ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಖಾಸಗಿ ಸಹಕಾರಿ ಬ್ಯಾಂಕ್ ಉದ್ಯೋಗಿಯಾದ ಲಕ್ಷ್ಮಿ ಲಾಗಲೋಟಿ ಎಂಬ ಮಹಿಳೆಯನ್ನು ಜ್ಯೋತಿಷಿ ಸೀಮಾಶಾಂಭವಿ ಶೆಟ್ಟಿ ₹28 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಮಗುವಿನ ಅನಾರೋಗ್ಯಕ್ಕೆ ‘ದೆವ್ವ ತಗುಲಿದೆ’ ಎಂದು ಹೇಳಿ, ಹೋಮ-ಹವನಗಳ ನೆಪದಲ್ಲಿ ಚಿನ್ನಾಭರಣ ಮತ್ತು ಠೇವಣಿ ಹಣವನ್ನು ಕಿತ್ತುಕೊಂಡ ಆರೋಪವಿದೆ.
ಲಕ್ಷ್ಮಿ ಲಾಗಲೋಟಿಯವರ ಎರಡು ವರ್ಷದ ಮಗುವಿಗೆ ಮೇಲಿಂದ ಮೇಲೆ ಜ್ವರ ಬರುತ್ತಿತ್ತು. ಚಿಕಿತ್ಸೆಯಿಂದಲೂ ಗುಣವಾಗದಿದ್ದಾಗ, ಲಕ್ಷ್ಮಿಯ ಸ್ನೇಹಿತೆಯೊಬ್ಬರು ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಜ್ಯೋತಿಷಿ ಸೀಮಾಶಾಂಭವಿ ಶೆಟ್ಟಿಯನ್ನು ಪರಿಚಯಿಸಿದರು. ಸೀಮಾಶಾಂಭವಿಯು ಲಕ್ಷ್ಮಿಯವರಿಗೆ ಕರೆ ಮಾಡಿ, “ನಿಮ್ಮ ಮಗುವಿನ ದೇಹದಲ್ಲಿ ನಿಮ್ಮ ತಾಯಿಯ ದೆವ್ವ ಸೇರಿಕೊಂಡಿದೆ. ವಿಶೇಷ ಪೂಜೆ ಮತ್ತು ಹೋಮ-ಹವನಗಳನ್ನು ಮಾಡಬೇಕು,” ಎಂದು ಭಯಹುಟ್ಟಿಸಿದ್ದಾಳೆ.
ನಂತರ, ಸೀಮಾಶಾಂಭವಿಯು ನವಗ್ರಹ ಹೋಮ, ವಿಶೇಷ ಪೂಜೆಗಳನ್ನು ನಡೆಸಿದ್ದೇನೆ ಎಂದು ವಿಡಿಯೊ ಕಳುಹಿಸಿ, ಹಣ ವರ್ಗಾಯಿಸುವಂತೆ ಕೇಳಿದ್ದಾಳೆ. ಇದನ್ನು ನಂಬಿದ ಲಕ್ಷ್ಮಿಯವರು ಫೋನ್ಪೇ, ಆರ್ಟಿಜಿಎಸ್ ಮೂಲಕ ಕೆಲವೇ ತಿಂಗಳುಗಳಲ್ಲಿ ₹28 ಲಕ್ಷ ವರ್ಗಾಯಿಸಿದ್ದಾರೆ. ಇದಕ್ಕಾಗಿ ಲಕ್ಷ್ಮಿಯವರು ತಮ್ಮ ಚಿನ್ನಾಭರಣವನ್ನು ಮಾರಾಟ ಮಾಡಿದ್ದಲ್ಲದೆ, ತಾಯಿಯ ಠೇವಣಿ ಹಣವನ್ನೂ ಕಳೆದುಕೊಂಡಿದ್ದಾರೆ.
ಆದರೆ, ಮಗುವಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದಿದ್ದಾಗ, ವಂಚನೆಯ ಶಂಕೆ ಮೂಡಿದ ಲಕ್ಷ್ಮಿಯವರು ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಜ್ಯೋತಿಷಿ ಸೀಮಾಶಾಂಭವಿ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ, ಮತ್ತು ತನಿಖೆ ಆರಂಭವಾಗಿದೆ.