ರಾಯಚೂರು: ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು ಹಾಗೂ ತೆಲುಗು ನಟಿ ಕೀರ್ತಿ ಸುರೇಶ್ ಅವರು ರಾಯಚೂರಿನ ಹೊಸ ಶಾಪಿಂಗ್ ಮಾಲ್ ಉದ್ಘಾಟನೆಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ನಟಿಯರು ಕಾರ್ನಿಂದ ಇಳಿದು ಅಭಿಮಾನಿಗಳಿಗೆ ಕೈಬೀಸುವ ವೇಳೆ, ಹಲವಾರು ಮಂದಿ ಅವರನ್ನು ನೋಡುವ ಉತ್ಸಾಹದಲ್ಲಿ ಮುಗ್ಗರಿಸಿದರು. ಇದೇ ವೇಳೆ ನಟಿ ಕೀರ್ತಿ ಸುರೇಶ್ ಅಭಿಮಾನಿಗಳತ್ತ ಕೈಬೀಸುತ್ತಿದ್ದಾಗ ಒಬ್ಬ ಅಭಿಮಾನಿ ಅವರ ಬೆನ್ನು ಮುಟ್ಟಿ ಹಾಯ್ ಮಾಡಿ ದುರ್ವರ್ತನೆ ತೋರಿದ್ದಾನೆ. ಈ ವೇಳೆ ತಿರುಗಿ ನೋಡಿ ನಟಿ ಕೀರ್ತಿ ಸುರೇಶ್ ಹಾಯ್ ಮಾಡಿ ಸುಮ್ಮನಾಗಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕೀರ್ತಿ ಸುರೇಶ್ ಅವರು ತೆಲುಗು ಹಾಡಿಗೆ ಹೆಜ್ಜೆ ಹಾಕಿದರು. ಈ ವೇಳೆ ಸಿಳ್ಳೆ, ಕೇಕೆ ಹಾಕಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಕೀರ್ತಿ ಸುರೇಶ್, ಈ ಬಾರಿ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನ ಮಾಡಿದರು. “ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲಿಯೇ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರ ಅನ್ನೋದು ಮಾತ್ರ ನನಗೆ ಗೊತ್ತು ಎಂದರು. ಇದೇ ಮೊದಲ ಬಾರಿಗೆ ರಾಯಚೂರಿಗೆ ಬಂದಿದ್ದಾಗಿ ಹೇಳಿದ ಅವರು, ರಾಯಚೂರು ಎನರ್ಜಿ ಬಹಳ ಚೆನ್ನಾಗಿದೆ. ಎಲ್ಲರಿಗೂ ಲವ್ ಯು ಎಂದಿದ್ದಾರೆ ಕೀರ್ತೀ ಸುರೇಶ್.