IPL ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಗಿಫ್ಟ್: ಮಧ್ಯರಾತ್ರಿವರೆಗೆ ಮೆಟ್ರೋ ಸಂಚಾರ, 44 ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ!

Untitled design (12)

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಅಬ್ಬರ ಜೋರಾಗಿದೆ. ಮಾರ್ಚ್ 28ರ ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಹಣಾಹಣಿಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗುಡ್‌ನ್ಯೂಸ್‌ವೊಂದನ್ನ ನೀಡಿದೆ. ಪಂದ್ಯ ವೀಕ್ಷಿಸಿ ಮನೆಗೆ ಮರಳಲು ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದ್ದು, ವಾಹನ ಸವಾರರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಧ್ಯರಾತ್ರಿ 1.30ರವರೆಗೆ ಮೆಟ್ರೋ ರೈಲು ಲಭ್ಯ

ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಸ್ಥಗಿತಗೊಳ್ಳುವ ಮೆಟ್ರೋ ರೈಲು ಸಂಚಾರವನ್ನು ನಾಳೆಯ ಪಂದ್ಯದ ನಿಮಿತ್ತ ವಿಶೇಷವಾಗಿ ವಿಸ್ತರಿಸಲಾಗಿದೆ. ಪಂದ್ಯವು ತಡರಾತ್ರಿ ಮುಕ್ತಾಯಗೊಳ್ಳುವ ಸಾಧ್ಯತೆ ಇರುವುದರಿಂದ, ಕ್ರೀಡಾಂಗಣಕ್ಕೆ ಹತ್ತಿರವಿರುವ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳಿಂದ ಮಾತ್ರವಲ್ಲದೆ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಮಧ್ಯರಾತ್ರಿ 1.30ಕ್ಕೆ ಹೊರಡಲಿದೆ. ಇದರಿಂದ ದೂರದ ಊರುಗಳಿಗೆ ಅಥವಾ ನಗರದ ಹೊರವಲಯಕ್ಕೆ ತೆರಳುವ ಅಭಿಮಾನಿಗಳು ಕ್ಯಾಬ್ ಅಥವಾ ಆಟೋಗಳಿಗಾಗಿ ಪರದಾಡುವ ಅವಶ್ಯಕತೆಯಿಲ್ಲ.

44 ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ

ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ತಗ್ಗಿಸಲು ಮೆಟ್ರೋ ನಿಗಮವು ನಗರದಾದ್ಯಂತ ಒಟ್ಟು 44 ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ. ಅಭಿಮಾನಿಗಳು ತಮ್ಮ ವಾಹನಗಳನ್ನು ಈ ನಿಲ್ದಾಣಗಳಲ್ಲೇ ಸುರಕ್ಷಿತವಾಗಿ ನಿಲ್ಲಿಸಿ, ಮೆಟ್ರೋ ಮೂಲಕ ಸುಲಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಲುಪಬಹುದು.

ಪಾರ್ಕಿಂಗ್ ದರಗಳು:

ಪ್ರಮುಖ ಪಾರ್ಕಿಂಗ್ ನಿಲ್ದಾಣಗಳು: ವೈಟ್‌ಫೀಲ್ಡ್, ಪಟ್ಟಂದೂರು ಅಗ್ರಹಾರ, ಕುಂದಲಹಳ್ಳಿ, ನಾಯಂಡನಹಳ್ಳಿ, ಚಲ್ಲಘಟ್ಟ, ಕೆ.ಆರ್.ಪುರ, ಮೆಜೆಸ್ಟಿಕ್, ಬನಶಂಕರಿ, ಜಯನಗರ, ಲಾಲ್‌ಬಾಗ್, ಎಲೆಕ್ಟ್ರಾನಿಕ್ ಸಿಟಿ, ನಾಗಸಂದ್ರ, ಮೈಸೂರು ರಸ್ತೆ ಮತ್ತು ಕೆಂಗೇರಿ ಬಸ್ ಟರ್ಮಿನಲ್ ಸೇರಿದಂತೆ ಒಟ್ಟು 44 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇರಲಿದೆ.

ಪಂದ್ಯ ಮುಗಿದ ನಂತರ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯಲು ನೂರಾರು ಜನ ಕ್ಯೂ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್‌ಸಿಎಲ್ ಮಹತ್ವದ ಸಲಹೆ ನೀಡಿದೆ. ಅಭಿಮಾನಿಗಳು ಮುಂಚಿತವಾಗಿಯೇ ತಮ್ಮ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಲು ಅಥವಾ QR ಟಿಕೆಟ್‌ಗಳನ್ನು ಬಳಸಲು ಸೂಚಿಸಲಾಗಿದೆ. ಕ್ರೀಡಾಂಗಣಕ್ಕೆ ಅತ್ಯಂತ ಸಮೀಪದಲ್ಲಿರುವ ಎಂ.ಜಿ. ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಜನದಟ್ಟಣೆ ನಿರ್ವಹಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ಮತ್ತು ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗಿದೆ.

ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ರಸ್ತೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಕರಿಸಬೇಕೆಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.

Exit mobile version