ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಶುಭ ಕೋರಿದ್ದ ಮೋದಿ ಪತ್ರ ವೈರಲ್

ನವದೆಹಲಿ: ಭಾರತೀಯ ಚಿತ್ರರಂಗದ ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹಕ್ಕೆ ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆಯಲಿರುವ ಈ ತಾರಾ ಜೋಡಿಯ ವಿವಾಹ ಮಹೋತ್ಸವಕ್ಕೆ ಪ್ರಧಾನಿಗಳು ವಿಶೇಷ ಪತ್ರದ ಮೂಲಕ ಶುಭಕೋರಿದ್ದಾರೆ.

ವಿಜಯ್ ದೇವರಕೊಂಡ ಅವರ ಪೋಷಕರಾದ ಶ್ರೀ ಗೋವರ್ಧನ್ ರಾವ್ ಮತ್ತು ಮಾಧವಿ ಅವರಿಗೆ ಉದ್ದೇಶಿಸಿ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಅತ್ಯಂತ ಸುಂದರವಾದ ಪದಗಳ ಮೂಲಕ ನವದಂಪತಿಗಳನ್ನು ಹರಸಿದ್ದಾರೆ.

‘ಸಖಾ ಸಪ್ತಪದಾ ಭವ’ ಎಂಬ ಮಂತ್ರದ ಆಳವಾದ ಅರ್ಥವನ್ನು ವಿವರಿಸಿದ ಅವರು, ಜೀವನದ ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವ ಮೂಲಕ ಈ ಜೋಡಿ ಜೀವನಪರ್ಯಂತ ಉತ್ತಮ ಸ್ನೇಹಿತರಾಗಿರಲಿ ಎಂದು ಹಾರೈಸಿದ್ದಾರೆ. ಪರಸ್ಪರರ ಬಲದಿಂದ ಕಲಿಯುತ್ತಾ, ಲೋಪದೋಷಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತಾ ಮುನ್ನಡೆಯುವಂತೆ ಕಿವಿಮಾತು ಹೇಳಿದ್ದಾರೆ.

ಉದಯಪುರದ ಐಷಾರಾಮಿ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಈ ವಿವಾಹದಲ್ಲಿ ಎರಡು ವಿಭಿನ್ನ ಸಂಸ್ಕೃತಿಗಳ ಮೆರುಗು ಇರಲಿದೆ. ವಿಜಯ್ ದೇವರಕೊಂಡ ಅವರ ಮನೆತನದ ತೆಲುಗು ಸಂಪ್ರದಾಯದಂತೆ ಬೆಳಿಗ್ಗೆ ಮದುವೆ ನಡೆದರೆ, ನಂತರ ರಶ್ಮಿಕಾ ಅವರ ಜನ್ಮಭೂಮಿ ಕೊಡಗಿನ ಕೊಡವ ಸಂಪ್ರದಾಯದಂತೆ ಸಂಜೆ ಮತ್ತೊಮ್ಮೆ ಕಲ್ಯಾಣ ನೆರವೇರಲಿದೆ.

ಕೇವಲ 100 ಮಂದಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಈ ಖಾಸಗಿ ಸಮಾರಂಭ ನಡೆಯುತ್ತಿದ್ದು, ಪ್ರಧಾನಿಗಳ ಈ ಪತ್ರವು ಇಡೀ ಸಂಭ್ರಮಕ್ಕೆ ಹೊಸ ಕಳೆ ನೀಡಿದೆ. ಚಿತ್ರರಂಗದ ಸ್ಕ್ರಿಪ್ಟ್‌ಗಳಿಗಿಂತ ಜೀವನದ ಈ ‘ರಿಯಲ್ ಸ್ಕ್ರಿಪ್ಟ್’ ಅದ್ಭುತವಾಗಿರಲಿ ಎಂಬ ಪ್ರಧಾನಿಗಳ ಮಾತು ಅಭಿಮಾನಿಗಳ ಮನ ಗೆದ್ದಿದೆ.

