ಮಣಿರತ್ನಂ ನಿರ್ದೇಶನದ ಪ್ರಸಿದ್ಧ ಚಿತ್ರ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಮತ್ತು ಅದರ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸಿನಿಮಾದ ‘ವೀರ ರಾಜ ವೀರ’ ಹಾಡಿಗೆ ಸಂಬಂಧಿಸಿದಂತೆ ಹೂಡಲಾದ ಕೃತಿಚೌರ್ಯದ ದೂರಿನಲ್ಲಿ, ದೆಹಲಿ ಹೈಕೋರ್ಟ್ ಇತ್ತೀಚೆಗೆ ತೀರ್ಪು ಪ್ರಕಟಿಸಿದ್ದು, ಎಆರ್ ರೆಹಮಾನ್ ಅವರಿಗೆ ಹಾಗೂ ನಿರ್ಮಾಪಕರಿಗೆ ಹಿನ್ನಡೆ ಉಂಟುಮಾಡಿದೆ.
‘ವೀರ ರಾಜ ವೀರ’ ಎಂಬ ಹಾಡಿನ ವಿರುದ್ಧ ಉಸ್ತಾದ್ ಫಯಾಜ್ ಡಾಗರ್ ಅವರು ಕೃತಿಚೌರ್ಯದ ಆರೋಪ ಹೂಡಿದ್ದರು. ಡಾಗರ್ ಅವರ ಪ್ರಕಾರ, ಈ ಹಾಡಿನಲ್ಲಿ ಬಳಕೆಯಾದ ರಾಗ, ಬೀಟ್ ಹಾಗೂ ಸಂಗೀತವು, ಅವರ ತಂದೆ ಉಸ್ತಾದ್ ಫೈಯಾಜುದ್ದೀನ್ ಮತ್ತು ಚಿಕ್ಕಪ್ಪ ಉಸ್ತಾದ್ ಜಹೀರುದ್ದೀನ್ ಕಂಪೋಸ್ ಮಾಡಿದ್ದರು. ಇದನ್ನು ಶಿವಸ್ತುತಿಯಿಂದ ನೇರವಾಗಿ ನಕಲು ಮಾಡಲಾಗಿದೆ. ಮೂಲ ಸಂಯೋಜನೆಯ ಯಾವುದೇ ಬದಲಾವಣೆ ಇಲ್ಲದೆ ಬಳಸಲಾಗಿದೆ ಎಂದು ಅವರು ದೂರಿದ್ದಾರೆ.
ಈ ದೂರಿನ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಎಆರ್ ರೆಹಮಾನ್ ಮತ್ತು ನಿರ್ಮಾಪಕರ ವಿರುದ್ಧ ತೀರ್ಪು ನೀಡಿದೆ. ನ್ಯಾಯಾಲಯ, ಇಬ್ಬರಿಗೂ ಒಟ್ಟಾರೆ ಎರಡು ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದ್ದು, ಜೊತೆಗೆ ಉಸ್ತಾದ್ ಡಾಗರ್ ಕುಟುಂಬಕ್ಕೆ ನ್ಯಾಯಮುಖಾಂತರ ವೆಚ್ಚಗಳಿಗೆ ಎರಡೂ ಲಕ್ಷ ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸುವಂತೆ ಆದೇಶಿಸಿದೆ.
ಇದೇ ಅಲ್ಲದೆ, ಹೈಕೋರ್ಟ್ ಮತ್ತೊಂದು ಪ್ರಮುಖ ಸೂಚನೆಯನ್ನು ನೀಡಿದ್ದು, ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಪ್ರದರ್ಶನವಾಗುತ್ತಿರುವ ಎಲ್ಲ ವೇದಿಕೆಗಳಲ್ಲಿ ಮೂಲ ಅವರ ಹೆಸರನ್ನು ತಪ್ಪದೇ ಉಲ್ಲೇಖಿಸುವಂತೆ ನಿರ್ದೇಶನ ಮಾಡಿದೆ. ಇದರಿಂದಾಗಿ ಈಗಿನಿಂದ ಸಿನಿಮಾ ಅಥವಾ ಅದರ ಹಾಡುಗಳನ್ನು ಕೇಳುವಾಗ, ಮೂಲ ಸಂಗೀತ ಸಂಯೋಜಕರ ಕ್ರೆಡಿಟ್ ಸಹ ಕಾಣಸಿಗಲಿದೆ.
‘ಪೊನ್ನಿಯಿನ್ ಸೆಲ್ವನ್’ ಚಲನಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರೆ, ಎರಡೂ ಭಾಗಗಳಿಗೂ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಹಲವಾರು ಹಾಡುಗಳಿದ್ದು, ಅವುಗಳಲ್ಲಿ ಒಂದು ಹಾಡಿನ ಮೇಲೆ ಕೃತಿಚೌರ್ಯದ ಆರೋಪ ಇದ್ದು, ಚಿತ್ರದ ಖ್ಯಾತಿಯ ಮೇಲೆ ಧಕ್ಕೆ ತಂದಿದೆ.
ಈ ತೀರ್ಪಿನ ವಿರುದ್ಧ ಎಆರ್ ರೆಹಮಾನ್ ಹಾಗೂ ಚಿತ್ರತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದೆಂಬ ನಿರೀಕ್ಷೆಯಿದೆ. ಅವರು ಮುಂದಿನ ಹಂತದಲ್ಲಿ ತೀರ್ಪು ಪ್ರಶ್ನಿಸುವ ನಿರ್ಧಾರ ತೆಗೆದುಕೊಳ್ಳಲಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.





