ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ಆಘಾತಕಾರಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 33 ವರ್ಷದ ಯುವಕನೊಬ್ಬ 55 ವರ್ಷದ ಮಹಿಳೆಯೊಂದಿಗೆ ಇದ್ದ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಆಕೆಯ ಪತಿಯನ್ನು ಕೊಂದು, ಶವವನ್ನು ಪೆಟ್ರೋಲ್ ಸುರಿದು ಸುಟ್ಟುಹಾಕಿದ ಘಟನೆಯಲ್ಲಿ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರದ ಹಿಂದೆ ಕಂಸಾಗರ ಗೇಟ್ ಬಳಿ ಸುಟ್ಟು ಕರಕಲಾದ ಶವವೊಂದು ಪತ್ತೆಯಾಗಿತ್ತು. ಈ ಅನಾಮಧೇಯ ಶವದ ಗುರುತು ಪತ್ತೆಹಚ್ಚಲು ಕಡೂರು ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದರು. ಇದೇ ವೇಳೆ, ಕಡೂರು ಪಟ್ಟಣದ ನಿವಾಸಿಯಾದ ಮೀನಾಕ್ಷಮ್ಮ ಎಂಬಾಕೆ ತನ್ನ ಗಂಡ ಸುಬ್ರಹ್ಮಣ್ಯ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಎರಡು ಪ್ರಕರಣಗಳ ಸಂಬಂಧವನ್ನು ತನಿಖೆಯ ಮೂಲಕ ಪೊಲೀಸರು ಕಂಡುಹಿಡಿದರು.
ADVERTISEMENT
ADVERTISEMENT
ತನಿಖೆಯ ಸಂದರ್ಭದಲ್ಲಿ, ಕೊಲೆಯಾದ ವ್ಯಕ್ತಿಯ ಗುರುತು ಸುಬ್ರಹ್ಮಣ್ಯ ಎಂದು ಖಚಿತವಾಯಿತು. ಕಡೂರು ಪೊಲೀಸ್ ಠಾಣೆಯ ಪಿಎಸ್ಐ ನೇತೃತ್ವದ ಎರಡು ಪ್ರತ್ಯೇಕ ತಂಡಗಳು ತಾಂತ್ರಿಕ ಮಾಹಿತಿ ಮತ್ತು ವಿವಿಧ ಆಯಾಮಗಳ ತನಿಖೆಯನ್ನು ಕೈಗೊಂಡವು. ಈ ವೇಳೆ, ಕಡೂರು ಪಟ್ಟಣದ ಪ್ಲೇಗಿನಮ್ಮ ದೇವಸ್ಥಾನದ ಸಮೀಪದ ನಿವಾಸಿಗಳಾದ ಪ್ರದೀಪ್ ಆಚಾರ್, ಸಿದ್ದೇಶ್, ಮತ್ತು ವಿಶ್ವಾಸ್ ಎಂಬ ಮೂವರನ್ನು ವಶಕ್ಕೆ ಪಡೆಯಲಾಯಿತು. ಕೂಲಂಕುಶವಾದ ವಿಚಾರಣೆಯಲ್ಲಿ ಕೊಲೆಗೆ ನಿಖರ ಕಾರಣ ಬಯಲಿಗೆ ಬಂದಿತು.
ಮೊದಲ ಆರೋಪಿಯಾದ ಪ್ರದೀಪ್ ಆಚಾರ್ಗೆ ಮೃತ ಸುಬ್ರಹ್ಮಣ್ಯ ಅವರ ಪತ್ನಿ ಮೀನಾಕ್ಷಮ್ಮನೊಂದಿಗೆ ಅಕ್ರಮ ಸಂಬಂಧವಿತ್ತು. ಈ ಸಂಬಂಧಕ್ಕೆ ಸುಬ್ರಹ್ಮಣ್ಯ ಅಡ್ಡಿಯಾಗಿದ್ದ ಕಾರಣ, ಪ್ರದೀಪ್ ತನ್ನ ಸ್ನೇಹಿತರಾದ ಸಿದ್ದೇಶ್ ಮತ್ತು ವಿಶ್ವಾಸ್ಗೆ ಹಣದ ಆಮೀಷವೊಡ್ಡಿ ಸಹಾಯ ಪಡೆದಿದ್ದ.
ಆರೋಪಿಗಳು ಕಂಸಾಗರ ಗೇಟ್ ಬಳಿ ಮಾರುತಿ ಓಮಿನಿ ಕಾರಿನಲ್ಲಿ ಸುಬ್ರಹ್ಮಣ್ಯ ಅವರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಂದು, ನಂತರ ಶವವನ್ನು ಸೌದೆ ಮತ್ತು ಪೆಟ್ರೋಲ್ ಬಳಸಿ ಸುಟ್ಟುಹಾಕಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆದಿದ್ದಾರೆ.