ಪಟ್ನಾ (ಬಿಹಾರ): 2025ರ ಬಿಹಾರ ವಿಧಾನಸಭಾ ಚುನಾವಣೆ ಹೊಸ ಭಾಷ್ಯ ಬರೆಯಲು ಹೊರಟಿದೆ. ಮತ ಎಣಿಕೆಯ ಆರಂಭಿಕ ಟ್ರೆಂಡ್ನಲ್ಲೇ ಎನ್ಡಿಎ ಭಾರೀ ಬಹುಮತದತ್ತ ಮುನ್ನುಗ್ಗುತ್ತಿದೆ. ಒಟ್ಟು 243 ಕ್ಷೇತ್ರಗಳ ಪೈಕಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದೆ. ಬಿಹಾರದಲ್ಲಿ ಯಾವುದೇ ಮೈತ್ರಿ ಕೂಟ ಬಹುಮತದ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 122.. ಆದರೆ, ಎನ್ಡಿಎ ತನ್ನ ಅಗತ್ಯ ಬಹುಮತವನ್ನು ಮೀರಿ ಮುನ್ನುಗ್ಗುತ್ತಿದ್ದು, ಮತ್ತೊಮ್ಮೆ ಸರ್ಕಾರ ರಚನೆಗೆ ಯಾವುದೇ ಸಂಕಷ್ಟವಿಲ್ಲ ಅನ್ನೋದು ಸಾಬೀತಾಗಿದೆ.
ಬಿಹಾರ ಮತ ಎಣಿಕೆಯ ಹೈಲೈಟ್ಸ್..!
- ಜನತಾ ದಳ (ಯುನೈಟೆಡ್) [ಜೆಡಿಯು] ಅತಿ ಹೆಚ್ಚು ಸೀಟ್ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಸ್ಪಷ್ಟವಾಗಿದೆ.
- ಮಹಾಘಟಬಂಧನ (ಆರ್ಜೆಡಿ, ಕಾಂಗ್ರೆಸ್) 60-65 ಸೀಟ್ಗಳಲ್ಲಿ ಮುನ್ನಡೆಯೊಂದಿಗೆ ನಿರಾಶಾದಾಯಕ ಫಲಿತಾಂಶ ನೀಡುತ್ತಿದ್ದು, ತೇಜಸ್ವಿ ಯಾದವ್ ನೇತೃತ್ವದ ಸರ್ಕಾರ ರಚನೆಯ ಸಾಧ್ಯತೆಯೇ ಇಲ್ಲ ಎನ್ನುವಂತಾಗಿದೆ.
- ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಮೊದಲ ಚುನಾವಣೆಯಲ್ಲಿ 0-5 ಸೀಟ್ಗಳಲ್ಲಷ್ಟೇ ಮುನ್ನಡೆ ಸಾಧಿಸಿದ್ದು, ಪಿಕೆ ಪಾರ್ಟಿಯ ರಾಜಕೀಯ ಪ್ರಭಾವವೇ ಪ್ರಶ್ನಾರ್ಹವಾಗಿದೆ..!
ಬಿಹಾರ ವಿಧಾನಸಭಾ ಚುನಾವಣೆಯ ಮತದಾನ 2 ಹಂತಗಳಲ್ಲಿ ನಡೆಯಿತು. ನವೆಂಬರ್ 6 ಮತ್ತು 11ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ 67.13%ರಷ್ಟು ವೋಟಿಂಗ್ ಆಗಿತ್ತು. ಇದು ಬಿಹಾರದ ಚರಿತ್ರೆಯಲ್ಲೇ ಅತ್ಯಧಿಕ ಮತದಾನ ದರವಾಗಿದೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಎನ್ಡಿಎ ನಾಯಕರು ಉತ್ಸಾಹಪೂರ್ವಕ ಪ್ರತಿಕ್ರಿಯೆ ನೀಡಿದ್ದಾರೆ. “ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ, ತೇಜಸ್ವಿ ಅವರ ಅಪರಿಪಕ್ವತೆ ಜನರಿಗೆ ತಿಳಿದಿದೆ.” ಎಂದು ಜೆಡಿಯು ನಾಯಕ ಅಶೋಕ್ ಚೌಧರಿ ಹೇಳಿದ್ದಾರೆ. “ಮೋದಿ-ನಿತೀಶ್ ಸಂಬಂಧದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ” ಎಂದು ಬಿಜೆಪಿಯ ಶಹನವಾಜ್ ಹುಸೈನ್ ಹೇಳಿದ್ದಾರೆ.
