ನಕಲಿ ಔಷಧ ದಂಧೆಗೆ ಬಿಗ್ ಟ್ವಿಸ್ಟ್; ತನಿಖೆಗೆ SIT ರಚನೆ

Untitled design 2026 08 20T193723.339

ಬೆಂಗಳೂರು ದಕ್ಷಿಣದ ದೊಡ್ಡೇರಿ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ಬೃಹತ್ ನಕಲಿ ಔಷಧ ಜಾಲ ಪ್ರಕರಣ ಬಗೆದಷ್ಟೂ ಆತಂಕಕಾರಿ ಮಾಹಿತಿಗಳು ಹೊರಬರುತ್ತಿವೆ. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ (MNC) ಬ್ರ್ಯಾಂಡ್‌ಗಳ ಹೆಸರನ್ನು ಬಳಸಿಕೊಂಡು ಜೀವಕ್ಕೆ ಅಪಾಯ ಉಂಟುಮಾಡಬಹುದಾದ ನಕಲಿ ಇಂಜೆಕ್ಷನ್‌ಗಳು ಹಾಗೂ ಮಾತ್ರೆಗಳನ್ನು ತಯಾರಿಸಿ ಪೂರೈಸುತ್ತಿದ್ದ ಅಂತಾರಾಜ್ಯ ಜಾಲದ ವಿರುದ್ಧ ತನಿಖೆ ತೀವ್ರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ದಂಧೆಯ ಕಿಂಗ್‌ಪಿನ್ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದೀಗ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಆದೇಶಿಸಿದೆ. ಹಿರಿಯ IPS ಅಧಿಕಾರಿ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ SIT ರಚಿಸಲಾಗಿದ್ದು, ತಂಡದಲ್ಲಿ IPS ಅಧಿಕಾರಿಗಳಾದ ಶಿವಪ್ರಕಾಶ್ ಮತ್ತು ಲೋಕೇಶ್, ಸಹಾಯಕ ಔಷಧ ನಿಯಂತ್ರಕರಾದ ಮಂಜುನಾಥ್ ರೆಡ್ಡಿ ಹಾಗೂ ನಮ್ರತಾ ಹಲ್ಲೂರು ಮತ್ತು ಔಷಧ ನಿರೀಕ್ಷಕಿ ನೇಹಾ ಮುರ್ಗಿ ಅವರನ್ನು ಒಳಗೊಂಡಂತೆ ತಂಡ ರಚಿಸಲಾಗಿದೆ.

ದೊಡ್ಡೇರಿ ನಕಲಿ ಔಷಧ ಪ್ರಕರಣ ಬೆಳಕಿಗೆ ಬಂದ ದಿನವೇ ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕರಣದ ಗಂಭೀರತೆಯನ್ನು ಗಮನಿಸಿ SIT ತನಿಖೆ ನಡೆಸುವ ಕುರಿತು ಸುಳಿವು ನೀಡಿದ್ದರು. ಇದೀಗ ಸರ್ಕಾರ ಅಧಿಕೃತವಾಗಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದೆ.

ಕರ್ನಾಟಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಂಗ್ ಆಗಸ್ಟ್ 18ರಂದು ಬಿದದಿ ಸಮೀಪದ ನಂ.34 ಕುರುಬರಹಳ್ಳಿ ಗ್ರಾಮದ ಲೈಸೆನ್ಸ್ ಇಲ್ಲದ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಭಾರೀ ಪ್ರಮಾಣದ ನಕಲಿ ಔಷಧಗಳು ಪತ್ತೆಯಾಗಿವೆ. ಮಾತ್ರವಲ್ಲದೆ ಬಲ್ಕ್ ಸ್ಟಾಕ್, ಔಷಧ ಪ್ಯಾಕೇಜಿಂಗ್‌ಗೆ ಬಳಸುತ್ತಿದ್ದ ಯಂತ್ರಗಳು, ಖಾಲಿ ವಯಲ್‌ಗಳು ಹಾಗೂ ನಕಲಿ ಲೇಬಲ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ವಶಪಡಿಸಿಕೊಂಡ ವಸ್ತುಗಳ ಒಟ್ಟು ಅಂದಾಜು ಮೌಲ್ಯ ಬರೋಬ್ಬರಿ 5,05,49,575 ರೂಪಾಯಿ ಎಂದು ತಿಳಿದುಬಂದಿದೆ. ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಸಿದ್ಧಪಡಿಸಿ ಅವುಗಳನ್ನು ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಈ ಜಾಲದ ಹಿಂದೆ ಯಾರು ಕಾರ್ಯನಿರ್ವಹಿಸುತ್ತಿದ್ದರು? ನಕಲಿ ಔಷಧಗಳನ್ನು ಯಾವೆಲ್ಲ ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು? ಆಸ್ಪತ್ರೆಗಳು, ಮೆಡಿಕಲ್‌ ಶಾಪ್‌ಗಳು ಅಥವಾ ಇತರ ಮಾರ್ಗಗಳ ಮೂಲಕ ಇವು ಮಾರುಕಟ್ಟೆ ಪ್ರವೇಶಿಸಿದ್ದವೇ ಎಂಬ ಹಲವು ಪ್ರಶ್ನೆಗಳಿಗೆ SIT ತನಿಖೆಯಲ್ಲಿ ಉತ್ತರ ಸಿಗಬೇಕಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎನ್ನಲಾಗಿರುವ ಕಿಂಗ್‌ಪಿನ್‌ನ ಪತ್ತೆಗೂ ತನಿಖಾ ತಂಡ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ನಕಲಿ ಔಷಧಗಳು ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮಹತ್ವ ಪಡೆದುಕೊಂಡಿದೆ. ಇದೀಗ SIT ತನಿಖೆ ಆರಂಭವಾಗಿರುವುದರಿಂದ ಈ ಅಂತಾರಾಜ್ಯ ದಂಧೆಯ ಸಂಪೂರ್ಣ ಜಾಲ ಬಯಲಾಗುವ ನಿರೀಕ್ಷೆ ಮೂಡಿದೆ.

Exit mobile version