ಬೆಂಗಳೂರು: ಬೆಂಗಳೂರಿನ ಬೇಗೂರು ಅಪಾರ್ಟ್ಮೆಂಟ್ನಲ್ಲಿ ಕಂಡುಬಂದ ಅಸ್ಥಿಪಂಜರ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದೆ. ಪ್ರಾಥಮಿಕ ಪರೀಕ್ಷೆಯ ವರದಿಯ ಪ್ರಕಾರ, ಈ ಅಸ್ಥಿಪಂಜರ ಕೊಲೆ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂಬುದು ತಿಳಿದುಬಂದಿದೆ. ಜೊತೆಗೆ, ಸುಮಾರು ಎರಡು ವರ್ಷಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆಯ ಸುಳಿವು ಸಿಕ್ಕಿದೆ. ಈ ಘಟನೆಯಿಂದಾಗಿ ಇಡೀ ಬೆಂಗಳೂರು ಆಘಾತಕ್ಕೊಳಗಾಗಿದ್ದು, ಅಸ್ಥಿಪಂಜರ ಯಾರದ್ದು ಎಂಬ ಪ್ರಶ್ನೆಯೊಂದಿಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಬೇಗೂರು ಅಪಾರ್ಟ್ಮೆಂಟ್ನ ಇಂಗುಗುಂಡಿಯಲ್ಲಿ ಕಂಡುಬಂದ ಅಸ್ಥಿಪಂಜರದ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆಯಿಂದ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ. ಪರೀಕ್ಷೆಯ ವರದಿಯ ಪ್ರಕಾರ:
-
ಅಸ್ಥಿಪಂಜರವು 153 ಸೆ.ಮೀ. ಎತ್ತರದ, 30 ರಿಂದ 35 ವರ್ಷ ವಯಸ್ಸಿನ ಪುರುಷನದ್ದಾಗಿದೆ.
-
ಅಸ್ಥಿಪಂಜರದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ, ಆದ್ದರಿಂದ ಕೊಲೆಯ ಶಂಕೆ ತಳ್ಳಿಹಾಕಲಾಗಿದೆ.
-
ಸಾವು ಸುಮಾರು 2 ವರ್ಷಗಳ ಹಿಂದೆ ಇಂಗುಗುಂಡಿಯ ನೀರಿನಲ್ಲಿ ಮುಳುಗಿ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
-
ಆಯತಪ್ಪಿ ಇಂಗುಗುಂಡಿಗೆ ಬಿದ್ದು ಸಾವು ಸಂಭವಿಸಿರಬಹುದು ಎಂಬ ಊಹೆಯಿದೆ.
ಅಸ್ಥಿಪಂಜರದ ಗುರುತು ಪತ್ತೆಹಚ್ಚಲು ಬೇಗೂರು ಪೊಲೀಸರು 2016 ರ ನಂತರದ ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದಾರೆ. ಏಕೆಂದರೆ, 2016 ರಲ್ಲಿ ಈ ಅಪಾರ್ಟ್ಮೆಂಟ್ನ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಕೊನೆಯ ಹಂತದಲ್ಲಿ ಇಂಗುಗುಂಡಿ ನಿರ್ಮಾಣವಾಗಿತ್ತು. ಆದ್ದರಿಂದ, 2016 ರಿಂದ ಬೇಗೂರು ಸುತ್ತಮುತ್ತ ಕಾಣೆಯಾದ ಪುರುಷರ ಕೇಸ್ಗಳ ಬಗ್ಗೆ ತನಿಖೆ ನಡೆಯುತ್ತಿದೆ. ಫಾರೆನ್ಸಿಕ್ ವಿಜ್ಞಾನ ಪ್ರಯೋಗಾಲಯದಲ್ಲಿ (FSL) ಡಿಎನ್ಎ ಮತ್ತು ಫಿಂಗರ್ಪ್ರಿಂಟ್ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಡಿಎನ್ಎ ವರದಿಯು ಬಂದ ನಂತರ, ಕಾಣೆಯಾದವರ ಸಂಬಂಧಿಕರ ಡಿಎನ್ಏ ಜೊತೆ ಹೋಲಿಕೆ ಮಾಡಿ ಮೃತನ ಗುರುತನ್ನು ದೃಢೀಕರಿಸಲಾಗುವುದು.
ಪ್ರಕರಣದ ಕುತೂಹಲ:
ಪ್ರಾಥಮಿಕ ವರದಿಯಲ್ಲಿ ಕೊಲೆಯ ಶಂಕೆ ತಳ್ಳಿಹಾಕಲಾಗಿದ್ದರೂ, ಅಸ್ಥಿಪಂಜರ ಯಾರದ್ದು ಎಂಬ ರಹಸ್ಯ ಇನ್ನೂ ಉಳಿದಿದೆ. ಈ ಬೆಳವಣಿಗೆಗಳಿಂದಾಗಿ, ಬೇಗೂರು ಅಪಾರ್ಟ್ಮೆಂಟ್ನ ಅಸ್ಥಿಪಂಜರ ಪ್ರಕರಣವು ಮತ್ತಷ್ಟು ಕುತೂಹಲ ಮೂಡಿಸಿದೆ. ಡಿಎನ್ಎ ವರದಿಯ ಫಲಿತಾಂಶವು ಈ ರಹಸ್ಯವನ್ನು ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