ಎಕ್ಸ್ (ಟ್ವಿಟರ್)ನಲ್ಲಿ #BiharElectionResults2025 ಹ್ಯಾಷ್ ಟ್ಯಾಗ್ ಜೊತೆಯಲ್ಲೇ ಎನ್ಡಿಎ ಗೆಲುವಿಗೆ ಹರ್ಷ ವ್ಯಕ್ತವಾಗಿದೆ. ನಿತೀಶ್ “ಕಮ್ ಬ್ಯಾಕ್” ಮತ್ತು ತೇಜಸ್ವಿ ಯಾದವ್ ನಿರಾಶಾದಾಯಕ ಸಾಧನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಬಿಹಾರ ಗೆಲುವಿನ ಐತಿಹಾಸಿಕ ಹಿನ್ನೆಲೆ..!
ಬಿಹಾರದ 2025ರ ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯದಲ್ಲಿ ಒಂದು ನಿರ್ಣಾಯಕ ಘಟ್ಟವಾಗಿತ್ತು. 2015ರಲ್ಲಿ ಮಹಾಘಟಬಂಧನ (ಆರ್ಜೆಡಿ-ಜೆಡಿಯು-ಕಾಂಗ್ರೆಸ್) ಗೆದ್ದ ನಂತರ, ನಿತೀಶ್ ಕುಮಾರ್ ಅವರು 2022ರಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಕಡಿತ ಮಾಡಿಕೊಂಡಿದ್ದು ರೋಮಾಂಚಕಾರಿ ರಾಜಕೀಯ ಬದಲಾವಣೆಗೆ ಕಾರಣವಾಯ್ತು. ನಂತರ 2024ರ ಲೋಕಸಭಾ ಚುನಾವಣೆಗೆ ಮುನ್ನ ಮತ್ತೆ ಎನ್ಡಿಎ ಕೈಹಿಡಿದ ನಿತೀಶ್ ಕುಮಾರ್, ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಎನ್ಡಿಎ ಜೊತೆ ಮುನ್ನಡೆದರು. ಬಿಜೆಪಿ, ಜೆಡಿಯು, ಎಲ್ಜೆಪಿ ಮೈತ್ರಿಯು ಆರ್ಜೆಡಿ, ಕಾಂಗ್ರೆಸ್ & ಇತರ ಪಕ್ಷಗಳ ಮಹಾಘಟಬಂಧನವನ್ನು ಮಣಿಸಿದೆ. ಇತ್ತ ಪ್ರಶಾಂತ್ ಕಿಶೋರ್ ಸಾರಥ್ಯದ ಜನ್ ಸುರಾಜ್ ಪಕ್ಷ ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿದೆ.
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಕಣದಲ್ಲಿ ಪ್ರಧಾನಿ ಮೋದಿ ಅವರ 20ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಎನ್ಡಿಎಗೆ ಶಕ್ತಿ ತುಂಬಿದ್ದರು. ‘ಮೋದಿ ಕಾ ಗ್ಯಾರಂಟಿ’ ಮತ್ತು ಬಿಹಾರಕ್ಕಾಗಿ ವಿಶೇಷ ಯೋಜನೆಗಳು ಬಿಜೆಪಿಯ ಕೊಡುಗೆಗಳಾಗಿದ್ದವು. ಇತ್ತ ನಿತೀಶ್ ಕುಮಾರ್ ಅವರು “ಟೈಗರ್ ಅಬಿ ಝಿಂದಾ ಹೈ” (ಹುಲಿ ಇನ್ನೂ ಬದುಕಿದೆ) ಎಂಬ ಧ್ವನಿಯೊಂದಿಗೆ ತಮ್ಮ ಸ್ಥಿರತೆಯನ್ನು ಒತ್ತಿ ಹೇಳಿದರು. ವಿರೋಧ ಪಕ್ಷಗಳು ಅಂತರ್ಜಾತೀಯತೆ, ಭ್ರಷ್ಟಾಚಾರ ಮತ್ತು ನಿರುದ್ಯೋಗ ವಿಚಾರ ಮುಂದಿಟ್ಟುಕೊಂಡು ಹೋರಾಡಿದರೂ, ಗೆಲ್ಲುವಲ್ಲಿ ವಿಫಲವಾದವು.
