ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಚಿತ್ರಹಿಂಸೆ: ಶಿಕ್ಷಕ ದಂಪತಿ ಅರೆಸ್ಟ್

Untitled design (34)

ಬಾಗಲಕೋಟೆ: ಬುದ್ದಿಮಾಂದ್ಯ ಅಥವಾ ವಿಶೇಷ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘೋರ ಘಟನೆಯೊಂದು ಬಾಗಲಕೋಟೆಯ ನವನಗರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ‘ದಿವ್ಯಜ್ಯೋತಿ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿ ಶಾಲೆ’ಯಲ್ಲಿ ಬಾಲಕನೊಬ್ಬನಿಗೆ ಖಾರದ ಪುಡಿ ಎರಚಿ, ಪೈಪ್ ಹಾಗೂ ಬೆಲ್ಟ್‌ನಿಂದ ಮನಸೋಇಚ್ಛೆ ಥಳಿಸಿದ ಆರೋಪದ ಮೇಲೆ ಮಾಲೀಕ ಅಕ್ಷಯ್ ಮತ್ತು ಆತನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಮಾರು ಮೂರು ತಿಂಗಳ ಹಿಂದೆ ನಡೆದಿದ್ದ ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಸತಿ ಶಾಲೆಯ ಮಾಲೀಕ ಅಕ್ಷಯ್, ದೀಪಕ್ ರಾಥೋಡ್ ಎಂಬ ಬುದ್ಧಿಮಾಂದ್ಯ ಬಾಲಕನಿಗೆ ಪ್ಲಾಸ್ಟಿಕ್ ಪೈಪ್‌ನಿಂದ ಮೈಮೇಲೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾನೆ. ಅಷ್ಟೇ ಅಲ್ಲದೆ, ಬಾಲಕ ಕಿರುಚಾಡಬಾರದೆಂದು ಆತನ ಕಣ್ಣಿಗೆ ಖಾರದ ಪುಡಿ ಎರಚಲಾಗಿದೆ. ಈ ಕ್ರೌರ್ಯವನ್ನು ಅಲ್ಲಿನ ಕೆಲಸಗಾರನೊಬ್ಬ ಗುಟ್ಟಾಗಿ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದನು. ಇತ್ತೀಚೆಗೆ ಆ ಕೆಲಸಗಾರನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ನಂತರ, ಆತ ಈ ವಿಡಿಯೋವನ್ನು ಹೊರಬಿಟ್ಟಿದ್ದಾನೆ.

ಶಿಕ್ಷಕ ಅಕ್ಷಯ್ ಮತ್ತು ಆತನ ಪತ್ನಿ ಆನಂದಿ ಮೂಲತಃ ಮಹಾರಾಷ್ಟ್ರದವರಾಗಿದ್ದು, ಬಾಗಲಕೋಟೆಯಲ್ಲಿ ಎನ್‌ಜಿಒ ಹೆಸರಿನಲ್ಲಿ ಈ ಶಾಲೆ ನಡೆಸುತ್ತಿದ್ದರು. ಆರಂಭದಲ್ಲಿ ನೋಂದಣಿ ಮಾಡಿಸಿದ್ದರೂ, ನಂತರ ಅದನ್ನು ನವೀಕರಿಸಿರಲಿಲ್ಲ. ಮುಖ್ಯವಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಅಕ್ರಮವಾಗಿ ಈ ವಸತಿ ಶಾಲೆಯನ್ನು ನಡೆಸಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯ ವೇಳೆ ಹೊರಬಿದ್ದಿದೆ.

ಈ ಘಟನೆ ತಿಳಿಯುತ್ತಿದ್ದಂತೆ, ಇವರನ್ನು ನಂಬಿ ಮಕ್ಕಳನ್ನ ಕಳುಹಿಸಿದ್ದ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ನೂರಾರು ಪೋಷಕರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಅಸಹಾಯಕ ಮಕ್ಕಳ ಮೇಲೆ ಇಂತಹ ಪೈಶಾಚಿಕ ಕೃತ್ಯ ಎಸಗಿದ ಶಿಕ್ಷಕ ದಂಪತಿಯನ್ನು ಕಠಿಣವಾಗಿ ಶಿಕ್ಷಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತವು ಕೂಡಲೇ ಮಧ್ಯಪ್ರವೇಶಿಸಿ ಶಾಲೆಯಲ್ಲಿದ್ದ ಇತರ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿದೆ.

ಪ್ರಸ್ತುತ ನವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಲ್ಲೆಗೆ ಬಳಸಿದ್ದ ಪೈಪ್ ಮತ್ತು ಬೆಲ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ್ದ ಆರೋಪಿಗಳ ಮೇಲೆ ಮುಂದಿನ ಕ್ರಮ ಏನು ಎಂಬುದನ್ನ ಕಾದುನೋಡಬೇಕಿದೆ.

Exit mobile version