ಬೆಂಗಳೂರು; ಸೆಪ್ಟೆಂಬರ್ 24, 2025: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಿದೆ. ಬಸ್ ಚಾಲನೆ ವೇಳೆ ಚಾಲಕರು ಮೊಬೈಲ್ ಫೋನ್ ಬಳಸುವುದು ಕಂಡುಬಂದರೆ, ಅಮಾನತು, ವರ್ಗಾವಣೆ, ಸಂಬಳ ಕಡಿತ, ಮತ್ತು ಬಡ್ತಿ ತಡೆ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಬಿಎಂಟಿಸಿ ಎಚ್ಚರಿಕೆ ನೀಡಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿರುವ ಸಂಸ್ಥೆ ಈ ನಿಯಮ ಉಲ್ಲಂಘನೆಗೆ ಯಾವುದೇ ರಾಜಿಮಾತಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೊಬೈಲ್ ಬಳಕೆ ಅಪಘಾತಗಳಿಗೆ ಕಾರಣ
ಇತ್ತೀಚಿನ ದಿನಗಳಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ, ರೀಲ್ಸ್ ತಯಾರಿಕೆ, ಚಾಟಿಂಗ್, ಅಥವಾ ಫೋನ್ ಕರೆಗಳು ಸಾಮಾನ್ಯವಾಗಿದೆ. ಆದರೆ ಸಾರಿಗೆ ವಾಹನಗಳ ಚಾಲಕರಿಂದ ಇಂತಹ ಚಟುವಟಿಕೆಗಳು ಗಂಭೀರ ಅಪಘಾತಗಳಿಗೆ ಕಾರಣವಾಗುತ್ತಿವೆ. ಬಿಎಂಟಿಸಿ ಬಸ್ಗಳ ಚಾಲಕರ ಮೊಬೈಲ್ ಬಳಕೆಯಿಂದಾಗಿ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಕಠಿಣ ಶಿಸ್ತು ಕ್ರಮಗಳನ್ನು ಜಾರಿಗೆ ತಂದಿದೆ.
ಬಿಎಂಟಿಸಿಯ ಈ ಕ್ರಮದ ಹಿನ್ನೆಲೆಯಲ್ಲಿ, ಚಾಲಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಬಸ್ ಚಾಲನೆ ವೇಳೆ ಫೋನ್ನಲ್ಲಿ ಮಾತನಾಡುವುದು, ಹೆಡ್ಫೋನ್ ಬಳಸುವುದು, ಅಥವಾ ಚಾಟಿಂಗ್ ಮಾಡುವುದು ಸಂಪೂರ್ಣ ನಿಷೇಧ. ಈ ನಿಯಮ ಉಲ್ಲಂಘಿಸಿದ ಚಾಲಕರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಶಿಕ್ಷೆಯ ವಿವರಗಳು
ಬಿಎಂಟಿಸಿಯು ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಶಿಕ್ಷೆಯ ಶ್ರೇಣಿಯನ್ನು ರೂಪಿಸಿದೆ, ಇದು ಉಲ್ಲಂಘನೆಯ ಸಂಖ್ಯೆಯ ಆಧಾರದ ಮೇಲೆ ಕಠಿಣವಾಗುತ್ತದೆ:
ಮೊದಲ ಬಾರಿ:
-
15 ದಿನಗಳ ಅಮಾನತು
-
ಶಿಸ್ತು ಕ್ರಮ (ನಿಯಮ-23)
-
ಅಮಾನತು ತೆರವಾದ ನಂತರ ಬೇರೆ ಘಟಕಕ್ಕೆ ವರ್ಗಾವಣೆ
-
