ಮಳೆ ಕೊರತೆ: 30 ವರ್ಷಗಳ ಬಳಿಕ ಬರಿದಾದ ಭದ್ರೆಯ ಒಡಲು!

Untitled design (80)

ಚಿಕ್ಕಮಗಳೂರು (ಜೂನ್ 21):  ಜೂನ್‌ ತಿಂಗಳಿನಲ್ಲಿ ಆರಂಭವಾಗಬೇಕಾಗಿದ್ದ ಮಳೆ ಇನ್ನು ಸರಿಯಾಗಿ ಆರಂಭವಾಗಿಲ್ಲ. ಕೆರೆ ನದಿ ಹಳ್ಳಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಮಳೆಯ ಕೊರತೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಸುಮಾರು ಮೂರು ದಶಕಗಳ ಬಳಿಕ ಭದ್ರಾ ನದಿಯ ಒಡಲು ಬರಿದಾಗಿರುವುದು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಮುಂಗಾರು ಆರಂಭವಾದ ಜೂನ್ ತಿಂಗಳ ವೇಳೆಗೆ ಭರ್ತಿಯಾಗಿ ಹರಿಯುವ ಭದ್ರಾ ನದಿ ಈ ಬಾರಿ ನೀರಿನ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದೆ.

ಮಳೆ ಕೊರತೆಯಿಂದ ಭದ್ರಾ ನದಿಯ ನೀರಿನ ಮಟ್ಟ ತೀವ್ರ ಕುಸಿತ

ಸುಮಾರು 30 ವರ್ಷಗಳ ಬಳಿಕ ಬರಿದಾದಭದ್ರೆಯ ಒಡಲು 

ಕುಡಿಯುವ ನೀರು, ಕೃಷಿ ಮತ್ತು ಪರಿಸರದ ಮೇಲೆ ಪರಿಣಾಮ ಬೀಳುವ ಭೀತಿ

ಹವಾಮಾನ ತಜ್ಞರ ಪ್ರಕಾರ, ಈ ಬಾರಿ ಸೂಪರ್ ಎಲ್ ನಿನೋ ಪರಿಣಾಮದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದಿರುವುದು ಈ ಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮವಾಗಿ ಭದ್ರಾ ನದಿಗೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ನದಿಯ ಹಾಸಿನಲ್ಲಿ ನೀರು ಕಡಿಮೆಯಾಗಿರುವುದರಿಂದ ಕೆಳಭಾಗದಲ್ಲಿದ್ದ ಕಲ್ಲು-ಬಂಡೆಗಳು ಈಗ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಬಾಳೆಹೊನ್ನೂರು ಸಮೀಪದ ಸೇತುವೆ ಬಳಿ ನೀರಿನ ಮಟ್ಟ ಸಂಪೂರ್ಣ ಕೆಳಮಟ್ಟಕ್ಕೆ ಕುಸಿದಿದ್ದು, ಒಂದು ಕಾಲದಲ್ಲಿ ನದಿಯ ಪ್ರಬಲ ಹರಿವಿನಿಂದ ಕಾಲಿಡಲು ಸಹ ಹೆದರುತ್ತಿದ್ದ ಸ್ಥಳ ಇದೀಗ ಆಟದ ಮೈದಾನವಾಗಿ ಪರಿವರ್ತನೆಯಾಗಿದೆ. ಯುವಕರು ನದಿಯ ಮಧ್ಯಭಾಗದಲ್ಲೇ ವಾಲಿಬಾಲ್ ಮತ್ತು ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ಇದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ

ಕಳಸ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಹುಟ್ಟುವ ಭದ್ರಾ ನದಿ ಚಿಕ್ಕಮಗಳೂರು ಸೇರಿದಂತೆ ಹಲವು ಭಾಗಗಳ ಸಾವಿರಾರು ಜನರ ಕುಡಿಯುವ ನೀರು, ಕೃಷಿ ಹಾಗೂ ಪರಿಸರ ವ್ಯವಸ್ಥೆಗೆ ಪ್ರಮುಖ ಆಧಾರವಾಗಿದೆ. ನದಿಯ ನೀರಿನ ಮಟ್ಟ ಕುಸಿತದಿಂದ ರೈತರು ಹಾಗೂ ಸ್ಥಳೀಯ ನಿವಾಸಿಗಳು ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ.

ತಜ್ಞರು ಎಚ್ಚರಿಸಿರುವಂತೆ, ಮುಂದಿನ ದಿನಗಳಲ್ಲಿ ಉತ್ತಮ ಪ್ರಮಾಣದ ಮಳೆಯಾಗದಿದ್ದರೆ ಭದ್ರಾ ನದಿಯ ನೀರಿನ ಮಟ್ಟ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಇದರಿಂದ ಕೃಷಿ ಚಟುವಟಿಕೆಗಳು, ಕುಡಿಯುವ ನೀರಿನ ಪೂರೈಕೆ ಹಾಗೂ ಪರಿಸರ ಸಮತೋಲನದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗಿದೆ.

ಪ್ರಸ್ತುತ ಕಂಡು ಬರುತ್ತಿರುವ ಈ ಪರಿಸ್ಥಿತಿ ಕೇವಲ ಒಂದು ನದಿಯ ಸಮಸ್ಯೆಯಾಗಿರದೆ, ಹವಾಮಾನ ವೈಪರೀತ್ಯ ಮತ್ತು ಮಳೆಯ ಅಸ್ಥಿರತೆಯ ಗಂಭೀರ ಎಚ್ಚರಿಕೆಯಾಗಿದೆ. ಆದ್ದರಿಂದ ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯತೆ ಮತ್ತೊಮ್ಮೆ ಸ್ಪಷ್ಟವಾಗಿದೆ. ಮಳೆಯ ಕೊರತೆ ಹೀಗೆ ಮುಂದುವರೆದರೆ ಜನಸಾಮಾನ್ಯರ ಮೇಲೆ ಮಾತ್ರವಲ್ಲದೆ ಪರಿಸರ ಪ್ರಾಣಿ-ಪಕ್ಷಿಗಳ ಮೇಲೆ ಕೂಡಾ ಗಂಭೀರವಾದ ಪರಿಣಾಮ ಬೀರುತ್ತದೆ.

Exit mobile version