ಬೆಂಗಳೂರಿನಲ್ಲಿ ಆ. 9ರಂದು ‘ತುಳುನಾಡ ಆಟಿ’ ಸಂಭ್ರಮ: ಕರಾವಳಿ ಸಂಸ್ಕೃತಿ ಅನಾವರಣಕ್ಕೆ ಕ್ಷಣಗಣನೆ

ಈಶ್ವರ ಖಂಡ್ರೆ (25)

ಬೆಂಗಳೂರು: ಕರಾವಳಿಯ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹಾಗೂ ಜಾನಪದ ಕಲೆಯನ್ನು ರಾಜಧಾನಿ ಬೆಂಗಳೂರಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ‘ಜೈ ತುಳುನಾಡ್ ಬೆಂಗಳೂರು (ರಿ.)’ ಸಂಸ್ಥೆಯು ಆಗಸ್ಟ್‌ 9, 2026ರಂದು ‘ತುಳುನಾಡ ಆಟಿ’ ಸಂಭ್ರಮ ಎಂಬ ಹೆಸರಿನಲ್ಲಿ ಬೃಹತ್ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ. ಬಿಳೇಕಹಳ್ಳಿಯ ವಿಜಯ ಬ್ಯಾಂಕ್ ಕಾಲೋನಿಯಲ್ಲಿರುವ ಮುಲ್ಕಿ ಸುಂದರ್ ರಾಮ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ತುಳುನಾಡು ಹಾಗೂ ಕರಾವಳಿ ಸಂಸ್ಕೃತಿ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ತುಳುನಾಡಿನ ಮಣ್ಣಿನ ಸೊಗಡು, ಆಚಾರ-ವಿಚಾರ ಹಾಗೂ ಜನಪದ ವೈಭವವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಈ ಉತ್ಸವವನ್ನು ರೂಪಿಸಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಕಲಾ ಪ್ರದರ್ಶನಗಳು ಹಾಗೂ ಸಾಂಪ್ರದಾಯಿಕ ಆಟೋಟಗಳು ನಡೆಯಲಿದ್ದು, ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜನರಿಗೆ ಪರಿಚಯಿಸಲಿವೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕರಾವಳಿಯ ಪ್ರಸಿದ್ಧ ಯಕ್ಷಗಾನ ಪ್ರದರ್ಶನ, ಆಟಿ ಕಲೆಂಜಿ ಸಂಪ್ರದಾಯದ ಪ್ರದರ್ಶನ, ಕುಣಿತ ಭಜನೆ ಹಾಗೂ ಇತರ ಜಾನಪದ ಕಲಾ ವೈಭವಗಳು ನಡೆಯಲಿವೆ. ಅಲ್ಲದೆ, ತುಳು ಭಾಷೆ, ತುಳು ಲಿಪಿ ಮತ್ತು ತುಳುನಾಡಿನ ಪರಂಪರೆಯ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 

ಈ  ಸಮಾರಂಭದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನಿರೀಕ್ಷೆಯಿದೆ. ಜೊತೆಗೆ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಬಿ. ಗುಣರಂಜನ್ ಶೆಟ್ಟಿ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಹಾಗೂ ಅಳುಪ ರಾಜವಂಶಸ್ಥ ಡಾ. ಆಕಾಶ್ ರಾಜ್ ಜೈನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ವೇದಿಕೆಯನ್ನು ಅಲಂಕರಿಸಲಿದ್ದಾರೆ.

ಕರಾವಳಿಯ ಸಂಸ್ಕೃತಿಯ ಸೊಬಗನ್ನು ಬೆಂಗಳೂರಿನ ಜನರಿಗೆ ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ‘ಜೈ ತುಳುನಾಡ್ ಬೆಂಗಳೂರು (ರಿ.)’ ಸಂಸ್ಥೆಯ ಅಧ್ಯಕ್ಷ ವಿನಯ್ ಮಣಿಯಾನ ಹಾಗೂ ಕಾರ್ಯದರ್ಶಿ ಅಕ್ಷಯ್ ಆಚಾರ್ಯ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Exit mobile version