ವೇತನದಿಂದ ₹5,000 ಕಡಿತ
ಎರಡನೇ ಬಾರಿ:
-
15 ದಿನಗಳ ಅಮಾನತು
-
ಶಿಸ್ತು ಕ್ರಮ (ನಿಯಮ-23)
-
ವರ್ಗಾವಣೆ
-
1 ವರ್ಷದ ವಾರ್ಷಿಕ ಬಡ್ತಿ ತಡೆ ಅಥವಾ ₹5,000 ಕಡಿತ
ಮೂರನೇ ಬಾರಿ:
-
15 ದಿನಗಳ ಅಮಾನತು
-
ಶಿಸ್ತು ಕ್ರಮ
-
ವರ್ಗಾವಣೆ
-
2 ವರ್ಷಗಳ ವಾರ್ಷಿಕ ಬಡ್ತಿ ತಡೆ ಅಥವಾ ₹10,000 ಕಡಿತ
ನಾಲ್ಕನೇ ಬಾರಿ:
-
15 ದಿನಗಳ ಅಮಾನತು
-
ಶಿಸ್ತು ಕ್ರಮ
-
ವರ್ಗಾವಣೆ
-
ಶಾಶ್ವತ ಬಡ್ತಿ ಇಳಿಕೆ ಅಥವಾ 2 ವರ್ಷ ಬಡ್ತಿ ತಡೆ ಅಥವಾ ₹20,000 ಕಡಿತ
ಐದನೇ ಬಾರಿ:
-
15 ದಿನಗಳ ಅಮಾನತು
-
ಶಿಸ್ತು ಕ್ರಮ
-
ವರ್ಗಾವಣೆ
-
ವಾರ್ಷಿಕ ಬಡ್ತಿಗೆ ಶಾಶ್ವತ ತಡೆ ಅಥವಾ ₹25,000 ಕಡಿತ
ಆರು ಅಥವಾ ಹೆಚ್ಚಿನ ಬಾರಿ:
-
15 ದಿನಗಳ ಅಮಾನತು
-
ಶಿಸ್ತು ಕ್ರಮ
-
ವರ್ಗಾವಣೆ
-
2 ವಾರ್ಷಿಕ ಬಡ್ತಿಗಳ ಶಾಶ್ವತ ಇಳಿಕೆ/ತಡೆ ಅಥವಾ ₹30,000 ಕಡಿತ
-
ಸಂಸ್ಥೆಯ ಶಿಸ್ತು ನಿಯಮಾವಳಿ 1971ರ ನಿಯಮ 18(b) ಅನ್ವಯ ಹೆಚ್ಚುವರಿ ಶಿಕ್ಷೆ
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ
ಬಿಎಂಟಿಸಿಯ ಈ ಕಠಿಣ ಕ್ರಮವು ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ. ನಗರದಲ್ಲಿ ದಿನನಿತ್ಯ ಲಕ್ಷಾಂತರ ಜನರು ಬಿಎಂಟಿಸಿ ಬಸ್ಗಳನ್ನು ಅವಲಂಬಿಸಿದ್ದಾರೆ. ಚಾಲಕರ ಒಂದು ನಡೆಯಿಂದ ಉಂಟಾಗುವ ಅಪಘಾತಗಳು ಪ್ರಯಾಣಿಕರ ಜೀವಕ್ಕೆ ಆಪತ್ತು ತಂದೊಡ್ಡುತ್ತಿವೆ. ಈ ಕಾರಣಕ್ಕಾಗಿ, ಬಿಎಂಟಿಸಿಯು ಚಾಲಕರಿಗೆ ತರಬೇತಿ, ಮಾರ್ಗದರ್ಶನ ಮತ್ತು ಕಾನೂನಿನ ಕಟ್ಟುನಿಟ್ಟಾದ ಅನುಷ್ಠಾನದ ಮೂಲಕ ಈ ಸಮಸ್ಯೆಗೆ ಕಡಿವಾಣ ಹಾಕಲು ಯತ್ನಿಸುತ್ತಿದೆ.
ಅಧಿಕಾರಿಗಳು ಚಾಲಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. “ಪ್ರಯಾಣಿಕರ ಜೀವನಕ್ಕಿಂತ ಯಾವುದೇ ಫೋನ್ ಕರೆ ಅಥವಾ ರೀಲ್ ಮುಖ್ಯವಲ್ಲ. ಇದರ ಜೊತೆಗೆ, ಸಾರ್ವಜನಿಕರಿಗೂ ಕರೆ ನೀಡಲಾಗಿದ್ದು, ಚಾಲಕರು ಮೊಬೈಲ್ ಬಳಸುವುದು ಕಂಡುಬಂದರೆ ತಕ್ಷಣ ಬಿಎಂಟಿಸಿ ಸಹಾಯವಾಣಿಗೆ ದೂರು ಸಲ್ಲಿಸಲು ಮನವಿ ಮಾಡಲಾಗಿದೆ.