CWRC ನಿರ್ದೇಶನವನ್ನು ಧಿಕ್ಕರಿಸಿ, ಕಾನೂನು ಹೋರಾಟ ನಡೆಸಿ: ಟಿ.ಎ. ನಾರಾಯಣಗೌಡ ಆಗ್ರಹ

ಬಲಿಷ್ಠ (2)

ಬೆಂಗಳೂರು, (ಜುಲೈ 29): ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕವು ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ನೀಡಿರುವ ನಿರ್ದೇಶನವು ಸಂಪೂರ್ಣವಾಗಿ ಅವೈಜ್ಞಾನಿಕ, ವಾಸ್ತವ ಪರಿಸ್ಥಿತಿಯನ್ನು ನಿರ್ಲಕ್ಷಿಸಿರುವ ಹಾಗೂ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ಆದೇಶವಾಗಿದೆ. ಈ ನಿರ್ದೇಶನವನ್ನು ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು. ಅಗತ್ಯವಿದ್ದರೆ ಈ ಆದೇಶವನ್ನು ಧಿಕ್ಕರಿಸಿ, ರಾಜ್ಯದ ಹಿತಾಸಕ್ತಿಯನ್ನು ಅಗ್ರಸ್ಥಾನದಲ್ಲಿಟ್ಟು ದೃಢವಾದ ನಿಲುವು ತಾಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಬೃಹತ್‌ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಕೆಆರ್‌ಎಸ್‌, ಕಬಿನಿ, ಹೇಮಾವತಿ, ಹಾರಂಗಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಜನರಿಗೆ ಕುಡಿಯಲು ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಸುಮಾರು 4.5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಕ್ರಮವಾಗಿದೆ ಎಂದು ಕಿಡಿಕಾರಿದರು.

ಕುಡಿಯುವ ನೀರು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು. ರಾಜ್ಯದ ಜನರ ಕುಡಿಯುವ ನೀರನ್ನು ಕಸಿದುಕೊಂಡು ಬೇರೆ ರಾಜ್ಯಕ್ಕೆ ನೀರು ಹರಿಸುವಂತೆ ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ಮೊದಲು ಕರ್ನಾಟಕದ ಜನರ ಜೀವ ಮತ್ತು ಬದುಕನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಮೊದಲ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ತಕ್ಷಣವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ದ ಮುಂದೆ ಮೇಲ್ಮನವಿ ಸಲ್ಲಿಸಿ, ಕರ್ನಾಟಕದ ನೈಜ ಜಲಸ್ಥಿತಿಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಮಂಡಿಸಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ವೇದಿಕೆಗಳಲ್ಲಿ ಹೋರಾಟ ನಡೆಸಿ, ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿ ವರ್ಷ ಬರಗಾಲದ ಸಂದರ್ಭದಲ್ಲಿ ಇದೇ ರೀತಿಯ ವಿವಾದ ಮರುಕಳಿಸುತ್ತಿರುವುದರಿಂದ, ಮಳೆ ಕೊರತೆ, ಜಲಾಶಯಗಳ ಸಂಗ್ರಹ, ಕುಡಿಯುವ ನೀರಿನ ಅಗತ್ಯ ಹಾಗೂ ರೈತರ ಹಿತಾಸಕ್ತಿಯನ್ನು ಪರಿಗಣಿಸುವ ಶಾಶ್ವತ ಸಂಕಷ್ಟ ಸೂತ್ರ (Distress Formula) ರೂಪಿಸಲು ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

“ರಾಜ್ಯ ಸರ್ಕಾರ ಬಗ್ಗಬಾರದು, ಸೆಟೆದು ನಿಲ್ಲಬೇಕು. ಕರ್ನಾಟಕದ ಜನರ ಪರವಾಗಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಟ್ಟು ಒಂದು ಹನಿ ನೀರನ್ನಾದರೂ ಬಿಡುಗಡೆ ಮಾಡಿದರೆ, ರಾಜ್ಯದಾದ್ಯಂತ, ವಿಶೇಷವಾಗಿ ಕಾವೇರಿ ಕೊಳ್ಳದ ಭಾಗಗಳಲ್ಲಿ ತೀವ್ರ ಜನಾಕ್ರೋಶ ಉಂಟಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಗೆ ಸರ್ಕಾರವೇ ನೇರ ಹೊಣೆಗಾರವಾಗಲಿದೆ,” ಎಂದು ಅವರು ಎಚ್ಚರಿಸಿದರು.

ಇದೇ ವೇಳೆ ಕರ್ನಾಟಕ ಬಂದ್ ಕುರಿತು ಸ್ಪಷ್ಟನೆ ನೀಡಿದ ಅವರು, “ಕರ್ನಾಟಕ ಬಂದ್ ಮಾಡುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆಗೆ ಯಾವುದೇ ಆಸಕ್ತಿಯಿಲ್ಲ. ಬಂದ್ ಎನ್ನುವುದು ಹೋರಾಟಗಾರರ ಕೊನೆಯ ಅಸ್ತ್ರ. ಜನಜೀವನಕ್ಕೆ ತೊಂದರೆಯಾಗುವ ಅಂತಹ ಹಂತಕ್ಕೆ ನಾವು ಈಗಲೇ ಹೋಗುವುದಿಲ್ಲ. ರಾಜ್ಯದ ಹಿತಾಸಕ್ತಿ ಕಾಪಾಡಲು ಕಾನೂನುಬದ್ಧ, ಪ್ರಜಾಸತ್ತಾತ್ಮಕ ಹಾಗೂ ಜನಾಂದೋಲನದ ವಿವಿಧ ಹೋರಾಟದ ಮಾರ್ಗಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಅನುಸರಿಸಲಿದೆ,” ಎಂದು ಹೇಳಿದರು.

“ಕಾವೇರಿ ನೀರು ನಿಯಂತ್ರಣ ಸಮಿತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ನಿರ್ದೇಶನ ನೀಡಿದಂತಾಗಿದೆ. ನಮ್ಮ ಜಲಾಶಯಗಳಲ್ಲಿ ರಾಜ್ಯದ ಜನರಿಗೆ ಕುಡಿಯಲು ಸಾಕಾಗುವಷ್ಟು ನೀರೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಅದನ್ನೂ ತಮಿಳುನಾಡಿಗೆ ಕೊಡಿ ಎನ್ನುವುದು ಯಾವ ನ್ಯಾಯ? ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ನೀಡಿರುವ ಈ ನಿರ್ದೇಶನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ,” ಎಂದು ಟಿ.ಎ. ನಾರಾಯಣಗೌಡ ಹೇಳಿದರು.

Exit mobile version