ಪ್ರಕೃತಿಯ ಕೋಪಕ್ಕೆ ತಂಡಾ ಹೊಡೆದ ನೇಪಾಳ: ಕೊಚ್ಚಿಹೋದ ಗಡಿ ಗ್ರಾಮಗಳು

Your paragraph text (21)

ನೇಪಾಳ: ಪ್ರಕೃತಿಯ ಮಡಿಲಲ್ಲಿರುವ ಸುಂದರ ದೇಶ ನೇಪಾಳಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕೆಂಬುದು ಪ್ರತಿಯೊಬ್ಬ ಪ್ರವಾಸಿಗನ ಕನಸು. ಅಷ್ಟರಮಟ್ಟಿಗೆ ತನ್ನ ನಿಸರ್ಗ ಸೌಂದರ್ಯದಿಂದ ಜಗತ್ತಿನ ಪ್ರವಾಸಿಗರನ್ನು ಸೆಳೆಯುವ ನೇಪಾಳದಲ್ಲಿ, ಇದೀಗ ಕಂಡು-ಕೇಳರಿಯದ ಜಲಪ್ರಳಯ ಸಂಭವಿಸಿದೆ. ಭೀಕರ ಪ್ರವಾಹದಿಂದಾಗಿ ಅಲ್ಲಿನ ಸಾಮಾನ್ಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಪ್ರಕೃತಿಯ ವಿಕೋಪಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು ತತ್ತರಿಸಿಹೋಗಿದ್ದಾರೆ.

ಕಂಡು-ಕೇಳರಿಯದ ಪ್ರವಾಹಕ್ಕೆ ಕೊಚ್ಚಿಹೋದ ಗಡಿ ಗ್ರಾಮಗಳು

ಬುಧವಾರದವರೆಗೂ ಸುರಿದ ಭಾರೀ ಮಳೆಯಿಂದ ಕಂಗಾಲಾಗಿದ್ದ ಜನರಿಗೆ ‘ಬೋಟಿ ಕೋಶಿ’ ನದಿಯ ದಿಢೀರ್ ಜಲಪ್ರಳಯವು ಜನರ ಜೀವನ ಅಸ್ತವ್ಯಸ್ತಗೊಳಿಸಿದೆ. ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ನೇಪಾಳ-ಚೀನಾ ಗಡಿ ಭಾಗದಲ್ಲಿ ವಾಸಿಸುತ್ತಿದ್ದ ಹಲವು ಜನರು ಜೀವ ಕಳೆದುಕೊಂಡಿದ್ದಾರೆ. ನೂರಾರು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ತಣ್ಣಗಾಗದ ಬೋಟಿ ಕೋಶಿ ನದಿಯ ಆರ್ಭಟ

ಗಂಗಾ ನದಿಯ ಉಪನದಿಯಾಗಿರುವ ‘ಬೋಟಿ ಕೋಶಿ’ ನದಿ ಈ ಭಾಗದ ಹಲವು ಹಳ್ಳಿಗಳಿಗೆ ಮುಖ್ಯ ಜೀವಜಲವಾಗಿದೆ. ಆದರೆ ಏಕಾಏಕಿ ಉಂಟಾದ ಮೇಘಸ್ಫೋಟದಿಂದಾಗಿ ನದಿ ರೌದ್ರರೂಪ ತಾಳಿದೆ. ಈ ರಭಸದ ಪ್ರವಾಹದಲ್ಲಿ ಭಾರತೀಯರು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. 150ಕ್ಕೂ ಹೆಚ್ಚು ಜನರು ಪ್ರವಾಹದ ನೀರಿಗೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೇಘಸ್ಫೋಟದ ಭೀಕರತೆ: ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣೆ

ನದಿಯ ರೌದ್ರಾವತಾರಕ್ಕೆ ದಂಡೆಯಲ್ಲಿದ್ದ ಇಡೀ ಗ್ರಾಮಗಳೇ ಕೊಚ್ಚಿಹೋಗಿವೆ. ಇತ್ತ ಪ್ರವಾಸಕ್ಕೆ ಬಂದಿದ್ದ ನೂರಾರು ಪ್ರವಾಸಿಗರು ದಿಕ್ಕು ಕಾಣದೆ ಪರದಾಡುವಂತಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ರಕ್ಷಣಾ ಕಾರ್ಯಕ್ಕಾಗಿ ನೇಪಾಳ ಸರ್ಕಾರ ಸೇನೆಯನ್ನು ರಂಗಕ್ಕಿಳಿಸಿದೆ. ಸಂಕಷ್ಟದಲ್ಲಿ ಸಿಲುಕಿದವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಸೇನಾ ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗಿದೆ.

ನೇಪಾಳದ ಈ ದುಸ್ಥಿತಿಗೆ ಚೀನಾ ಕಾರಣವೇ?

ಮೂಲಗಳ ಪ್ರಕಾರ, ನೇಪಾಳದಲ್ಲಿ ಉಂಟಾಗಿರುವ ಈ ದಿಢೀರ್ ಪ್ರಾಕೃತಿಕ ವಿಕೋಪಕ್ಕೆ ನೆರೆಯ ಚೀನಾ ದೇಶವೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ. ನೇಪಾಳ-ಚೀನಾ ಗಡಿಭಾಗದಲ್ಲಿ ಚೀನಾ ಕೈಗೆತ್ತಿಕೊಂಡಿರುವ ಅವೈಜ್ಞಾನಿಕ ಬೃಹತ್ ಕಾಮಗಾರಿಗಳು ಮತ್ತು ನಿರ್ಮಾಣ ಕಾರ್ಯಗಳೇ ಈ ಮೇಘಸ್ಫೋಟ ಹಾಗೂ ಪ್ರವಾಹಕ್ಕೆ ಪ್ರಮುಖ ಕಾರಣ ಎಂದು ಅಲ್ಲಿನ ಸ್ಥಳೀಯರು ಹಾಗೂ ವಿಶ್ಲೇಷಕರು ಶಂಕಿಸಿದ್ದಾರೆ.

ಭಾರತದಲ್ಲೂ ಸೃಷ್ಟಿಯಾಯ್ತು ನೆರೆ ಭೀತಿ!

ನೇಪಾಳದಲ್ಲಿ ಉಂಟಾಗಿರುವ ಈ ಪ್ರಳಯದ ಕಾವು ಇದೀಗ ಭಾರತಕ್ಕೂ ತಟ್ಟಿದೆ. ನೇಪಾಳದಿಂದ ಅಪಾರ ಪ್ರಮಾಣದ ನೀರು ಕೆಳಭಾಗಕ್ಕೆ ಹರಿದುಬರುತ್ತಿರುವುದರಿಂದ ಭಾರತದ ನೆರೆಯ ರಾಜ್ಯಗಳಾದ ಬಿಹಾರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಪ್ರವಾಹದ ಭೀತಿ ಎದುರಾಗಿದೆ. ನದಿ ತಟದ ಜನರಿಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದ್ದು, ನಿಕಟ ನಿಗಾ ವಹಿಸಲಾಗಿದೆ.

Exit mobile version