ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡೇರಿ ಸಮೀಪದ ಸಿ.ಕೆ. ತಾಂಡ್ಯಾ ಗ್ರಾಮದ ಫಾರ್ಮ್ಹೌಸ್ನಲ್ಲಿ ಪತ್ತೆಯಾಗಿರುವ ನಕಲಿ ಔಷಧ ತಯಾರಿ ಜಾಲದ ತನಿಖೆ ಮುಂದುವರಿದಂತೆ ಹಲವು ಆತಂಕಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ಹೆಸರನ್ನು ಬಳಸಿಕೊಂಡು ನಕಲಿ ಔಷಧಿಗಳಿಗೆ ಬ್ರ್ಯಾಂಡ್ ರೂಪ ನೀಡಿ, ಅವುಗಳನ್ನು ಮಾರುಕಟ್ಟೆಗೆ ರವಾನಿಸಲು ಸಿದ್ಧಪಡಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಫಾರ್ಮ್ಹೌಸ್ನಲ್ಲಿಯೇ ನಕಲಿ ಔಷಧಿಗಳ ತಯಾರಿ, ಪ್ಯಾಕಿಂಗ್ ಮತ್ತು ಲೇಬಲಿಂಗ್ಗೆ ಬೇಕಾದ ಸಂಪೂರ್ಣ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಔಷಧಿಗಳ ಬಾಟಲ್ಗಳಿಗೆ ಪ್ರತಿಷ್ಠಿತ ಕಂಪನಿಗಳ ಹೆಸರಿನ ಲೇಬಲ್ಗಳನ್ನು ಅಂಟಿಸಿ, ಕ್ಯಾಪ್ ಹಾಕಿ ಮಾರುಕಟ್ಟೆಗೆ ಕಳುಹಿಸಲು ಸಿದ್ಧಪಡಿಸಲಾಗುತ್ತಿತ್ತು. ಇದರಿಂದ ನಕಲಿ ಔಷಧಿಗಳನ್ನು ನೈಜ ಉತ್ಪನ್ನಗಳೆಂದು ನಂಬಿಸಿ ಮಾರಾಟ ಮಾಡುವ ವ್ಯವಸ್ಥಿತ ಜಾಲ ಇಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಅನುಮಾನ ಮೂಡಿದೆ.
ಅವಧಿ ಮೀರಿದ ಔಷಧಿಗಳೂ ಪತ್ತೆ
ದಾಳಿ ವೇಳೆ ಕೆಲವು ಔಷಧಿಗಳಲ್ಲಿ ಅವಧಿ ಮೀರಿದ ಉತ್ಪನ್ನಗಳು ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ನೀಡಲಾಗುವ ಇಂಜೆಕ್ಷನ್ಗಳನ್ನೂ ನಕಲಿ ಮಾಡಲಾಗುತ್ತಿತ್ತು ಎಂಬ ಮಾಹಿತಿ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
ಈ ನಕಲಿ ಔಷಧಿಗಳು ಆಸ್ಪತ್ರೆಗಳು ಅಥವಾ ಮೆಡಿಕಲ್ ಸ್ಟೋರ್ಗಳ ಮೂಲಕ ರೋಗಿಗಳ ಕೈಗೆ ತಲುಪಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇತ್ತು. ಹೀಗಾಗಿ ವಶಪಡಿಸಿಕೊಂಡ ಔಷಧಿಗಳು ಈಗಾಗಲೇ ಮಾರುಕಟ್ಟೆಗೆ ಹೋಗಿವೆಯೇ ಎಂಬುದನ್ನು ಪತ್ತೆಹಚ್ಚಲು ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ (FDA) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ವಶಪಡಿಸಿಕೊಂಡಿರುವ ಔಷಧಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅವುಗಳ ಗುಣಮಟ್ಟ ಹಾಗೂ ಸಂಯೋಜನೆ ಪರಿಶೀಲಿಸುವ ಸಾಧ್ಯತೆಯೂ ಇದೆ. ನಕಲಿ ಔಷಧಿಗಳ ಮೂಲವೇನು? ಅವುಗಳನ್ನು ಯಾರಿಂದ ತರಲಾಗುತ್ತಿತ್ತು? ಯಾರಿಗೆ ಮತ್ತು ಯಾವ ಆಸ್ಪತ್ರೆ ಅಥವಾ ಮೆಡಿಕಲ್ ಸ್ಟೋರ್ಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಹಲವು ರಾಜ್ಯಗಳಲ್ಲಿ ಜಾಲ?
ಈ ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆಯನ್ನು ವಿಸ್ತರಿಸಲಾಗಿದೆ. ನಕಲಿ ಔಷಧಿಗಳ ಜಾಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬ ಮಾಹಿತಿ ಕೂಡ ಹೊರಬಂದಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಮಾಹಿತಿ ಪ್ರಕಾರ, ನಕಲಿ ಬ್ರ್ಯಾಂಡ್ ಔಷಧಿಗಳು ಹಾಗೂ ಕಾಸ್ಮೆಟಿಕ್ಸ್ಗಳ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಲು ಸರ್ಕಾರ ನಿರ್ಧರಿಸಿದೆ.
ದುಬೈ ಸಂಪರ್ಕದ ಶಂಕೆ
ಸಿದ್ದಯ್ಯ ಎಂಬುವರಿಗೆ ಸೇರಿದ ಫಾರ್ಮ್ಹೌಸ್ ಅನ್ನು ದುಬೈನಲ್ಲಿ ಇರುವ ಪ್ರಶಾಂತ್ ಎಂಬುವರಿಗೆ ಲೀಸ್ಗೆ ನೀಡಲಾಗಿತ್ತು ಎನ್ನಲಾಗಿದೆ. ಇದೇ ಸ್ಥಳದಲ್ಲಿ ಪ್ರಶಾಂತ್ ನಕಲಿ ಬ್ರ್ಯಾಂಡ್ ಔಷಧ ತಯಾರಿ ಘಟಕ ನಡೆಸುತ್ತಿದ್ದ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ.
ಸದ್ಯ ಪ್ರಭುದೇವ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿವಿಧ ರಾಷ್ಟ್ರಗಳು ಮತ್ತು ರಾಜ್ಯಗಳಿಂದ ನಕಲಿ ಔಷಧಿ ಹಾಗೂ ಮಾತ್ರೆಗಳನ್ನು ತಂದು, ಅವುಗಳ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ರಾಷ್ಟ್ರಮಟ್ಟದ ಜಾಲದ ತನಿಖೆ
ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ರೀತಿಯ ನಕಲಿ ಔಷಧ ಜಾಲ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಚಿವರು ತಿಳಿಸಿದ್ದಾರೆ. ನಕಲಿ ಔಷಧಿಗಳು ಯಾವೆಲ್ಲಾ ಆಸ್ಪತ್ರೆಗಳಿಗೆ ತಲುಪಿವೆ, ಅವುಗಳನ್ನು ಬಳಸಿರುವುದರಿಂದ ಎಷ್ಟು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಉದ್ದೇಶವಾಗಿದೆ.
ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ, ಪ್ರಕರಣದ ಹಿಂದೆ ಇರುವ ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು SIT ರಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ತಪ್ಪಿತಸ್ಥರ ವಿರುದ್ಧ ಔಷಧ ಮತ್ತು ಆರೋಗ್ಯ ಸುರಕ್ಷತಾ ಕಾನೂನುಗಳ ಅಡಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
