ಇಸ್ಲಾಮಾಬಾದ್: ಭಾರತವನ್ನು ಯುದ್ಧಕ್ಕೆ ಎಳೆದುಕೊಳ್ಳಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ಮತ್ತೊಂದು ಹಂಗಿನಲ್ಲಿ ದೇಶದ ಒಳಗಿನ ಬಲೂಚಿ ಗುಂಪುಗಳಿಂದ ತೀವ್ರ ತಿರುಗೇಟನ್ನು ಎದುರಿಸುತ್ತಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದಕ್ಷಿಣ ವಜಿರಿಸ್ತಾನ್ ಜಿಲ್ಲೆಯ ವನಾದಲ್ಲಿರುವ ಶಾಂತಿ ಸಮಿತಿಯ ಕಚೇರಿಯಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, 7 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಶಾಂತಿ ಸಮಿತಿ ಸಭೆಯಲ್ಲಿ ಬಾಂಬ್ ಸ್ಫೋಟ
ವನಾದಲ್ಲಿನ ಸ್ಥಳೀಯ ಶಾಂತಿ ಸಮಿತಿಯ ಕಚೇರಿಯಲ್ಲಿ ನಡೆದ ಸಭೆಯ ವೇಳೆ ಈ ಸ್ಫೋಟ ಸಂಭವಿಸಿದೆ. ಕಟ್ಟಡದ ಒಂದು ಭಾಗ ಸಂಪೂರ್ಣವಾಗಿ ಕುಸಿದಿದ್ದು, ಹಲವಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ತಂಡಗಳು ಸ್ಥಳೀಯರ ಸಹಕಾರದೊಂದಿಗೆ ತಕ್ಷಣವೇ ಕಾರ್ಯಾರಂಭಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿವೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Explosion rocks a meeting of a local peace committee in Pakistan’s South Waziristan region, 7 killed.
The explosion caused a portion of the building where the meeting was taking place to collapse.
Here’s a purported video of the blast.#Pakistan #Waziristan pic.twitter.com/S0kK33wWlE
— Vani Mehrotra (@vani_mehrotra) April 28, 2025
ಸ್ಥಳೀಯ ಶಾಂತಿ ಸಮಿತಿ ತಾಲಿಬಾನ್ನ ವಿರೋಧಿ ನಿಲುವು ತೆಗೆದುಕೊಂಡಿರುವುದರಿಂದ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಈ ಸಮಿತಿ ಸಾಮಾನ್ಯವಾಗಿ ಪ್ರದೇಶದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತಾಲಿಬಾನ್ ಹಿಂಸಾಚಾರಕ್ಕೆ ತಡೆ ನೀಡಲು ಕೆಲಸ ಮಾಡುತ್ತಿತ್ತು.
ಉಗ್ರರ ವಿರುದ್ಧದ ಕಾರ್ಯಾಚರಣೆ
ಈ ಬಾಂಬ್ ದಾಳಿ, ಪಾಕಿಸ್ತಾನಿ ಸೇನೆ ಉತ್ತರ ವಜಿರಿಸ್ತಾನ್ನಲ್ಲಿ 54 ಉಗ್ರರನ್ನು ಹತ್ಯೆ ಮಾಡಿದ ನಂತರ ನಡೆದಿದೆ. ಸೇನೆಯ ಪ್ರಕಾರ, ಈ ಉಗ್ರರು ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ನುಸುಳಲು ಯತ್ನಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಉಗ್ರ ಸಂಘಟನೆಗಳು ಪ್ರತೀಕಾರದ ದಾಳಿಗೆ ಮುಂದಾಗಿರುವ ಸಾಧ್ಯತೆಗಳಿವೆ.
ಉಗ್ರ ಸಂಘಟನೆಗಳ ಭಾಗವಹಿಸುವಿಕೆ ಶಂಕೆ
ಈ ವರೆಗೂ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿಲ್ಲ. ಆದರೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಎಂಬ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಟಿಟಿಪಿ ಸಾಮಾನ್ಯವಾಗಿ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿಗಳನ್ನು ನಡೆಸುವ ಹಿನ್ನೆಲೆ ಹೊಂದಿದೆ.
ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ
ಸದ್ಯ ರಕ್ಷಣಾ ಕಾರ್ಯಾಚರಣೆ ವೇಗವಾಗಿ ಮುಂದುವರಿದಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ಸ್ಥಳವನ್ನು ಸುತ್ತುವರಿದು ತನಿಖೆ ಆರಂಭಿಸಿರುವುದಾಗಿ ವರದಿಗಳು ತಿಳಿಸುತ್ತಿವೆ. ಘಟನಾ ಸ್ಥಳದಿಂದ ಸ್ಫೋಟಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸ್ಫೋಟದ ಹಿಂದಿರುವವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಸಾಗುತ್ತಿದೆ.





