ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯ ನಾಳೆ (ಏಪ್ರಿಲ್ 5, ಭಾನುವಾರ) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು ಬರುವ ಸಾವಿರಾರು ಅಭಿಮಾನಿಗಳ ಸುಗಮ ಸಂಚಾರಕ್ಕಾಗಿ ಮತ್ತು ಜನಸಂದಣಿ ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವಿಶೇಷ ಬಸ್ ಸೌಲಭ್ಯವನ್ನು ಘೋಷಿಸಿದೆ.
ನಗರದ ವಿವಿಧ ಭಾಗಗಳಿಗೆ ವಿಶೇಷ ಬಸ್ಗಳ ಸಂಚಾರ
ಪಂದ್ಯ ಮುಗಿದ ನಂತರ ಅಭಿಮಾನಿಗಳು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ತಲುಪಲು ಅನುಕೂಲವಾಗುವಂತೆ ಕ್ರೀಡಾಂಗಣದ ಸುತ್ತಮುತ್ತಲಿನಿಂದ ನಗರದ ಪ್ರಮುಖ ಬಡಾವಣೆಗಳಿಗೆ ವಿಶೇಷ ಬಸ್ಗಳನ್ನು ನಿಯೋಜಿಸಲಾಗಿದೆ. ಈ ಬಸ್ಗಳು ಈ ಕೆಳಗಿನ ಮಾರ್ಗಗಳಲ್ಲಿ ಸಂಚರಿಸಲಿವೆ:
-
ಕಾಡುಗೋಡಿ ಬಸ್ ನಿಲ್ದಾಣ ಮತ್ತು ಹೆಚ್ಎಎಲ್ ರಸ್ತೆ
-
ಸರ್ಜಾಪುರ ಮತ್ತು ಎಲೆಕ್ಟ್ರಾನಿಕ್ ಸಿಟಿ
-
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
-
ಜನಪ್ರಿಯ ಟೌನ್ ಶಿಪ್ ಮತ್ತು ಮಾಗಡಿ ರಸ್ತೆ
-
ಆರ್.ಕೆ. ಹೆಗಡೆ ನಗರ ಮತ್ತು ಯಲಹಂಕ
-
ಹೊಸಕೋಟೆ ಮತ್ತು ಬನಶಂಕರಿ
ಬಸ್ ನಿಲುಗಡೆ ಸ್ಥಳ ಮತ್ತು ಸಮಯ
ಈ ವಿಶೇಷ ಬಸ್ಗಳು ಸಿಟಿಓ ಜಂಕ್ಷನ್ನಿಂದ ಬಿ.ಆರ್.ವಿ. ಜಂಕ್ಷನ್ ವರೆಗಿನ ರಸ್ತೆಯ ಎಡಭಾಗದಲ್ಲಿ ಸಾಲಾಗಿ ನಿಲ್ಲಲಿವೆ. ಪಂದ್ಯ ಮುಗಿಯುವ ಸಮಯಕ್ಕೆ ಸರಿಯಾಗಿ ಈ ಬಸ್ಗಳು ಲಭ್ಯವಿರಲಿದ್ದು, ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಬಿಎಂಟಿಸಿ ಮನವಿ ಮಾಡಿದೆ. ಬಸ್ ಸೌಲಭ್ಯದ ಜೊತೆಗೆ, ನಮ್ಮ ಮೆಟ್ರೋ (BMRCL) ಸಹ ತನ್ನ ರೈಲು ಸಂಚಾರದ ಸಮಯವನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಿದೆ. ಇದರಿಂದ ಮೆಟ್ರೋ ಬಳಸುವವರಿಗೂ ಅನುಕೂಲವಾಗಲಿದೆ. ಭದ್ರತೆಯ ದೃಷ್ಟಿಯಿಂದ ಕ್ರೀಡಾಂಗಣದ ಒಳಗೆ ಕೆಲವು ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬ್ಯಾಗ್ಗಳು, ನೀರಿನ ಬಾಟಲಿಗಳು, ಲೈಟರ್ಗಳು ಮತ್ತು ಚೂಪಾದ ವಸ್ತುಗಳನ್ನು ಕ್ರೀಡಾಂಗಣದೊಳಗೆ ಅನುಮತಿಸಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆಗೆ ಕಠಿಣ ನಿರ್ಬಂಧವಿರುವುದರಿಂದ, ಸಾರ್ವಜನಿಕರು ತಮ್ಮ ಸ್ವಂತ ವಾಹನಗಳ ಬದಲಿಗೆ ಬಿಎಂಟಿಸಿ ವಿಶೇಷ ಬಸ್ ಅಥವಾ ಮೆಟ್ರೋ ಸೇವೆಯನ್ನು ಬಳಸುವುದರಿಂದ ಸಂಚಾರ ದಟ್ಟಣೆಯನ್ನು ತಪ್ಪಿಸಬಹುದು. ಈ ಮೂಲಕ ಯಾವುದೇ ಅಡಚಣೆಯಿಲ್ಲದೆ ಕ್ರಿಕೆಟ್ ಸಂಭ್ರಮವನ್ನು ಸವಿಯಲು ಪೊಲೀಸರು ಸಲಹೆ ನೀಡಿದ್ದಾರೆ.
