ಕುಮಟಾದ ತದಡಿ ಬಂದರಿನಲ್ಲಿ ಬೋಟ್ ಮುಳುಗಡೆ: ನಾಲ್ವರು ಮೀನುಗಾರರ ರಕ್ಷಣೆ

Untitled design (61)

ಕಾರವಾರ, ಆ.16: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಅಳಿವೆಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ವೊಂದು ಹೂಳಿನಲ್ಲಿ ಸಿಲುಕಿ ಮುಳುಗಡೆಯಾದ ಘಟನೆ ನಡೆದಿದೆ. ಸ್ಥಳೀಯ ಮೀನುಗಾರರ ಸಮಯೋಚಿತ ಕಾರ್ಯಾಚರಣೆಯಿಂದ ಬೋಟ್‌ ನಲ್ಲಿದ್ದ ನಾಲ್ವರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. 

ತದಡಿ ಬಂದರಿನಿಂದ ಮೋಹನ್ ಕಿಮಾನಿ ಅವರಿಗೆ ಸೇರಿದ ‘ಶ್ರೀದೇವಿ’ ಹೆಸರಿನ ಬೋಟ್ ಸಮುದ್ರಕ್ಕೆ ತೆರಳುತ್ತಿದ್ದ ವೇಳೆ ಅಳಿವೆಯಲ್ಲಿನ ಹೂಳಿನಲ್ಲಿ ಸಿಲುಕಿಕೊಂಡಿದೆ. ಹೂಳಿಗೆ ತಾಕಿದ ಪರಿಣಾಮ ಬೋಟ್‌ನ ತಳಭಾಗಕ್ಕೆ ಗಂಭೀರ ಹಾನಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಬೋಟ್ ನೀರು ತುಂಬಿಕೊಂಡು ಮುಳುಗಡೆಯಾಗಿದೆ.

ಅಪಾಯದಲ್ಲಿದ್ದ ನಾಲ್ವರು ಮೀನುಗಾರರ ನೆರವಿಗೆ ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಎಲ್ಲರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಸ್ಥಳೀಯ ಮೀನುಗಾರರು ಯಶಸ್ವಿಯಾದರು. I ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೋಟ್ ಮುಳುಗಡೆಯಿಂದ 15 ರೂ. ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೋಟ್‌ನೊಂದಿಗೆ ಮೀನುಗಾರಿಕೆಗೆ ಬಳಸುತ್ತಿದ್ದ ದುಬಾರಿ ಬಲೆಗಳು ಹಾಗೂ ಇತರೆ ಉಪಕರಣಗಳು ಸಮುದ್ರ ಪಾಲಾಗಿವೆ.

ಸ್ಥಳೀಯ ಮೀನುಗಾರರ ಮಾಹಿತಿಯಂತೆ, ತದಡಿ ಬಂದರಿನ ಅಳಿವೆಯಲ್ಲಿ ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದ್ದು, ಅದನ್ನು ಸಮರ್ಪಕವಾಗಿ ತೆರವುಗೊಳಿಸದ ಕಾರಣ ಇಂತಹ ಅವಘಡಗಳು ಮರುಕಳಿಸುತ್ತಿವೆ. ಆಗಾಗ್ಗೆ ಬೋಟ್‌ಗಳು ಹಾನಿಗೊಳಗಾಗುವುದು ಹಾಗೂ ಮುಳುಗಡೆಯಾಗುವ ಘಟನೆಗಳಿಂದ ಮೀನುಗಾರರು ಆತಂಕದಲ್ಲಿದ್ದಾರೆ.

ಈ ಹಿನ್ನೆಲೆ, ತದಡಿ ಬಂದರಿನಲ್ಲಿ ತುರ್ತಾಗಿ ಹೂಳು ತೆರವು ಕಾರ್ಯ ಕೈಗೊಂಡು ಸುರಕ್ಷಿತ ನೌಕಾಯಾನಕ್ಕೆ ಅಗತ್ಯ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಮೀನುಗಾರರು ಮೀನುಗಾರಿಕಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Exit mobile version