ಬೆಂಗಳೂರು (ಜುಲೈ 14): ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಸರ್ಕಾರ ತಕ್ಷಣ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಉದ್ಭವಿಸುತ್ತಿರುವ ಬರ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿ, ಅಗತ್ಯ ಪರಿಹಾರ ಹಾಗೂ ನೆರವು ನೀಡುವಂತೆ ಅವರು ಒತ್ತಾಯಿಸಿದ್ದಾರೆ.
I have written to Hon’ble Prime Minister Shri @narendramodi seeking urgent intervention in view of the emerging drought situation in Karnataka.
The State has recorded a significant monsoon deficit, delayed kharif sowing, low reservoir storage and increasing stress on… pic.twitter.com/C6TG0lFUjI
— DK Shivakumar (@DKShivakumar) July 14, 2026
- ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಕಳುಹಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಡಿ.ಕೆ.ಶಿ ಮನವಿ
- ರಾಜ್ಯದಲ್ಲಿ ಶೇ.30ರಷ್ಟು ಮಳೆ ಕೊರತೆ
- 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಳೆ ಅಭಾವ
- 141 ತಾಲೂಕುಗಳು ಮಳೆ ಕೊರತೆಯಿಂದ ಬಾಧಿತ
- ಪ್ರಮುಖ 14 ಜಲಾಶಯಗಳಲ್ಲಿ ಶೇ.34ರಷ್ಟು ಮಾತ್ರ ನೀರಿನ ಸಂಗ್ರಹ
- ರೈತರಿಗೆ ನೆರವು ನೀಡಲು ಕೇಂದ್ರದ ತುರ್ತು ಕ್ರಮಕ್ಕೆ ಆಗ್ರಹ
ಪತ್ರದಲ್ಲಿ ರಾಜ್ಯದ ಮಳೆ ಪರಿಸ್ಥಿತಿಯ ಕುರಿತು ವಿವರಿಸಿರುವ ಮುಖ್ಯಮಂತ್ರಿ, 2026ರ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಳೆ ಅಭಾವ ಕಂಡುಬಂದಿದ್ದು, 141 ತಾಲೂಕುಗಳು ಮಳೆ ಕೊರತೆಯಿಂದ ತೀವ್ರವಾಗಿ ಬಾಧಿತವಾಗಿವೆ ಎಂದು ಉಲ್ಲೇಖಿಸಿದ್ದಾರೆ.
ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಕೇವಲ ಶೇ.34ರಷ್ಟು ಮಾತ್ರ ಪೂರ್ಣಗೊಂಡಿದೆ. ಅಲ್ಲದೆ, ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಸಂಗ್ರಹ ಕೇವಲ ಶೇ.34ರಷ್ಟೇ ಉಳಿದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕವು 10 ವಿಭಿನ್ನ ಕೃಷಿ ಹವಾಮಾನ ವಲಯಗಳನ್ನು ಹೊಂದಿದ್ದು, ರಾಜ್ಯದ ಸುಮಾರು ಶೇ.77ರಷ್ಟು ಭೌಗೋಳಿಕ ಪ್ರದೇಶ ಶುಷ್ಕ ಹಾಗೂ ಅರೆ-ಶುಷ್ಕ ವಲಯಕ್ಕೆ ಸೇರಿದೆ. ಸುಮಾರು 84.79 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಕೃಷಿ ಭೂಮಿ ಹೊಂದಿರುವ ಕರ್ನಾಟಕದಲ್ಲಿ ಕೃಷಿ ಉತ್ಪಾದನೆ ಬಹುತೇಕ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಹೀಗಾಗಿ ಮಳೆ ಕೊರತೆಯು ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮುಂಚಿತವಾಗಿಯೇ ಎಲ್ ನಿನೋ ಪರಿಣಾಮದಿಂದ 2026ರ ನೈಋತ್ಯ ಮುಂಗಾರು ದುರ್ಬಲವಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆ, ಜುಲೈ 11, 2026ರವರೆಗೆ ವಾಡಿಕೆ 292 ಮಿ.ಮೀ. ಮಳೆಯ ಬದಲಿಗೆ ಕೇವಲ 203 ಮಿ.ಮೀ. ಮಳೆಯಾಗಿದೆ ಎಂದು ಮುಖ್ಯಮಂತ್ರಿ ಅವರು ಪ್ರಧಾನಿ ಅವರ ಗಮನಕ್ಕೆ ತಂದಿದ್ದಾರೆ.
ಕೇಂದ್ರ ಸರ್ಕಾರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದರೆ, ಬರದ ತೀವ್ರತೆಯನ್ನು ನೇರವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಸರ್ಕಾರ ತಮ್ಮೊಂದಿಗೆ ಇದೆ ಎಂಬ ವಿಶ್ವಾಸ ಮೂಡಲಿದೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
