ನಿಮ್ಮ ಅವಧಿಯಲ್ಲೇ 5 ಲಕ್ಷ ಕೋಟಿ ಸಾಲ: ನೀವು ಸಾಲರಾಮಯ್ಯ ಅಲ್ಲವೇ ? ಸಿ.ಟಿ ರವಿ ವಾಗ್ದಾಳಿ

Untitled design (22)

ಬಾಗಲಕೋಟೆ: ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ವೈಫಲ್ಯಗಳ ಕುರಿತು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯವನ್ನು ಸಾಲದ ಸುಳಿಗೆ ದೂಡಿರುವ ಸಿದ್ದರಾಮಯ್ಯ ಅವರು ನಿಜಕ್ಕೂ ಸಾಲರಾಮಯ್ಯ ಹೌದೋ ಅಲ್ಲವೋ ಎಂಬುದನ್ನು ಜನರೇ ತೀರ್ಮಾನಿಸಲಿ ಎಂದು ಅವರು ಪ್ರಶ್ನಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ರಾಜ್ಯದ ಒಟ್ಟು ಸಾಲದ ಹೊರೆ 8 ಲಕ್ಷದ 32 ಸಾವಿರ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಳೆದ 30 ವರ್ಷಗಳಲ್ಲಿ ಜೆ.ಎಚ್. ಪಟೇಲ್ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ಅವರವರೆಗೆ ಅನೇಕ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಅವರೆಲ್ಲರೂ ಸೇರಿ ಮಾಡಿದ ಸಾಲದ ಪ್ರಮಾಣ ಶೇಕಡಾ 40ರಷ್ಟಿದ್ದರೆ, ಸಿದ್ದರಾಮಯ್ಯ ಅವರು ಒಬ್ಬರೇ ತಮ್ಮ ಅವಧಿಯಲ್ಲಿ ಶೇಕಡಾ 60ರಷ್ಟು ಸಾಲ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

2023ರಿಂದ 2027ರ ಅವಧಿಯಲ್ಲಿ ರಾಜ್ಯದ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ. ಈ ಹಣಕಾಸಿನ ಶಿಸ್ತು ಇಲ್ಲದ ಆಡಳಿತವು ರಾಜ್ಯದ ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಿದೆ ಎಂದು ಟೀಕಿಸಿದರು.

ಕೇವಲ ಸಾಲದ ವಿಚಾರವಷ್ಟೇ ಅಲ್ಲದೆ, ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6 ಸಾವಿರ ಕೋಟಿ ರೂಪಾಯಿಗಳ ಹಗರಣ ನಡೆದಿದೆ. ಮುಡಾ ಹಗರಣ, ಡ್ರಗ್ಸ್ ಮಾಫಿಯಾ ಮತ್ತು ವರ್ಗಾವಣೆ ದಂಧೆಗಳಲ್ಲಿ ಸರ್ಕಾರ ಮುಳುಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಇಂದು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಸರ್ಕಾರದ ನೌಕರರು ಸಂಬಳವಿಲ್ಲದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರ ಭ್ರಷ್ಟಾಚಾರ ತಾಳಲಾರದೆ ಪೊಲೀಸ್ ಅಧಿಕಾರಿಗಳೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವೆಲ್ಲವೂ ನಿಮ್ಮ ಸರ್ಕಾರದ ಒಳ್ಳೆಯ’ ಸಾಧನೆಗಳೇ ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಬಾಣಂತಿಯರು ಮತ್ತು ಹಸುಗೂಸುಗಳ ಸರಣಿ ಸಾವು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಮತ್ತು ಬೆಲೆ ಏರಿಕೆಯಂತಹ ಜನವಿರೋಧಿ ನೀತಿಗಳಿಂದ ಸರ್ಕಾರ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದೆ ಎಂದು ರವಿ ಕಿಡಿಕಾರಿದರು. ಇತ್ತೀಚಿನ ಐಪಿಎಲ್ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಅಮಾಯಕರ ಬಲಿ ಪಡೆದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಸರ್ಕಾರ ಕೇವಲ ಪ್ರಚಾರಕ್ಕಾಗಿ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದರು

ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸವಾಲು ಹಾಕಿದ ಅವರು, 2014ರಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಿರಿ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಡಿಗಲ್ಲು ಹಾಕುತ್ತಿದ್ದೀರಿ. ಚುನಾವಣೆ ಬರದೇ ಇದ್ದರೆ ಈ ಕಾರ್ಯವೂ ನಡೆಯುತ್ತಿರಲಿಲ್ಲ. ನಿಮ್ಮ ಸರ್ಕಾರದ ಅಭಿವೃದ್ಧಿ ಶೂನ್ಯ, ಪ್ರಚಾರ ಮಾತ್ರ ಜೋರು ಎಂದು ವ್ಯಂಗ್ಯ  ಮಾಡಿದರು.

Exit mobile version