ಜಿಬಿಎ ಚುನಾವಣೆಗೆ ನೂರೆಂಟು ವಿಘ್ನ! ಚುನಾವಣೆ ಮುಂದೂಡುವ ಪ್ಲಾನ್‌ನಲ್ಲಿದ್ಯಾ ಸರ್ಕಾರ..?

Gba

ಬೆಂಗಳೂರು: ಗ್ರೇಟರ್‌ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಚುನಾವಣೆ ನಡೆಸುವುದಾಗಿ ಹೇಳಿದ್ದ ಸರ್ಕಾರ ಈಗ ಚುನಾವಣೆಯನ್ನು ಮುಂದೂಡುವ ಯೋಜನೆಯಲ್ಲಿದೆ ಎಂದು ತಿಳಿದುಬಂದಿದೆ. ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ವಿಚಾರದಲ್ಲಿ ತೀವ್ರ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ವಾರ್ಡ್ ವಿಂಗಡಣೆಯಲ್ಲಿ ಮುಖ್ಯ ರಸ್ತೆಗಳನ್ನು ಆಧರಿಸಿ ವಿಂಗಡಿಸಬೇಕಿತ್ತು. ಆದರೆ ಅಧಿಕಾರಿಗಳು ಅಡ್ಡ ರಸ್ತೆಗಳನ್ನು ಆಧರಿಸಿ ವಿಂಗಡಣೆ ಮಾಡಿರುವ ಆರೋಪಗಳಿವೆ. ಒಂದೇ ಬೂತ್‌ನ್ನು ಎರಡು ವಾರ್ಡ್‌ಗಳಾಗಿ ವಿಭಜಿಸಲಾಗಿದೆ. ಕೆಲವು ವಾರ್ಡ್‌ಗಳಲ್ಲಿ 9,000 ಮತದಾರರಿದ್ದರೆ, ಇನ್ನು ಕೆಲವು ವಾರ್ಡ್‌ಗಳಲ್ಲಿ 45,000 ಮತದಾರರಿದ್ದಾರೆ. ಇಂತಹ ಭಾರೀ ಅಸಮತೋಲನ ಕಂಡುಬಂದಿದೆ.

ಮೀಸಲಾತಿ ವ್ಯವಸ್ಥೆಯಲ್ಲೂ ಗೊಂದಲ:

369 ವಾರ್ಡ್‌ಗಳಿಗೆ 50% ಮಹಿಳಾ ಮೀಸಲಾತಿ ನೀಡಬೇಕಿತ್ತು. ಆದರೆ ಕೇವಲ 176 ವಾರ್ಡ್‌ಗಳಲ್ಲಿ ಮಾತ್ರ ಮಹಿಳಾ ಮೀಸಲು ನೀಡಲಾಗಿದೆ ಎನ್ನಲಾಗಿದೆ . ಇದರ ಜೊತೆಗೆ OBC ಸಮುದಾಯಕ್ಕೆ 11 ಸ್ಥಾನಗಳ ಕೊರತೆ ಉಂಟಾಗಿದೆ ಎಂದು ಆರೋಪಿಸಲಾಗುತ್ತಿದೆ.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ದೊಡ್ಡ ತಪ್ಪುಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಸಲಹೆ ಮೇರೆಗೆ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಎದ್ದಿದೆ.

ಚುನಾವಣೆ ನಡೆಸುವುದಾಗಿ ಹೇಳಿದ್ದ ಸರ್ಕಾರ ಈಗ ಎಲ್ಲಾ ದೋಷಗಳನ್ನು ಸರಿಪಡಿಸಲು ಸಮಯ ಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇದರಿಂದ ಈ ವರ್ಷ ಚುನಾವಣೆ ಮುಂದೂಡುವ ಸಾಧ್ಯತೆ ಹೆಚ್ಚಿದೆ.

ವಿರೋಧ ಪಕ್ಷಗಳು ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. “ದೋಷಗಳನ್ನು ಮುಚ್ಚಿಹಾಕಲು ಚುನಾವಣೆ ಮುಂದೂಡುವ ತಂತ್ರ” ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಬಿಬಿಎಂಪಿ ಚುನಾವಣೆಗೆ ಈಗಾಗಲೇ ನೂರಾರು ತೊಂದರೆಗಳು ಎದುರಾಗಿವೆ. ವಾರ್ಡ್ ವಿಂಗಡಣೆ, ಮೀಸಲಾತಿ ಮತ್ತು ಮತದಾರರ ಪಟ್ಟಿಯಲ್ಲಿನ ದೋಷಗಳು ಸರಿಪಡಿಸದೆ ಚುನಾವಣೆ ನಡೆಸುವುದು ಕಷ್ಟ ಎಂದು ಸರ್ಕಾರ ಹೇಳುತ್ತಿದೆ.

ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಈಗ ಎಲ್ಲರ ದೃಷ್ಟಿಯಲ್ಲಿ ಕುತುಹಲ ಹುಟ್ಟುಹಾಕಿದೆ. ಈ ರೀತಿಯಾಗಿ ಜಿಬಿಎ ಈ ಬಾರಿಯೂ ಚುನಾವಣೆ ನಡೆಸುವುದು ಬಹು ನಿರೀಕ್ಷಿತವಾಗಿ ಇಲ್ಲ ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

 

Exit mobile version