ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಬೆಂಗಳೂರು ಕರಗ

Untitled design (4)

ಬೆಂಗಳೂರು: ಸಿಲಿಕಾನ್ ಸಿಟಿಯ ವಿಶ್ವವಿಖ್ಯಾತ ಬೆಂಗಳೂರು ಕರಗ ಬುಧವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ನೂರಾರು ವರ್ಷಗಳ ಇತಿಹಾಸವಿರುವ ಈ ಉತ್ಸವವು ನಗರದ ಹಳೆ ಬೆಂಗಳೂರು ಭಾಗದಲ್ಲಿ ಭಕ್ತಿ ಮತ್ತು ಪರಂಪರೆಯ ಸಂಗಮಕ್ಕೆ ಸಾಕ್ಷಿಯಾಯಿತು. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ದ್ರೌಪದಮ್ಮನ ಕರಗವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು.

ಭಕ್ತಿಯ ಕೇಂದ್ರಬಿಂದು ಮಲ್ಲಿಗೆ ಕರಗ

ಕರಗ ಉತ್ಸವದ ಪ್ರಮುಖ ಆಕರ್ಷಣೆಯೇ ಮಲ್ಲಿಗೆ ಹೂಗಳಿಂದ ಸುಂದರವಾಗಿ ಅಲಂಕೃತಗೊಂಡ ಕರಗ. ತಲೆಯ ಮೇಲೆ ಕರಗವನ್ನು ಹೊತ್ತ ಅರ್ಚಕರು ನೃತ್ಯ ಮಾಡುತ್ತಾ ಸಾಗುವ ದೃಶ್ಯ ಅವಿಸ್ಮರಣೀಯ. ಕರಗದ ಮೆರವಣಿಗೆ ಆರಂಭವಾಗುತ್ತಿದ್ದಂತೆ ಭಕ್ತರು “ಗೋವಿಂದ.. ಗೋವಿಂದ..” ಎಂದು ಎಲ್ಲರೂ ಜಪಿಸಿದರು.

ಕರಗ ಮೆರವಣಿಗೆಯ ಹಾದಿಯುದ್ದಕ್ಕೂ ಕೈಯಲ್ಲಿ ಖಡ್ಗ ಹಿಡಿದು “ದಿಕ್-ದೀ” ಎಂದು ಆರ್ಭಟಿಸುತ್ತಿದ್ದ ನೂರಾರು ವೀರಕುಮಾರರು ಕರಗಕ್ಕೆ ಕಾವಲಾಗಿ ಸಾಗಿದರು. ಕರಗ ಹೊತ್ತವರು ಎಲ್ಲಿಯೂ ಅತಪ್ಪಬಾರದು ಎಂಬ ನಂಬಿಕೆಯೊಂದಿಗೆ ಈ ವೀರಕುಮಾರರು ನಡೆಸುವ ಕಸರತ್ತು ರೋಮಾಂಚನಕಾರಿಯಾಗಿತ್ತು. ಸಂಪ್ರದಾಯದಂತೆ ಮಡಿವಾಳ ಮಾಚಿದೇವ ಹಂತದಿಂದ ಹಿಡಿದು ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಭಾವೈಕ್ಯತೆಯ ಸಂಕೇತ

ಸಾಂಪ್ರದಾಯಿಕ ಹಾದಿಯಲ್ಲಿ ಸಾಗುವ ಕರಗವು ಮಸ್ತಾನ ಸಾಬ್ ದರ್ಗಾಕ್ಕೆ ಭೇಟಿ ನೀಡುವುದು ಇಲ್ಲಿನ ವಿಶೇಷ. ಹಿಂದೂ-ಮುಸ್ಲಿಂ ಬಾಂಧವ್ಯದ ಈ ಅದ್ಭುತ ಪರಂಪರೆ ಇಂದಿಗೂ ಮುಂದುವರಿಯುತ್ತಿರುವುದು ಬೆಂಗಳೂರಿನ ಹಿರಿಮೆ.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜಕೀಯ ಗಣ್ಯರ ದಂಡೇ ಆಗಮಿಸಿತ್ತು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಉದಯ್ ಗರುಡಾಚಾರ್ ಮತ್ತು ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.  ರಾತ್ರಿಯಿಡೀ ನಡೆದ ಈ ಮೆರವಣಿಗೆಯು ಮುಂಜಾನೆ ಹೊತ್ತಿಗೆ ದೇವಸ್ಥಾನಕ್ಕೆ ಮರಳುವುದರೊಂದಿಗೆ ಸಂಪನ್ನವಾಯಿತು.

