ಬೆಂಗಳೂರು: ನಗರದ ಗಾಯತ್ರಿ ವಿಹಾರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ʼಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3ʼಗೆ ಖ್ಯಾತ ಚಿತ್ರ ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಐಂದ್ರಿತಾ ರೈ ಮತ್ತು ದಿಗ್ಗಜರು ಚಾಲನೆ ನೀಡಿದರು.
ಡಾರ್ಲಿಂಗ್ ಕೃಷ್ಣ ಮಾತನಾಡಿ, ʼಕ್ರಿಕೆಟ್ ಎಲ್ಲರ ಅಚ್ಚುಮೆಚ್ಚಿನ ಆಟ. ಉತ್ತಮ ಪ್ರತಿಭೆಗಳನ್ನು ಹುಡುಕಿ ಜಗತ್ತಿಗೆ ತೋರಿಸುವ ಕಾರ್ಯವನ್ನು ಕೆಎಸ್ಪಿಎಲ್ ತಂಡ ಕೈಗೊಂಡಿರುವುದು ಶ್ಲಾಘನೀಯʼ ಎಂದರು. ʼನಾನು ಮ್ಯಾಚ್ ಆಡಿದ್ದೆ ಸಾಫ್ಟ್ ಬಾಲ್ ಸಾಫ್ಟ್ ಆಗಿ ಇರುತ್ತೇ ಅಂದುಕೊಂಡಿದ್ದೆ. ಆದರೆ, ಹೇಳುವುದಕ್ಕೆ ಮಾತ್ರ ಸಾಫ್ಟ್ ಬಾಲ್ ಅದು ಕೂಡ ತುಂಬಾ ಸಿಕ್ಕಾಪಟ್ಟೆ ಹಾರ್ಡ್ ಆಗಿರುತ್ತೆ ಅಂತ ಆಡಿದ ಮೇಲೆ ಅನುಭವವಾಯಿತು, ಲೇದರ್ ಬಾಲ್ ನ ಆಟಕ್ಕೂ ಸಾಫ್ಟ್ ಬಾಲ್ ಆಟಕ್ಕೂ ಬಹಳ ವ್ಯತ್ಯಾಸ ಇರುತ್ತದೆʼ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ನಟಿ ಐಂದ್ರೀತಾ ರೈ ಮಾತನಾಡಿ, ʼಕ್ರಿಕೆಟ್ಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾವಂತರಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವುದು ಮುಖ್ಯ. ಅಂತಹ ಅವಕಾಶ ಒದಗಿಸಿರುವ ಕೆಎಸ್ಪಿಎಲ್ ತಂಡದ ಕಾರ್ಯ ಶ್ಲಾಘನೀಯ ಎಂದರು.
ಕೆಎಸ್ಪಿಎಲ್ ಕ್ರಿಕೆಟ್ ಫೌಂಡೇಷನ್ನ ಡಾ.ಗಂಗಾಧರ್ ರಾಜು ಮಾತನಾಡಿ, ಸಂಸ್ಥೆಯು ಪ್ರಾರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು ಮತ್ತು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸೃಷ್ಟಿಸಲು ಪಟ್ಟ ಶ್ರಮವನ್ನು ವಿವರಿಸಿದರು. ʼಗ್ರಾಮೀಣ ಭಾಗದ ಕ್ರೀಡಾಪಟುಗಳು ನಮ್ಮ ಆಸ್ತಿ. ಅವರ ಬೆಳವಣಿಗೆಯೇ ನಮ್ಮ ಧ್ಯೇಯ. ಗ್ರಾಮೀಣ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ ಆಯ್ಕೆಯಾಗಬೇಕು ಎನ್ನುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶʼ ಎಂದು ತಿಳಿಸಿದರು.
ಈಗ ರಾಜ್ಯದ ಎಲ್ಲ ಜಿಲ್ಲೆಗಳಿಂದ ಕ್ರಿಡಾಪಟುಗಳನ್ನು ಆಯ್ಕೆ ಮಾಡಿದಂತೆಯೇ, ರಾಷ್ಟ್ರಮಟ್ಟದಲ್ಲೂ ಐಎಸ್ಪಿಎಲ್ ಪಂದ್ಯಾವಳಿ ಆಯೋಜಿಸುವ ಬಗ್ಗೆಯೂ ಅವರು ತಮ್ಮ ಪರಿಕಲ್ಪನೆಯನ್ನು ಸಮಾರಂಭದಲ್ಲಿ ಹಂಚಿಕೊಂಡರು.
ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಕರ್ನಾಟಕ ಸಾಫ್ಟ್ ಪ್ರಿಮಿಯರ್ ಲೀಗ್ ಅಧ್ಯಕ್ಷ ಸಿದ್ದರಾಮ್ ದೇಸಾಯಿ, ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಡಾ. ಗಂಗಾಧರ್ ರಾಜು, ಖ್ಯಾತ ನಿರ್ದೇಶಕ ಎಸ್.ನಾರಾಯಣ್, ಖ್ಯಾತ ನಟ ರವಿಚೇತನ್ ಉಪಸ್ಥಿತರಿದ್ದರು.
