“ಸಂಧ್ಯಾ ಕಿರಣ” ಆರೋಗ್ಯ ಯೋಜನೆಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್

Untitled design 2026 08 14T080031.861

ಬೆಂಗಳೂರು: ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸಮಗ್ರ ಆರೋಗ್ಯ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. “ಸಂಧ್ಯಾ ಕಿರಣ” ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ ಆಗಸ್ಟ್ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟವು, AB-ArK (ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ) ಯೋಜನೆಯ ನಿಯಮಾವಳಿಗಳಡಿ ಈ ಹೊಸ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಒಪ್ಪಿಗೆ ನೀಡಿದೆ. ಯೋಜನೆಯ ಮೂಲಕ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗೆ ಗುಣಮಟ್ಟದ ನಗದುರಹಿತ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ.

ಯಾರಿಗೆ ಅನ್ವಯ?

ಈ ಯೋಜನೆಯು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗೆ ಅನ್ವಯವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಸುಮಾರು 3.11 ಲಕ್ಷ ಪಿಂಚಣಿದಾರರು ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಒಟ್ಟು 4.93 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.

ಆರೋಗ್ಯ ವೆಚ್ಚದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಸರ್ಕಾರಿ ಸೇವೆಯಿಂದ ನಿವೃತ್ತರಾದ ನೌಕರರಿಗೆ ಜೀವನಪರ್ಯಂತ ಆರೋಗ್ಯ ಭದ್ರತೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

₹25 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ

“ಸಂಧ್ಯಾ ಕಿರಣ” ಯೋಜನೆಯಡಿ ಪ್ರತಿ ಅರ್ಹ ಕುಟುಂಬಕ್ಕೆ ವಾರ್ಷಿಕ ₹25 ಲಕ್ಷದವರೆಗೆ ಫ್ಲೋಟರ್ ಆಧಾರದ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ. ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆಯನ್ನು ನೋಂದಾಯಿತ ಮತ್ತು ಅನುಮೋದಿತ ಆಸ್ಪತ್ರೆಗಳಲ್ಲಿ ಸಂಪೂರ್ಣ ನಗದುರಹಿತವಾಗಿ ಪಡೆಯಬಹುದು.

ಯೋಜನೆಯಡಿ AB-ArKನಲ್ಲಿ ಜಾರಿಯಲ್ಲಿರುವ ಆರೋಗ್ಯ ಪ್ಯಾಕೇಜ್‌ಗಳು ಹಾಗೂ ಪರಿಷ್ಕೃತ ಚಿಕಿತ್ಸಾ ದರಗಳೇ ಅನ್ವಯವಾಗಲಿದ್ದು, ಸರ್ಕಾರಿ ಮತ್ತು ಪಟ್ಟಿ ಮಾಡಲಾದ ಖಾಸಗಿ ಆಸ್ಪತ್ರೆಗಳ ಜಾಲದ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ.

ಯೋಜನೆಯಡಿ ವಾರ್ಷಿಕವಾಗಿ ಸುಮಾರು ₹117 ಕೋಟಿ ವಂತಿಕೆ ಸಂಗ್ರಹವಾಗುವ ನಿರೀಕ್ಷೆಯಿದೆ. ಚಿಕಿತ್ಸಾ ವೆಚ್ಚವನ್ನು ಸುಮಾರು ₹81.75 ಕೋಟಿ ಎಂದು ಅಂದಾಜಿಸಲಾಗಿದ್ದು, AB-ArK ಮಾದರಿಯಂತೆ ಇದರ 70% ಫಲಾನುಭವಿಗಳ ವಂತಿಕೆಯಿಂದ ಹಾಗೂ 30% ರಾಜ್ಯ ಸರ್ಕಾರದಿಂದ ಭರಿಸಲಾಗುತ್ತದೆ.

ಅದರಂತೆ, ಸುಮಾರು ₹57.22 ಕೋಟಿ ಫಲಾನುಭವಿಗಳ ಪಾಲಾಗಿದ್ದು, ₹24.53 ಕೋಟಿ ಸರ್ಕಾರದ ಪಾಲಾಗಲಿದೆ. ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಕಾರ್ಪಸ್ ಬಳಕೆ ಪ್ರಮಾಣವು 85% ಮೀರಿದರೆ ವಂತಿಕೆ ದರವನ್ನು 0.05% ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆಯನ್ನೂ ಸರ್ಕಾರ ಪ್ರಸ್ತಾಪಿಸಿದೆ.

 ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿ

“ಸಂಧ್ಯಾ ಕಿರಣ” ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೊಳಿಸಲಾಗುತ್ತದೆ. ಫಲಾನುಭವಿಗಳ ನೋಂದಣಿ, ವಂತಿಕೆ ಸಂಗ್ರಹ, ಆಸ್ಪತ್ರೆಗಳ ಜಾಲ ನಿರ್ವಹಣೆ, ನಗದುರಹಿತ ಚಿಕಿತ್ಸಾ ಸೌಲಭ್ಯ, ಕ್ಲೈಮ್ ನಿರ್ವಹಣೆ ಹಾಗೂ ಯೋಜನೆಯ ಮೇಲ್ವಿಚಾರಣೆಯನ್ನು AB-ArK ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಿ ಅನುಷ್ಠಾನಗೊಳಿಸಲಾಗುತ್ತದೆ.

Exit mobile version