ಬೈಕ್‌ ತಪ್ಪಿಸಲು ಹೋಗಿ ಪಲ್ಟಿಯಾದ ಕಂಟೇನರ್‌: ಕೂದಲೆಳೆ ಅಂತರದಲ್ಲಿ ಪಾರಾದ ಕಾರು

Untitled design (12)

ಚಿಕ್ಕಬಳ್ಳಾಪುರ ಆ.31 ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಹೆದ್ದಾರಿ ಬಳಿ ಬೈಕ್‌ವೊಂದನ್ನು ತಪ್ಪಿಸಲು ಹೋಗಿ ಕಂಟೇನರ್‌ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್‌ ಕಂಟೇನರ್‌ ಪಲ್ಟಿಯಾದ ವೇಳೆ ಪಕ್ಕದಲ್ಲೇ ಸಂಚರಿಸುತ್ತಿದ್ದ ವ್ಯಾಗನಾರ್‌ ಕಾರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಘಟನೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಾಹಿತಿ ಪ್ರಕಾರ, ಬಾಗೇಪಲ್ಲಿ ಕಡೆಯಿಂದ ಬೆಂಗಳೂರಿನತ್ತ ಈ ಕಂಟೇನರ್‌ ವಾಹನ ಸಂಚರಿಸುತ್ತಿತ್ತು. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಹೆದ್ದಾರಿ ಬಳಿ ಕಂಟೇನರ್‌ ಸಾಗುತ್ತಿದ್ದ ಸಂದರ್ಭದಲ್ಲಿ ನಗರದ ಕಡೆಯಿಂದ ಬೈಕ್‌ವೊಂದು ಏಕಾಏಕಿ ಹೆದ್ದಾರಿಗೆ ನುಗ್ಗಿ ಬಂದಿದೆ ಎನ್ನಲಾಗಿದೆ. ಮುಂದೆ ಬಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕಂಟೇನರ್‌ ಚಾಲಕ ತಕ್ಷಣವೇ ವಾಹನವನ್ನು ಬದಿಗೆ ತಿರುಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್‌ ರಸ್ತೆ ಬದಿಗೆ ಉರುಳಿ ಪಲ್ಟಿಯಾಗಿದೆ. ಕಂಟೇನರ್‌ ಪಲ್ಟಿಯಾಗುವ ಸಂದರ್ಭದಲ್ಲಿ ಅದರ ಸಮೀಪದಲ್ಲೇ ವ್ಯಾಗನಾರ್‌ ಕಾರೊಂದು ಸಂಚರಿಸುತ್ತಿತ್ತು. ಕಂಟೇನರ್‌ ಕಾರಿನತ್ತ ಉರುಳಿದರೂ ಕೂದಲೆಳೆ ಅಂತರದಲ್ಲಿ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕ್ಷಣಮಾತ್ರದ ವ್ಯತ್ಯಾಸವಾಗಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಅಪಘಾತದ ರಭಸಕ್ಕೆ ಕಂಟೇನರ್‌ನ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಹಾಗೂ ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಪಘಾತದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದೃಶ್ಯದಲ್ಲಿ ಕಂಟೇನರ್‌ ಹೆದ್ದಾರಿಯಲ್ಲಿ ಸಾಗುತ್ತಿರುವುದು, ಏಕಾಏಕಿ ಬೈಕ್‌ ಹೆದ್ದಾರಿಗೆ ಪ್ರವೇಶಿಸುವುದು ಹಾಗೂ ಅದನ್ನು ತಪ್ಪಿಸಲು ಹೋಗಿ ಕಂಟೇನರ್‌ ಪಲ್ಟಿಯಾಗುವುದು ಕಾಣಿಸುತ್ತದೆ. ಇದೇ ವೇಳೆ ಪಕ್ಕದಲ್ಲಿ ಸಾಗುತ್ತಿದ್ದ ವ್ಯಾಗನಾರ್‌ ಕಾರು ಕೂಡ ಅಪಾಯದಿಂದ ಪಾರಾಗಿರುವುದು ದೃಶ್ಯದಲ್ಲಿ ಗೋಚರಿಸಿದೆ.

ಘಟನೆ ಕುರಿತು ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ವಾಹನಗಳ ಸಂಚಾರ, ಅಜಾಗರೂಕತೆಯಿಂದ ರಸ್ತೆ ಪ್ರವೇಶಿಸುವುದು ಹಾಗೂ ವೇಗದ ಚಾಲನೆಯಿಂದ ಅಪಘಾತಗಳ ಸಂಭವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.

Exit mobile version