ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ದಾಳಿ; 15 ಮಂದಿ ಬಲಿ

ಇಸ್ಲಾಮಾಬಾದ್, ಜುಲೈ 24: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಉಗ್ರರು ನಡೆಸಿದ ಭೀಕರ ಆತ್ಮಾಹುತಿ ದಾಳಿಯಲ್ಲಿ 12 ಸೈನಿಕರು, ಇಬ್ಬರು ಪೊಲೀಸರು ಹಾಗೂ ಒಬ್ಬ ಮಾಜಿ ಸರ್ಕಾರಿ ಅಧಿಕಾರಿ ಸೇರಿದಂತೆ ಒಟ್ಟು 15 ಮಂದಿ ಮೃತಪಟ್ಟಿದ್ದಾರೆ. ಈ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 12 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.

ಅಫ್ಘಾನಿಸ್ತಾನ ಗಡಿಗೆ ಸಮೀಪದ ಟ್ಯಾಂಕ್ ಜಿಲ್ಲೆಯಲ್ಲಿ ನಿನ್ನೆ ಗುರುವಾರ ಮಧ್ಯರಾತ್ರಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಸೇನೆ ಮತ್ತು ಪೊಲೀಸರು ಜಂಟಿಯಾಗಿ ನಿರ್ವಹಿಸುತ್ತಿದ್ದ ಭದ್ರತಾ ಚೆಕ್‌ಪೋಸ್ಟ್‌ ಅನ್ನು ಗುರಿಯಾಗಿಸಿಕೊಂಡು ಉಗ್ರರು ಸ್ಫೋಟಕಗಳಿಂದ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದಾರೆ ಎಂದು ವರದಿ ಹೇಳಿದೆ.

“ಹನ್ನೆರಡು ಸೈನಿಕರು, ಇಬ್ಬರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಮಾಜಿ ಸರ್ಕಾರಿ ಅಧಿಕಾರಿ ಸೇರಿದಂತೆ ಹದಿನೈದು ಧೈರ್ಯಶಾಲಿ ಮಣ್ಣಿನ ಪುತ್ರರು ಶಹಾದತ್ (ಹುತಾತ್ಮತೆ)ಯನ್ನು ಸ್ವೀಕರಿಸಿದರು” ಎಂದು ಪಾಕ್‌ ಸೇನೆ ಹೇಳಿಕೊಂಡಿದೆ.

ಸ್ಫೋಟದಿಂದ ಚೆಕ್‌ಪೋಸ್ಟ್‌ಗೆ ಭಾರೀ ಹಾನಿ

ಮೊದಲು ಚೆಕ್‌ಪೋಸ್ಟ್‌ನ ಭದ್ರತೆಯನ್ನು ಭೇದಿಸಲು ಉಗ್ರರು ಪ್ರಯತ್ನಿಸಿದ್ದರು. ಅದು ವಿಫಲವಾದ ಬಳಿಕ ಸ್ಫೋಟಕ ತುಂಬಿದ ವಾಹನವನ್ನು ಗೋಡೆಗೆ ಡಿಕ್ಕಿ ಹೊಡೆಸಲಾಗಿದೆ. ಭಾರೀ ಸ್ಫೋಟದಿಂದ ಚೆಕ್‌ಪೋಸ್ಟ್‌ನ ಕಟ್ಟಡಕ್ಕೆ ತೀವ್ರ ಹಾನಿಯಾಗಿದ್ದು, ಸ್ಥಳದಲ್ಲೇ ಅನೇಕ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ದಾಳಿಯ ತಕ್ಷಣ ಪ್ರತಿದಾಳಿ ನಡೆಸಿದ ಸೇನೆ, ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.

ದಾಳಿಯ ಹೊಣೆ ಹೊತ್ತ ತಾಲಿಬಾನ್

ಈ ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಹೊತ್ತುಕೊಂಡಿದೆ. ನಾಲ್ವರು ಆತ್ಮಾಹುತಿ ಬಾಂಬರ್‌ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಸಂಘಟನೆ ಹೇಳಿಕೊಂಡಿದೆ.

2007ರಿಂದ ಪಾಕಿಸ್ತಾನ ಸರ್ಕಾರದ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ನಡೆಸುತ್ತಿರುವ ಟಿಟಿಪಿ, ದೇಶದಲ್ಲಿ ಕಟ್ಟುನಿಟ್ಟಿನ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಉದ್ದೇಶ ಹೊಂದಿದೆ. ಇತ್ತೀಚಿನ ತಿಂಗಳುಗಳಲ್ಲಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ ಪ್ರದೇಶಗಳಲ್ಲಿ ಉಗ್ರರ ದಾಳಿಗಳು ಹೆಚ್ಚಾಗಿರುವುದು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಆತಂಕ ತಂದಿದೆ.

ಅಫ್ಘಾನಿಸ್ತಾನ ವಿಚಾರದಲ್ಲಿ ಮತ್ತೆ ಆರೋಪ-ಪ್ರತ್ಯಾರೋಪ

ಉಗ್ರರು ಅಫ್ಘಾನಿಸ್ತಾನದಲ್ಲಿರುವ ಸುರಕ್ಷಿತ ನೆಲೆಗಳಿಂದ ದಾಳಿಗಳನ್ನು ಯೋಜಿಸುತ್ತಿದ್ದಾರೆ ಎಂದು ಪಾಕಿಸ್ತಾನ ಹಲವು ಬಾರಿ ಆರೋಪಿಸಿದೆ. ಆದರೆ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದ್ದು, ಪಾಕಿಸ್ತಾನದಲ್ಲಿನ ಉಗ್ರಗಾಮಿತ್ವವು ಆ ದೇಶದ ಆಂತರಿಕ ಸಮಸ್ಯೆ ಎಂದು ಪ್ರತಿಕ್ರಿಯಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಈ ವಿಚಾರವಾಗಿ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಗಡಿಭಾಗದಲ್ಲಿ ಹಲವು ಬಾರಿ ಸಂಘರ್ಷಗಳೂ ನಡೆದಿವೆ.

Exit mobile version