ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ನಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಇಂದಿನ (ಆಗಸ್ಟ್ 7ರಿಂದ) 18ರವರೆಗೆ 11 ದಿನಗಳ ಕಾಲ ನಡೆಯಲಿರುವ ಈ ಪುಷ್ಪಮೇಳವು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಜೀವನ ಹಾಗೂ ಸಾಧನೆಯನ್ನು ಫಲಪುಷ್ಪಗಳ ಮೂಲಕ ಅನಾವರಣಗೊಳಿಸಲಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ರಾಮಲಿಂಗರೆಡ್ಡಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದೆ.
ಕಿತ್ತೂರು ಕೋಟೆಯ ಮಾದರಿಯಲ್ಲಿ ವಿಶೇಷ ವಿನ್ಯಾಸ:
ಗಾಜಿನ ಮನೆಯಲ್ಲಿ 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರು ಕೋಟೆಯ ಮಾದರಿಯನ್ನು ಫಲಪುಷ್ಪಗಳ ಮೂಲಕ ನಿರ್ಮಿಸಲಾಗಿದೆ. ಕೋಟೆಯ ಒಳಭಾಗದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಹೋರಾಟದ ಸ್ಮರಣೆಯನ್ನು ಹೂವುಗಳಿಂದ ಚಿತ್ರಿಸಲಾಗಿದೆ. ಆಂಥೋರಿಯಂ, ಗುಲಾಬಿ, ಜರ್ಬೇರಾ, ಆರ್ಕಿಡ್, ರೆಡ್ ಹಾಟ್ ಪೋಕರ್, ಆಲ್ ಸ್ಟೋರಮೇರಿಯನ್ ಲಿಲ್ಲಿ, ಪೂಷಿಯಾ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಈ ಪ್ರದರ್ಶನದಲ್ಲಿ ಬಳಸಲಾಗಿದೆ.
ಟಿಕೆಟ್ ವಿವರಗಳು ಮತ್ತು ಆನ್ಲೈನ್ ಬುಕಿಂಗ್
ಫಲಪುಷ್ಪ ಪ್ರದರ್ಶನಕ್ಕೆ ಆನ್ಲೈನ್ ಟಿಕೆಟ್ ಖರೀದಿಗೆ https://hasiru.karnataka.gov.in/floweshow/login.aspx ಮೂಲಕ ಅವಕಾಶವಿದೆ. ಆನ್ಲೈನ್ ಟಿಕೆಟ್ನ ಕ್ಯೂಆರ್ ಕೋಡ್ ತೋರಿಸಿ ಪ್ರವೇಶ ಪಡೆಯಬಹುದು. ಟಿಕೆಟ್ ದರಗಳು ಈ ಕೆಳಗಿನಂತಿವೆ:
-
ಸಾಮಾನ್ಯ ದಿನಗಳಲ್ಲಿ: ವಯಸ್ಕರಿಗೆ 80 ರೂ., ಮಕ್ಕಳಿಗೆ 30 ರೂ.
-
ರಜಾದಿನಗಳಲ್ಲಿ: ವಯಸ್ಕರಿಗೆ 100 ರೂ.
-
1 ರಿಂದ 10ನೇ ತರಗತಿಯ ಶಾಲಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.
11 ಲಕ್ಷ ಜನರ ಭೇಟಿಯ ನಿರೀಕ್ಷೆ
ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 11 ಲಕ್ಷ ಜನರು ಭೇಟಿ ನೀಡುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಕ್ಷಣಗಳನ್ನು ಫಲಪುಷ್ಪಗಳ ಮೂಲಕ ಚಿತ್ರಿಸುವ ಈ ಪ್ರದರ್ಶನವು ಎಲ್ಲರ ಗಮನ ಸೆಳೆಯಲಿದೆ.