‘ಕುಮಾರಸ್ವಾಮಿ ಆಕಸ್ಮಿಕ ಸಿಎಂ, ಸಂವಿಧಾನವನ್ನೇ ಒಪ್ಪಲ್ಲ-ಚಲುವರಾಯಸ್ವಾಮಿ ಕಿಡಿ

Untitled design (77)

ಬೆಂಗಳೂರು:(ಜುಲೈ16) “ಎಚ್.ಡಿ. ಕುಮಾರಸ್ವಾಮಿಯವರು ಆಕಸ್ಮಿಕವೋ, ಆಪರೇಷನ್ ಕಮಲವೋ ಯಾವುದೋ ರೀತಿ ಸಿಎಂ ಆದವರು. ಅವರು ಏನೇ ಮಾಡಿದರೂ ಮಾಜಿ ಪ್ರಧಾನಿಗಳ ಮಗ ಎನ್ನುವುದು ಒಂದಿದೆ” ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಲೇವಡಿ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕುಮಾರಸ್ವಾಮಿ ನಿನ್ನೆ ನಗೆಪಾಟಲಿನ ವಿಚಾರ ಹೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಆದವರು. ಒಬ್ಬ ರಾಜಕಾರಣಿ ಇಂತಹ ಮಾತನಾಡಲು ಸಾಧ್ಯವೇ? ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ನಾನು ಸಿಎಂ ಆಗಿ ಒಪ್ಪಿಲ್ಲ ಎಂದಿದ್ದಾರೆ. ಅಂದರೆ ಸಂವಿಧಾನವನ್ನು ಕುಮಾರಸ್ವಾಮಿ ಒಪ್ಪಲ್ಲ ಎಂದು ಅರ್ಥ” ಎಂದು ಹರಿಹಾಯ್ದರು.

136 ಶಾಸಕರ ಬೆಂಬಲದ ಸಿಎಂ ಡಿಕೆಶಿ

“15 ಜನರೋ 35 ಜನರೋ ಆಯ್ಕೆಯಿಂದ ಡಿ.ಕೆ. ಶಿವಕುಮಾರ್ ಸಿಎಂ ಆದವರಲ್ಲ. 136 ಶಾಸಕರನ್ನು ಗೆದ್ದು ಡಿ.ಕೆ. ಶಿವಕುಮಾರ್ ಸಿಎಂ ಆದವರು. ಸಿದ್ದರಾಮಯ್ಯ ಅವರು ಬಹಳ ಸಂತೋಷದಿಂದ ಡಿ.ಕೆ. ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಟ್ಟಿದ್ದಾರೆ. ಕುಮಾರಸ್ವಾಮಿಯಿಂದ ನಾವು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ” ಎಂದು ಗುಡುಗಿದರು. “ಮಿಸ್ಟರ್ ಕುಮಾರಸ್ವಾಮಿ ಅಂತ ಹೇಳುವುದಕ್ಕೆ ನಮಗೂ ಬರುತ್ತದೆ. ಕುಮಾರಸ್ವಾಮಿಯವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ” ಎಂದು ಎಚ್ಚರಿಕೆ ನೀಡಿದರು.

2006ರಲ್ಲಿ ತಿಪ್ಪಣ್ಣನನ್ನು ಎತ್ತಾಕಿ ಸಿಎಂ ಮಾಡಿದ್ವಿ

2006ರ ರಾಜಕೀಯ ಬೆಳವಣಿಗೆಯನ್ನು ನೆನಪಿಸಿದ ಚಲುವರಾಯಸ್ವಾಮಿ, “ಜನತಾ ದಳದಿಂದ 2006ರಲ್ಲಿ ಅಧಿಕೃತವಾಗಿ ನಾಯಕನಾಗಿ ಆಯ್ಕೆ ಆಗಿದ್ರಾ ನೀವು? ತಿಪ್ಪಣ್ಣ ಅವತ್ತು ಜೆಡಿಎಸ್ ಅಧ್ಯಕ್ಷರು. ತಿಪ್ಪಣ್ಣ ಅವರನ್ನು ಎತ್ತಾಕಿಕೊಂಡು ಇಟ್ಟುಕೊಂಡಿದ್ವಿ. ನಾನು, ಸಂತೋಷ್ ಲಾಡ್ ಒಂದು ಕಡೆ ಎತ್ತಾಕಿ ಇಟ್ಟುಕೊಂಡು ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಮಾಡಿದ್ವಿ” ಎಂದು ಹಳೆಯ ಘಟನೆಯನ್ನು ಬಿಚ್ಚಿಟ್ಟರು.