ಮದುವೆಗೂ ಮುನ್ನ ರಶ್ಮಿಕಾಗೆ ವಿಶೇಷ ಗಿಫ್ಟ್‌ ಕೊಟ್ಟ ವಿಜಯ್ ದೇವರಕೊಂಡ ತಾಯಿ

ಉದಯಪುರ: ದಕ್ಷಿಣ ಭಾರತದ ಮೋಸ್ಟ್ ಕ್ಯೂಟ್ ಜೋಡಿ ಎಂದೇ ಖ್ಯಾತರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವವು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ವೈಭವದಿಂದ ಜರುಗುತ್ತಿದೆ. ರಶ್ಮಿಕಾ ತಮ್ಮ ಸುದೀರ್ಘ ಗೆಳೆಯನನ್ನ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮಂಗಳವಾರ ರಾತ್ರಿ ನಡೆದ ಅದ್ಧೂರಿ ಸಂಗೀತ ಸಮಾರಂಭದಲ್ಲಿ, ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರು ತಮ್ಮ ಭಾವಿ ಸೊಸೆ ರಶ್ಮಿಕಾಗೆ ಅತಿ ಅಮೂಲ್ಯವಾದ ‘ಪಾರಂಪರಿಕ ಚರಾಸ್ತಿ ಬಳೆಗಳನ್ನು’ (Heirloom Bangles) ಉಡುಗೊರೆಯಾಗಿ ನೀಡಿದ್ದಾರೆ. ಈ ಬಳೆಗಳು ಕೇವಲ ಆಭರಣಗಳಲ್ಲ, ಬದಲಿಗೆ ದೇವರಕೊಂಡ ಕುಟುಂಬದ ಪರಂಪರೆ, ಪ್ರೀತಿ ಮತ್ತು ರಶ್ಮಿಕಾ ಅವರನ್ನು ತಮ್ಮ ಮನೆಗೆ ಮನಸ್ಪೂರ್ತಿಯಾಗಿ ಬರಮಾಡಿಕೊಂಡಿರುವ ಸಂಕೇತವಾಗಿದೆ ಎಂದು ಹೇಳಲಾಗುತ್ತಿದೆ.

ಉದಯಪುರದಲ್ಲಿ ಖಾಸಗಿ ಸಮಾರಂಭ

ವಿಜಯ್ ಮತ್ತು ರಶ್ಮಿಕಾ ತಮ್ಮ ಮದುವೆಯನ್ನು ಅತ್ಯಂತ ಖಾಸಗಿಯಾಗಿ ಇಡಲು ನಿರ್ಧರಿಸಿದ್ದಾರೆ. ಕೇವಲ ಆಪ್ತ ಕುಟುಂಬದ ಸದಸ್ಯರು ಮತ್ತು ಆಯ್ದ ಸ್ನೇಹಿತರಿಗಾಗಿ ಉದಯಪುರದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅತಿಥಿಗಳಿಗಾಗಿ ಜಪಾನೀಸ್ ಶೈಲಿಯ ಭೋಜನ ಕೂಟ ಹಾಗೂ ಮನರಂಜನೆಗಾಗಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಸಮಾರಂಭದ ಫೋಟೋಗಳು ಹೊರಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದರೂ, ಅಭಿಮಾನಿಗಳ ಕುತೂಹಲ ಮಾತ್ರ ಕಡಿಮೆಯಾಗಿಲ್ಲ.

‘ಗೀತಾ ಗೋವಿಂದಂ’ ನಿಂದ ‘ವಿರೋಶ್’ ವರೆಗೆ…

2018ರಲ್ಲಿ ಬಿಡುಗಡೆಯಾದ ‘ಗೀತಾ ಗೋವಿಂದಂ’ ಚಿತ್ರದ ಸೆಟ್‌ನಲ್ಲಿ ಈ ಜೋಡಿಯ ಪರಿಚಯವಾಗಿತ್ತು. ಅವರ ತೆರೆಯ ಮೇಲಿನ ಕೆಮಿಸ್ಟ್ರಿ ‘ಡಿಯರ್ ಕಾಮ್ರೇಡ್’ ಚಿತ್ರದ ಮೂಲಕ ಮತ್ತಷ್ಟು ಗಟ್ಟಿಯಾಯಿತು. ಅಂದಿನಿಂದ ಇಂದಿನವರೆಗೆ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರೂ, ಇಬ್ಬರೂ ಈ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಆದರೆ ಫೆಬ್ರವರಿ 22 ರಂದು ಅಭಿಮಾನಿಗಳು ಪ್ರೀತಿಯಿಂದ ನೀಡಿದ ‘ವಿರೋಶ್’ (Vi-Rash) ಹೆಸರಿನಲ್ಲೇ ಮದುವೆಯನ್ನು ಘೋಷಿಸಿ ಸರ್ಪ್ರೈಸ್ ನೀಡಿದ್ದರು.

ಹೈದರಾಬಾದ್‌ನಲ್ಲಿ ಅದ್ಧೂರಿ ರಿಸೆಪ್ಷನ್

ಉದಯಪುರದ ಮದುವೆ ಖಾಸಗಿಯಾಗಿದ್ದರೂ, ಚಿತ್ರರಂಗದ ಗಣ್ಯರಿಗಾಗಿ ಹೈದರಾಬಾದ್‌ನಲ್ಲಿ ಭರ್ಜರಿ ಔತಣಕೂಟ ನಡೆಯಲಿದೆ. ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ (Reception) ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ತೆಲುಗು ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರು ಹಾಗೂ ತಾಂತ್ರಿಕ ವರ್ಗದವರು ಭಾಗವಹಿಸುವ ನಿರೀಕ್ಷೆಯಿದೆ.

 

 

Exit mobile version