ಬೆಂಗಳೂರಿನಲ್ಲಿ ವಿಶ್ವವಿಖ್ಯಾತ ಕರಗ ವೈಭವ: ಬೀದಿ ಬೀದಿಗೂ ದೀಪಾಲಂಕಾರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಉತ್ಸವದ ಸಂಭ್ರಮ ರಂಗೇರಿದೆ. ವಿಶ್ವ ವಿಖ್ಯಾತ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕರಗ ಉತ್ಸವದ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದ ಸುತ್ತಮುತ್ತಲಿನ ಬೀದಿಗಳು ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ರಾತ್ರಿ 1 ಗಂಟೆಗೆ ಹೂವಿನ ಕರಗ
ಇಂದು ರಾತ್ರಿ 1 ಗಂಟೆ ಸುಮಾರಿಗೆ ಹೂವಿನ ಕರಗ ಹೊರ ಬರಲಿದೆ. ಬಳಿಕ ಸಂಪಂಗಿರಾಮ ನಗರ ಕೆರೆ ಸೇರಿದಂತೆ ಹಲವೆಡೆ ಪ್ರದಕ್ಷಿಣೆ ಹಾಕಲಿದೆ. ಅನಂತರ ಅಣ್ಣಮ್ಮದೇವಿ ಹಾಗೂ ತವಕ್ಕಲ್ ಮಸ್ತಾನ್ ದರ್ಗಾಗೆ ಭೇಟಿ ನೀಡಲಿದೆ. ಮುಂಜಾನೆ ವಾಪಸ್ ಧರ್ಮರಾಯಸ್ವಾಮಿ ಸನ್ನಿಧಿಗೆ ಆಗಮಿಸಲಿದೆ. ಪೂಜಾರಿ ಜ್ಞಾನೇಂದ್ರ ಅವರು ಈ ಬಾರಿ 16ನೇ ಬಾರಿಗೆ ಕರಗ ಹೊರಲಿದ್ದಾರೆ. ಇದು ಅವರ ಭಕ್ತಿ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್
ಕರಗ ಮಹೋತ್ಸವದ ಹಿನ್ನೆಲೆ ಧರ್ಮರಾಯ ದೇವಸ್ಥಾನದ ಬಳಿ ಭಾರಿ ಜನಸಂದಣಿ ಸೇರಿದೆ. ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಕುಮಾರ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾ ಅಂಡ್ ಆರ್ಡರ್ ಹಾಗೂ ಸಂಚಾರಿ ಪೊಲೀಸರು ಜಂಟಿಯಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಹಾಕಲಾಗಿದೆ. ಇಂದು ರಾತ್ರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬರೋಬ್ಬರಿ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಸಂಚಾರ ಮಾರ್ಗ ಬದಲಾವಣೆ
ಕರಗ ಮೆರವಣಿಗೆ ಹಿನ್ನೆಲೆಯಲ್ಲಿ ಆಯಾ ಸಮಯಕ್ಕೆ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅಕ್ಕಿಪೇಟೆ ಮತ್ತು ಓಟಿಸಿ ಮುಖ್ಯ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಕರಗ ಸಂಚಾರ ಮಾಡುವ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪ್ರಯಾಣಿಕರು SPG ರಸ್ತೆ, ಟೌನ್ ಹಾಲ್, ಕೆಂಪೇಗೌಡ ರಸ್ತೆ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.

ಜಾತ್ರೆ ಮಾದರಿಯ ಅಂಗಡಿಗಳಿಗೆ ಕೊಕ್
ಕರಗ ಉತ್ಸವದ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಹೂವು, ಲೈಟಿಂಗ್‌ಗಳ ಮೂಲಕ ದೇವಸ್ಥಾನವನ್ನು ಅಲಂಕರಿಸಲಾಗಿದೆ. ಈ ಬಾರಿ ಜಾತ್ರೆ ಮಾದರಿಯ ಅಂಗಡಿಗಳಿಗೆ ಕೊಕ್ ನೀಡಲಾಗಿದೆ. ಈ ಹಿಂದೆ ರಸ್ತೆಯ ಎರಡೂ ಬದಿಯಲ್ಲಿ ಅಂಗಡಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಸುಗಮ ವ್ಯವಸ್ಥೆಗಾಗಿ ಈ ಬಾರಿ ಬೀದಿ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿಲ್ಲ. ಈ ಬಾರಿ ಉತ್ಸವಕ್ಕೆ 15 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ.

Exit mobile version