“ರಾಜಕೀಯದಲ್ಲಿ ಹೀಗೆ ಲಘುವಾಗಿ ಬಾಯಿಗೆ ಬಂದಂತೆ ಮಾತನಾಡುವುದು ಬೇಡ. ರಾಜಕಾರಣಿ, ಜನಪ್ರತಿನಿಧಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ” ಎಂದು ಸಲಹೆ ನೀಡಿದರು.

ಮೊದಲ ಆಪರೇಷನ್ ಕಮಲ ನಿಮ್ಮದೇ

“ಮೊದಲ ಬಾರಿ ಆಪರೇಷನ್ ಕಮಲ ಮಾಡಿದವರು ಕುಮಾರಸ್ವಾಮಿ. ಕುಮಾರಸ್ವಾಮಿ ಹೇಗೆ ಸಿಎಂ ಆದ್ರಿ ನೆನಪಿಸಿಕೊಳ್ಳಿ ಒಮ್ಮೆ. ಕುಮಾರಸ್ವಾಮಿ ಸಂವಿಧಾನಾತ್ಮಕ ಆಯ್ಕೆಯಾದ ಮುಖ್ಯಮಂತ್ರಿನಾ?” ಎಂದು ಪ್ರಶ್ನಿಸಿದರು.

“ಕುಮಾರಸ್ವಾಮಿ ನಾಯಕತ್ವದಲ್ಲಿ ಯಾವತ್ತೂ 37 ಸೀಟಿಗಿಂತ ಮೇಲೆ ಹೋಗಿಲ್ಲ. ಸಂವಿಧಾನದ ಪ್ರಕಾರ ಆಯ್ಕೆಯಾದ ಸಿಎಂ ಡಿ.ಕೆ. ಶಿವಕುಮಾರ್. ಡಿ.ಕೆ. ಶಿವಕುಮಾರ್ ಸಿಎಂ ಆಗಿ ಒಂದೇ ತಿಂಗಳಾಗಿದೆ. ಅವರ ಮೇಲೆ ಒಂದಲ್ಲ ಒಂದು ವಿಚಾರದಲ್ಲಿ ಹೊಟ್ಟೆಕಿಚ್ಚಿನ ಮಾತು ನಿಮ್ಮಿಂದ ಬರುತ್ತಿದೆ” ಎಂದು ಆರೋಪಿಸಿದರು.

ಒಕ್ಕಲಿಗ ಡಿಕೆಶಿ ಸಹಿಸಲ್ಲ

“ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಏನೇನ್ ಮಾಡಿದ್ದೀರಾ ಗೊತ್ತಿದೆ. ಎಸ್.ಎಂ. ಕೃಷ್ಣ ಅವರನ್ನು ಮತ್ತೆ ಸಿಎಂ ಮಾಡಲು ಒಪ್ಪದೇ ಇರುವವರು ನೀವು. ಮತ್ತೊಬ್ಬ ಒಕ್ಕಲಿಗ ಡಿ.ಕೆ. ಶಿವಕುಮಾರ್ ಅವರನ್ನು ಒಪ್ಪಲು ಸಾಧ್ಯನಾ ನೀವು? ಕುಮಾರಸ್ವಾಮಿ ಇಷ್ಟೊಂದು ಕೆಟ್ಟ ಮನಸ್ಥಿತಿ ಇಟ್ಟುಕೊಂಡಿದ್ದೀರಲ್ಲ?” ಎಂದು ವಾಗ್ದಾಳಿ ನಡೆಸಿದರು.

“ಆದರೂ ಡಿ.ಕೆ. ಶಿವಕುಮಾರ್ ಕುಮಾರಸ್ವಾಮಿ ಅವರನ್ನು ಅಣ್ಣ ಎಂದಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ನೋಡಿ ಕಲಿತುಕೊಳ್ಳಿ ಸ್ವಲ್ಪ. ಡಿ.ಕೆ. ಶಿವಕುಮಾರ್ ಬೆನ್ನಿಗೆ 136 ಶಾಸಕರಿದ್ದಾರೆ. ನಿಮ್ಮ ಬೆನ್ನಿಗೆ 20 ಜನ ಇಲ್ಲ, ಇಷ್ಟು ಮಾತನಾಡ್ತೀರಲ್ಲರೀ” ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು

Exit mobile version