ವೆನೆಜುವೆಲಾವನ್ನು ನಡುಗಿಸಿದ್ದ ಭೀಕರ ಭೂಕಂಪಗಳ ದುರಂತದ ಆಘಾತ ಇನ್ನೂ ಕಡಿಮೆಯಾಗುವ ಮುನ್ನವೇ ಮತ್ತೊಂದು ಭೂಕಂಪ ಜನರಲ್ಲಿ ಹೊಸ ಭೀತಿಯನ್ನು ಹುಟ್ಟುಹಾಕಿದೆ. ಕೇವಲ ಎರಡು ದಿನಗಳ ಹಿಂದೆ ಸಂಭವಿಸಿದ್ದ ಪ್ರಬಲ ಭೂಕಂಪಗಳಿಂದ ದೇಶ ತತ್ತರಿಸಿಹೋಗಿದ್ದರೆ, ಇದೀಗ ಶುಕ್ರವಾರ ಉತ್ತರ ಕರಾವಳಿ ಭಾಗದಲ್ಲಿ 4.9 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಈ ಹೊಸ ಕಂಪನ ಈಗಾಗಲೇ ಸಂಕಷ್ಟದಲ್ಲಿರುವ ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲೂ ಪರಿಣಾಮ ಬೀರಿದೆ.
ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಜಿಕಲ್ ಸೆಂಟರ್ (EMSC) ಮಾಹಿತಿ ಪ್ರಕಾರ, ಈ ಭೂಕಂಪದ ಕೇಂದ್ರಬಿಂದು ಮರಕೇ ನಗರದಿಂದ ವಾಯುವ್ಯಕ್ಕೆ ಸುಮಾರು 61 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ. ರಾಜಧಾನಿ ಕ್ಯಾರಕಾಸ್ ಹಾಗೂ ಮರಕೇ ನಗರದಲ್ಲಿ ಭೂಮಿ ಕೆಲವು ಕ್ಷಣಗಳ ಕಾಲ ಬಲವಾಗಿ ಕಂಪಿಸಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹೊಸ ಭೂಕಂಪದಿಂದ ಹೆಚ್ಚುವರಿ ಹಾನಿಯ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಈಗಾಗಲೇ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ನಡೆಯುತ್ತಿರುವ ಕಾರ್ಯಾಚರಣೆಗೆ ಇದು ಹೊಸ ಸವಾಲಾಗಿ ಪರಿಣಮಿಸಿದೆ. ಭೂಮಿ ಮತ್ತೆ ಮತ್ತೆ ಕಂಪಿಸುತ್ತಿರುವುದರಿಂದ ರಕ್ಷಣಾ ಸಿಬ್ಬಂದಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ಬುಧವಾರ ತಡರಾತ್ರಿ ವೆನೆಜುವೆಲಾದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ಈ ಭೀಕರ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಶುಕ್ರವಾರದ ವೇಳೆಗೆ 920ಕ್ಕೆ ಏರಿಕೆಯಾಗಿದೆ. 3,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನೂರಾರು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹಲವು ಕಟ್ಟಡಗಳು, ಆಸ್ಪತ್ರೆಗಳು, ರಸ್ತೆ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿವೆ.
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಅನೇಕ ನಾಗರಿಕರು ಸರ್ಕಾರಿ ನೆರವಿಗಾಗಿ ಕಾಯದೇ ಸ್ವತಃ ಅವಶೇಷಗಳನ್ನು ಅಗೆದು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದುರಂತದ ಪ್ರಮಾಣಕ್ಕೆ ಹೋಲಿಸಿದರೆ ಸ್ಥಳೀಯ ರಕ್ಷಣಾ ಸಿಬ್ಬಂದಿಯ ಸಂಖ್ಯೆ ಕಡಿಮೆ ಇದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೂಕಂಪದ ಬಳಿಕದ ಮೊದಲ 48ರಿಂದ 72 ಗಂಟೆಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಅತ್ಯಂತ ಮಹತ್ವದ ‘ಸುವರ್ಣ ಸಮಯ’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ಹೊರತೆಗೆದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಆಹಾರ, ನೀರು ಮತ್ತು ವೈದ್ಯಕೀಯ ನೆರವು ತಲುಪದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ವೆನೆಜುವೆಲಾದ ಸಂಕಷ್ಟಕ್ಕೆ ಸ್ಪಂದಿಸಿರುವ ವಿಶ್ವದ ಎರಡು ಡಜನ್ಗಿಂತಲೂ ಹೆಚ್ಚು ದೇಶಗಳು ತಮ್ಮ ರಕ್ಷಣಾ ತಂಡಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿವೆ. ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ.
ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅಂತಾರಾಷ್ಟ್ರೀಯ ನೆರವನ್ನು ಸ್ವಾಗತಿಸಿದ್ದು, ಸಂತ್ರಸ್ತರಿಗೆ ಆಹಾರ, ಕುಡಿಯುವ ನೀರು ಹಾಗೂ ಅಗತ್ಯ ಸೌಲಭ್ಯಗಳನ್ನು ತಲುಪಿಸಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅತ್ಯಂತ ಹಾನಿಗೊಳಗಾದ ಲಾ ಗುಯಿರಾ ನಗರವನ್ನು ಮಿಲಿಟರಿ ನಿಯಂತ್ರಣಕ್ಕೆ ಒಪ್ಪಿಸಲಾಗಿದೆ.
ಆದಾಗ್ಯೂ, ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಮುದಾಯದಿಂದ ದೊರೆಯುತ್ತಿರುವ ನೆರವು ತಮ್ಮ ಅಗತ್ಯಗಳಿಗೆ ಸಾಕಾಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
