ಕಾರವಾರ: ಪರಿಚಿತ ವ್ಯಕ್ತಿಯೊಬ್ಬರಿಗೆ ಕೊಟ್ಟ ಸಾಲದ ಹಣ ವಾಪಸ್ ಬಾರದೇ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದೇ ಮನನೊಂದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಶುಲ್ಕ ಪಾವತಿಗೆ ನೀಡಿದ್ದ ಹಣವನ್ನೇ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಬಿಸಿಎ (BCA) ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ (ಪೂರ್ಣ ಹೆಸರು: ಗಾಯತ್ರಿ ನಾಗರಾಜ ಲಚ್ಚಯ್ಯ ನಾಯ್ಕ) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜಿನ ಶುಲ್ಕ ಪಾವತಿಸುವುದಕ್ಕಾಗಿ ಆಕೆಯ ತಂದೆ ನಾಗರಾಜ ಲಚ್ಚಯ್ಯ ನಾಯ್ಕ ಅವರು ಗಾಯತ್ರಿಗೆ 10,000 ರೂಪಾಯಿಗಳನ್ನು ನೀಡಿದ್ದರು.
ಆದರೆ ಈ ಮೊತ್ತವನ್ನು ಆಕೆಯ ಕೈಗೆ ಸಿಗುವ ಮೊದಲೇ, ಗ್ರಾಮದ ಪರಿಚಯಸ್ಥನಾದ ಸಂತೋಷ ಮಾಧೇವ ನಾಯ್ಕ ಎಂಬಾತ ತನಗೆ ತುರ್ತು ಅಗತ್ಯವಿದೆ ಎಂದು ಹೇಳಿ ನಿಗದಿತ ಸಮಯದೊಳಗೆ ಮರಳಿ ಪಾವತಿಸುವುದಾಗಿ ಭರವಸೆ ನೀಡಿದ್ದ. ಗಾಯತ್ರಿ ತನ್ನ ಬಳಿಯಿದ್ದ ಸಂಪೂರ್ಣ 10,000 ರೂಪಾಯಿಗಳನ್ನು ಸಂತೋಷ್ಗೆ ಸಾಲವಾಗಿ ನೀಡಿದಳು.
ಸಾಲ ವಾಪಸ್ ಆಗದೇ ಪರೀಕ್ಷೆಗೂ ಹಾಜರಾಗದ ವಿದ್ಯಾರ್ಥಿ
ಹೇಳಿದ ಸಮಯಕ್ಕೆ ಸಂತೋಷ್ ಹಣವನ್ನು ಹಿಂತಿರುಗಿಸಲಿಲ್ಲ. ಪದೇ ಪದೇ ಕೇಳಿದರೂ ಆತ ಉತ್ತರಿಸಲಿಲ್ಲ. ಇದರಿಂದ ಗಾಯತ್ರಿ ಕಾಲೇಜಿಗೆ ಸಮಯಕ್ಕೆ ಶುಲ್ಕ ಪಾವತಿಸಲಾಗದೆ ಅವಳು ಪರದಾಡಿದಳು. ಕೊನೆಗೆ ಶುಲ್ಕ ಪಾವತಿಸಲಾಗದ ಕಾರಣ ಪರೀಕ್ಷೆಯ ಹಾಲ್ ಟಿಕೆಟ್ ಸಹ ದೊರಕಲಿಲ್ಲ. ಪರೀಕ್ಷೆ ಬರೆಯಲೂ ಸಾಧ್ಯವಾಗದೆ ನಿರಾಶೆಗೊಂಡ ಗಾಯತ್ರಿ ತನ್ನ ಗ್ರಾಮದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.
ಈ ಘಟನೆಯ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂತೋಷ್ ಮಾಧೇವ ನಾಯ್ಕ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರನ್ನು ಸಮಾಧಾನಪಡಿಸಿದ ಅಧಿಕಾರಿಗಳು, ಹಣ ವಾಪಸ್ ನೀಡದ ವ್ಯಕ್ತಿಯ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.





