮಿಳುನಾಡಿನಿಂದ ಬಂದಿರುವುದಾಗಿ ತಿಳಿದುಬಂದಿದ್ದು, ರಾಜ್ಯಗಳಾದ್ಯಂತ ಈ ಕೃತ್ಯದ ಹಿಂದಿರುವ ವ್ಯಕ್ತಿಗಳ ಅಥವಾ ಸಂಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಮಿಳುನಾಡು ಪೊಲೀಸರ ಸಹಕಾರವನ್ನೂ ಪಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ದೇಶದ ಪ್ರಮುಖ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ಗುರಿಯಾಗಿಸಿಕೊಂಡು ಬಂದಿರುವ ಈ ಬೆದರಿಕೆಯನ್ನು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಇದು ಕೇವಲ ಸ್ಥಳೀಯ ಬೆದರಿಕೆಯೋ ಅಥವಾ ರಾಷ್ಟ್ರ ವಿರೋಧಿ ಶಕ್ತಿಗಳ ಕೈವಾಡ ಇದೆಯೇ ಎಂಬುದರ ಕುರಿತು ಸೈಬರ್ ತನಿಖೆ ಮುಂದುವರೆದಿದೆ.

Exit mobile version