ವಲವಾರ ಮೆಚ್ಚಿದ ಚಿತ್ರರಂಗ.. ಹೊಸಬರ ಸಿನಿಮಾಗೆ ಜೈ ಎಂದ ಕವಿರಾಜ್

Untitled design 2026 02 08T115717.760

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಪ್ರತಿಭೆಗಳ ಅಬ್ಬರ ಜೋರಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ ‘ವಲವಾರ’. ಸುತನ್ ಗೌಡ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಈಗ ಸ್ಯಾಂಡಲ್‌ವುಡ್‌ನ ಖ್ಯಾತ ನಟರು ಬೆಂಬಲವಾಗಿ ನಿಂತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗಾಗಲೇ ಚಿತ್ರವನ್ನು ಮೆಚ್ಚಿಕೊಂಡಿದ್ದು, ಈಗ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಕೂಡ ಈ ಸಿನಿಮಾದ ತಾಕತ್ತಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಬೆಂಗಳೂರಿನ ರೇಣುಕಾ ಸ್ಟುಡಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕವಿರಾಜ್, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಈ ಚಿತ್ರದಲ್ಲಿ ಕೆಲಸ ಮಾಡಿಲ್ಲ, ಆದರೂ ಇದರ ಪರವಾಗಿ ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಸಿನಿಮಾ ಋಣ. ಕಳೆದ 25 ವರ್ಷಗಳಿಂದ ನಾನು ಉಣ್ಣುವ ಅನ್ನ, ಹಾಕುವ ಬಟ್ಟೆ ಎಲ್ಲವನ್ನೂ ಸಿನಿಮಾ ನೀಡಿದೆ. ಹೊಸಬರು ಚೆನ್ನಾಗಿ ಸಿನಿಮಾ ಮಾಡಿದಾಗ ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ಹೇಳಿದರು.

‘ವಲವಾರ’ ಚಿತ್ರವನ್ನು ವೀಕ್ಷಿಸಿದ ಕವಿರಾಜ್, ಈ ಚಿತ್ರವನ್ನು ನೋಡಿದ ನಂತರ ನಿಮ್ಮಲ್ಲಿ ಮಾನವೀಯತೆ ಮತ್ತು ಬದುಕಿನ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ಮಲೆನಾಡಿನ ನದಿಯಂತೆ ಸುಲಲಿತವಾಗಿ ಸಾಗುವ ಈ ಕಥೆಯಲ್ಲಿ ಎಲ್ಲೂ ತಪ್ಪು ಹುಡುಕಲು ಸಾಧ್ಯವಾಗಲಿಲ್ಲ. ಇದು ಕೇವಲ ಸಿನಿಮಾ ಅಲ್ಲ, ನಮ್ಮ ಹೆಮ್ಮೆಯ ಸಿನಿಮಾ ಆಗುವ ಎಲ್ಲ ತಾಕತ್ತನ್ನು ಹೊಂದಿದೆ ಎಂದು ಹೊಗಳಿದರು. ಅಲ್ಲದೆ, ಚಿತ್ರದ ಪ್ರಚಾರಕ್ಕಾಗಿ ಒಂದು ಶೋ ಅನ್ನು ಸ್ವತಃ ಸ್ಪಾನ್ಸರ್ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು.

ನಿರ್ದೇಶಕ ಸುತನ್ ಗೌಡ ಅವರು ಚಿತ್ರದ ಜರ್ನಿ ಬಗ್ಗೆ ಮಾತನಾಡುತ್ತಾ, ಈ ಸಿನಿಮಾದ ಕಥೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕೇಳಿ ಬಹಳ ಇಷ್ಟಪಟ್ಟಿದ್ದರು. ತಮ್ಮ ಪಿಆರ್‌ಕೆ (PRK) ಪ್ರೊಡಕ್ಷನ್ ಅಡಿಯಲ್ಲೇ ಈ ಸಿನಿಮಾ ಮಾಡಲು ಅವರು ಉತ್ಸುಕರಾಗಿದ್ದರು. ಅಪ್ಪು ಸರ್ ಅಗಲಿಕೆಯ ನಂತರ ಹೊಸ ನಿರ್ಮಾಪಕರು ಈ ಚಿತ್ರಕ್ಕೆ ಆಸರೆಯಾದರು ಎಂದು ನೆನಪಿಸಿಕೊಂಡರು.

ಈ ಚಿತ್ರಕ್ಕಾಗಿ ತಾನು ಯಾವುದೇ ಸಂಭಾವನೆ ಪಡೆದಿಲ್ಲ ಎಂದು ಹೇಳಿದ ಸುತನ್ ಗೌಡ, ಒಳ್ಳೆಯ ಕಥೆಯನ್ನು ಜನರಿಗೆ ತಲುಪಿಸುವುದಷ್ಟೇ ನಮ್ಮ ಉದ್ದೇಶ. ಇದು ಪಕ್ಕಾ ಕಮರ್ಷಿಯಲ್ ಮತ್ತು ಎಮೋಷನಲ್ ಸಿನಿಮಾ ಎಂದರು.

ಮಾರ್ಫ್ ಪ್ರೊಡಕ್ಷನ್ ಅಡಿಯಲ್ಲಿ ಮೂಡಿಬಂದಿರುವ ‘ವಲವಾರ’ ಚಿತ್ರದಲ್ಲಿ ಮಾಸ್ಟರ್ ವೇದಿಕ್ ಕೌಶಲ್, ಮಾಸ್ಟರ್ ಶಯನ್, ಮಾಲತೇಶ್, ಹರ್ಷಿತಾ ಗೌಡ ಮತ್ತು ಅಭಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಹಿತವಾದ ಸಂಗೀತವಿದ್ದು, ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ. ಬಾಲರಾಜ್ ಗೌಡ ಅವರ ಛಾಯಾಗ್ರಹಣ ಮಲೆನಾಡಿನ ಸೌಂದರ್ಯವನ್ನು ಸೆರೆಹಿಡಿದಿದೆ.

ಜನವರಿ 30ರಂದು ಬಿಡುಗಡೆಯಾಗಿರುವ ‘ವಲವಾರ’ ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದೆ.

Exit mobile version